ದಸರಾ ಆನೆಗಳ ತೂಕ ಪರೀಕ್ಷೆ: ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಈ ಬಾರಿಯ ತೂಕವೆಷ್ಟು..?
ಮೈಸೂರು ಸೆಪ್ಟೆಂಬರ್ 06: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಅರಮನೆಗೆ ಆಗಮಿಸಿದ ಆನೆಗಳ ತೂಕವನ್ನು ಬುಧವಾರ ಪರೀಕ್ಷಿಸಲಾಯಿತು. ಅಂಬಾರಿ ಹೊರುವ ಅಭಿಮನ್ಯು ತನ್ನ ತೂಕವನ್ನು ಸ್ವಲ್ಪ ವ್ಯತ್ಯಾಸದಲ್ಲಿ ಕಳೆದ ವರ್ಷದಷ್ಟೇ ತೂಕ ಕಾಯ್ದುಕೊಂಡಿದ್ದಾನೆ.
ಮೈಸೂರಿನಲ್ಲಿ ಈಗಾಗಲೇ ದಸರಾ ಸಂಭ್ರಮ ಕಳೆಗಟ್ಟುತ್ತಿದ್ದು, ನಾಡಹಬ್ಬಕ್ಕೆ ಸಿದ್ಧತೆಗಳು ಆರಂಭಗೊಂಡಿದೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅರ್ಜುನ, ಧನಂಜಯ, ಮಹೇಂದ್ರ, ಭೀಮ, ವಿಜಯ, ಗೋಪಾಲಸ್ವಾಮಿ, ಕಂಜನ್, ಗೋಪಿ, ವರಲಕ್ಷ್ಮೀ ಸೇರಿದಂತೆ ಒಂಭತ್ತು ಆನೆಗಳನ್ನು ಅರಮನೆಯಿಂದ ಪೊಲೀಸ್ ಬೆಂಗಾವಲಿನೊಂದಿಗೆ ತೂಕ ಪರೀಕ್ಷೆಗೆ ಕರೆದೊಯ್ಯಲಾಯಿತು.

ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ವಾರ್ತಾ ಇಲಾಖೆ ಸಮೀಪದ ಶ್ರೀಸಾಯಿ ವೇ ಬ್ರಿಡ್ಜ್ನಲ್ಲಿ ಇವುಗಳ ತೂಕದ ಗಣನೆ ನಡೆಯಿತು. ಬಳಿಕ ಅವುಗಳನ್ನು ಮತ್ತೆ ಅರಮನೆಗೆ ಕರೆತರಲಾಯಿತು. ಇನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ದಸರಾ ಮೆರವಣೆಗೆ ತಾಲೀಮು ಆರಂಭವಾಗಲಿದೆ.
ಅಭಿಮನ್ಯು ಬಲಶಾಲಿ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಅಂಗವಾಗಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯ ತೂಕ ಪರಿಶೀಲನೆ ಸುಸೂತ್ರವಾಗಿ ನಡೆಯಿತು. ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಗಜಪಡೆಯ ತೂಕ ಪರಿಶೀಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಸರಾ ಆನೆಗಳ ತೂಕದ ವಿವರ ಈ ಕೆಳಕಂಡಂತಿದೆ
ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು - 5,160 ಕೆ.ಜಿ ತೂಕದ ಮೂಲಕ ಬಲಶಾಲಿ ಎನಿಸಿಕೊಂಡಿದ್ದಾನೆ. ಉಳಿದಂತೆ ವಿಜಯ-2,830 ಕೆ ಜಿ, ಭೀಮ - 4,370 ಕೆ.ಜಿ, ವರಲಕ್ಷ್ಮಿ- 3,020 ಕೆ.ಜಿ, ಮಹೇಂದ್ರ - 4,530 ಕೆ.ಜಿ, ಧನಂಜಯ - 4,940 ಕೆ.ಜಿ, ಕಂಜನ್ - 4,240 ಕೆ.ಜಿ, ಗೋಪಿ - 5,080 ಕೆ.ಜಿ ತೂಕ ಇವೆ ಎನ್ನುವುದು ತಿಳಿದು ಬಂದಿದೆ.

ವಿಶೇಷ ಆಹಾರ ಆರಂಭ
ದಸರೆ ಆನೆಗಳಿಗೆ ವಿಶೇಷ ಆಹಾರ ನೀಡುವ ಪ್ರಕ್ರಿಯೆ ಬುಧವಾರದಿಂದಲೇ ಆರಂಭವಾಗಿದೆ. ಇವುಗಳಿಗೆ ಹಸಿ ಹಾಗೂ ಒಣ ಹುಲ್ಲು, ಕಬ್ಬು, ಬೆಲ್ಲ, ತೆಂಗಿನಕಾಯಿ, ಹುರುಳಿ, ಬೆಣ್ಣೆಯಂಥ ಬಗೆ ಬಗೆಯ ಆಹಾರ ನೀಡಲಾಗುತ್ತಿದೆ. ಇದು ಎರಡು ಹೊತ್ತು ಇರಲಿದೆ. ಪೌಷ್ಟಿಕ ಆಹಾರ 5ರಿಂದ 10 ಕೆಜಿಯಷ್ಟು ಪ್ರತಿನಿತ್ಯ ಒದಗಿಸಿದರೆ ಆಲದ ಸೊಪ್ಪು ಯಥೇಚ್ಛವಾಗಿ ನೀಡಲಾಗುತ್ತದೆ. ಆನೆಗಳ ಆಹಾರ ಹಾಗೂ ನಿರ್ವಹಣೆಯಾಗಿಯೇ ಅರಣ್ಯ ಇಲಾಖೆ 25 ಲಕ್ಷ ರೂ.ಗಳನ್ನು ವೆಚ್ಚ ಮಾಡುತ್ತಿದೆ.












Click it and Unblock the Notifications