ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು: ಮರದ ಅಂಬಾರಿ ಕಟ್ಟೋದು ಹೇಗೆ?
ಮೈಸೂರು, ಅಕ್ಟೋಬರ್ 11: ನಾಡ ಹಬ್ಬ ದಸರೆಯ ಆಕರ್ಷಕಣೆ ಜಂಬೂಸವಾರಿಯಲ್ಲಿ ಸಾಗುವ ಗಜಪಡೆಗಳ ತಾಲೀಮು ದಿನದಿಂದ ದಿನಕ್ಕೆ ಬದಲಾಗುತ್ತಾ, ಕಠಿಣವಾಗುತ್ತಾ ಹೋಗುತ್ತಿದೆ. ಜಂಬೂಸವಾರಿಗೆ ಕೆಲವೇ ದಿನಗಳು ಬಾಕಿ ಇರುವುವರಿಂದ ಇದೀಗ ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿಯ ತಾಲೀಮು ಆರಂಭಿಸಲಾಗಿದ್ದು, ಅದು ಯಶಸ್ವಿಯಾಗಿ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ.
ಕಳೆದೆರಡು ದಿನಗಳಿಂದ ಆರಂಭಗೊಂಡಿರುವ ಮರದ ಅಂಬಾರಿಯ ತಾಲೀಮು ಜಂಬೂಸವಾರಿಯ ಹಿಂದಿನ ದಿನದವರೆಗೆ ನಡೆಯಲಿದೆ. ಇದೀಗ ಪ್ರತಿದಿನ ಮರದ ಅಂಬಾರಿಯನ್ನು ಅಭಿಮನ್ಯು ಬೆನ್ನಿಗೆ ಕಟ್ಟಿ ತಾಲೀಮು ನಡೆಸುತ್ತಿದ್ದು, ಇದನ್ನು ನೈಪುಣ್ಯ ಹೊಂದಿದ ಮಾವುತರು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಲಾಗುತ್ತಿದೆ. ಮೊದಲ ದಿನವಾದ ಸೋಮವಾರ ಸಂಜೆ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 750 ಕೆಜಿ ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದೆ.

ಸುಮಾರು 280 ಕೆ.ಜಿ ತೂಕದ ಮರದ ಅಂಬಾರಿ, 400 ಕೆ.ಜಿ ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 750ಕ್ಕೂ ಹೆಚ್ಚಿನ ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ 5 ಕಿ.ಮೀ ದೂರವನ್ನು ಯಶಸ್ವಿಯಾಗಿ ಪೂರೈಸಿದೆ. ಇನ್ನು ಅಭಿಮನ್ಯು ಮರದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮಿ, ವಿಜಯ ಸಾಥ್ ನೀಡಿವೆ. ಅಷ್ಟೇ ಅಲ್ಲದೆ ಗಂಡಾನೆಗಳಾದ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ರೋಹಿತ್, ಹೆಣ್ಣಾನೆಗಳಾದ ಲಕ್ಷ್ಮಿ, ಹಿರಣ್ಯಾ ಕೂಡ ಭಾಗವಹಿಸಿ ಗಮನಸೆಳೆದವು. ಮೊದಲ ದಿನ ಮಳೆಯಲ್ಲಿಯೇ ಗಜಪಡೆಯ ತಾಲೀಮು ನಡೆದಿದೆ.
ಮರದ ಅಂಬಾರಿ ಕಟ್ಟೋದು ಹೇಗೆ?
ಇನ್ನು ಮರದ ಅಂಬಾರಿಯನ್ನು ಹೇಗೆ ಕಟ್ಟಲಾಗುತ್ತದೆ ಎಂಬುದನ್ನು ತಿಳಿಯುವುದಾದರೆ , ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಆ ಮೆತ್ತನೆಯ ಹೊದಿಕೆ ಮೇಲೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊದಿಸಲಾಗುತ್ತದೆ. ಇದನ್ನು ಸುಮಾರು ಸುಮಾರು 80 ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ಬಟ್ಟೆ (ಛಾಪು)ಯನ್ನು ಹೊದಿಸಲಾಗುತ್ತದೆ. ಇದರ ಮೇಲೆ ಮರಳಿನ ಮೂಟೆಯಿಟ್ಟು ಅದರ ಮೇಲೆ ಮರದ ಅಂಬಾರಿಯನ್ನಿರಿಸಿ ಕಟ್ಟಲಾಗುತ್ತದೆ.

ಮರದ ಅಂಬಾರಿಯನ್ನು ಹೊತ್ತು ಅಭಿಮನ್ಯು ಯಾವುದೇ ತೊಂದರೆಯಿಲ್ಲದೆ ನಿರಾಳವಾಗಿ ಬನ್ನಿಮಂಟಪದವರೆಗೆ ಸಾಗುವ ಮೂಲಕ ಚಿನ್ನದ ಅಂಬಾರಿ ಹೊರಲು ಸಿದ್ಧ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಹೀಗಾಗಿ ಅರಣ್ಯಾಧಿಕಾರಿಗಳು ನಿರಾಳರಾಗಿದ್ದಾರೆ. ಮರದ ಅಂಬಾರಿಯನ್ನು ಹೊತ್ತ ಅಭಿಮನ್ಯು ಸುಮಾರು ಐದು ಕಿಲೋ ಮೀಟರ್ ದೂರವನ್ನು ಕ್ರಮಿಸಿದ್ದಾನೆ. ಮರದ ಅಂಬಾರಿ ತಾಲೀಮಿಗೂ ಮುನ್ನ ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯು ಮೇಲೆ ಮರದ ಅಂಬಾರಿಯನ್ನು ಕಟ್ಟಲಾಯಿತು.
ಗಜಪಡೆಗಳಿಗೆ ವಿಶೇಷ ಪೂಜೆ
ಇದೇ ವೇಳೆ ಅರ್ಚಕ ಪ್ರಹ್ಲಾದ್ ರಾವ್ ಗಜಪಡೆಗೆ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೆ ಆನೆಗಳ ಪಾದ ತೊಳೆದು ಪಾದದ ಬಳಿ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಬೆನ್ನಿನ ಮೇಲೆ ನೂರಾರು ಕೆಜಿ ಭಾರ ಹೊತ್ತಿದ್ದರೂ ರಾತ್ರಿಯಾದರೂ ರಾಜಗಾಂಭೀರ್ಯದಿಂದ ವಿದ್ಯುತ್ ದೀಪದ ಬೆಳಕಿನಲ್ಲಿ ಹೆಜ್ಜೆ ಹಾಕಿದ್ದು ವಿಶೇಷ. ಇದೇ ವೇಳೆ ರಾಜಪಥದಲ್ಲಿದ್ದ ನೂರಾರು ಮಂದಿ ಆನೆಗಳ ತಾಲೀಮನ್ನು ಕಣ್ತುಂಬಿಕೊಂಡು ಖುಷಿ ಪಟ್ಟಿದ್ದಾರೆ.

ಮರದ ಅಂಬಾರಿ ತಾಲೀಮು ಇನ್ನು ಮುಂದೆ ಪ್ರತಿದಿನವೂ ನಡೆಯಲಿದ್ದು, ಈ ಸುಂದರ ದೃಶ್ಯವನ್ನು ನೋಡಲು ಜನರು ನಗರದ ಗಜಪಡೆ ತೆರಳುವ ರಾಜಮಾರ್ಗದಲ್ಲಿ ನೆರೆಯುತ್ತಾರೆ. ಇನ್ನು ಗಜಪಡೆ ವಿದ್ಯುತ್ ಬೆಳಕಿಗೆ ಹೊಂದಿಕೊಳ್ಳುತ್ತಿವೆ. ಇದರ ನಡುವೆ ಸಿಡಿಮದ್ದಿನ ತಾಲೀಮು ನಡೆಸುವುದು ಬಾಕಿ ಉಳಿದಿದೆ. ಸಿಡಿಮದ್ದಿನ ತಾಲೀಮನ್ನು ಗಜಪಡೆ ಮತ್ತು ಅಶ್ವರೋಹಿ ದಳದ ಕುದುರೆಗಳಿಗೆ ಜೊತೆಯಲ್ಲೇ ನಡೆಸಲಾಗುತ್ತದೆ. ಅದಕ್ಕಾಗಿ ತಯಾರಿ ನಡೆಯುತ್ತಿದೆ.
ಸರ್ವ ರೀತಿಯಲ್ಲಿ ಗಜಪಡೆ ಸಜ್ಜು
ಒಟ್ಟಾರೆಯಾಗಿ ಹೇಳಬೇಕೆಂದರೆ ಜಂಬೂಸವಾರಿಯ ರೂವಾರಿಗಳಾದ ಗಜಪಡೆ ದಸರಾವನ್ನು ಯಶಸ್ವಿಗೊಳಿಸಲು ಸಜ್ಜಾಗುತ್ತಿವೆ. ಇಲ್ಲಿರುವ ಎಲ್ಲ ಆನೆಗಳಿಗೂ ತನ್ನದೇ ಆದ ಜವಬ್ದಾರಿಯನ್ನು ನೀಡಲಾಗುತ್ತಿದ್ದು, ಅದನ್ನು ಅವುಗಳು ನಿರ್ವಹಿಸುವುದರೊಂದಿಗೆ ದಸರಾ ದಿನದಂದು ಕೋಟ್ಯಂತರ ಜನರು ನೋಡಿ ಖುಷಿಪಡುವಂತೆ ಜಂಬೂಸವಾರಿಯನ್ನು ಯಶಸ್ವಿಗೊಳಿಸಲಿವೆ.












Click it and Unblock the Notifications