ಮೈಸೂರು ದಸರಾ; ಗಜಪಡೆಗಳ ತಾಲೀಮು ಆರಂಭ
ದಾವಣಗೆರೆ, ಸೆಪ್ಟೆಂಬರ್ 19; ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2021ರ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರೆಯ ಸಂಭ್ರಮಕ್ಕೆ ಈಗಾಗಲೇ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಯುತ್ತಿದ್ದು, ಅರಮನೆ ಆವರಣದಲ್ಲಿ ದಸರಾ ಜಂಬೂ ಸವಾರಿಯ ಪೂರ್ವ ಸಿದ್ಧತೆ ತಯಾರಿ ಕಳೆಗಟ್ಟುತ್ತಿದೆ.
ಭಾನುವಾರದಿಂದ ಅರಮನೆ ಮುಂಭಾಗದ ಆವರಣದಲ್ಲಿ ದಸರಾ ಆನೆಗಳಿಗೆ ಭರ್ಜರಿ ತಾಲೀಮು ಆರಂಭವಾಗಿದ್ದು, ಅರಮನೆ ಮುಂಭಾಗದ ಆವರಣದಲ್ಲಿಂದು ಜಂಬೂಸವಾರಿಗಾಗಿ ಗಜಪಡೆ ಪೂರ್ವ ತಾಲೀಮು ನಡೆಸಿದೆ. ಈ ಬಾರಿಯೂ 'ಅಭಿಮನ್ಯು' ದಸರಾ ಅಂಬಾರಿ ಹೊರಲಿದ್ದು, ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಆನೆಗಳು ತಾಲೀಮು ನಡೆಸಿವೆ.
ಕೋವಿಡ್ ಕಾರಣದಿಂದಾಗಿ ಅರಮನೆ ಆವರಣಕ್ಕೆ ಮಾತ್ರ ಸಿಮೀತವಾಗಿ ಜಂಬೂ ಸವಾರಿ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಗಜಪಡೆಗಳ ತಾಲೀಮು ಸಹ ಅರಮನೆ ಆವರಣಕ್ಕೆ ಸೀಮಿತವಾಗಿದೆ. ಮೊದಲ ದಿನದ ತಾಲೀಮನ್ನು 8 ಆನೆಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ.

ಕೋವಿಡ್ ಕಾರಣದಿಂದಾಗಿ ಈ ಬಾರಿ ಮೈಸೂರಿನ ರಾಜ ಬೀದಿಯಲ್ಲಿ ಪೂರ್ವ ತಾಲೀಮಿಗೆ ತಡೆ ಬಿದ್ದಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಅರಮನೆ ಆವರಣದಲ್ಲೇ ಆನೆಗಳ ತಾಲೀಮು ನಡೆಯುತ್ತಿದೆ. ಕಳೆದ ಬಾರಿಯ ದಸರಾಗಳಲ್ಲಿ ಆನೆಯ ಜೊತೆ ನಿಂತು ಸಾರ್ವಜನಿಕರು ಪೋಟೋಕ್ಕೆ ಪೋಸ್ ನೀಡಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಸಾರ್ವಜನಿಕರು ದಸರಾ ಆನೆಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲಾಗಿದೆ.
ಆನೆಗಳಿಗೆ ಕ್ವಾರಂಟೈನ್; ಮಹಾಮಾರಿ ಕೋವಿಡ್ ಕರಿನೆರಳು ದಸರೆಯ ಮೇಲೂ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಸೋಂಕು ತಗುಲುವ ಭೀತಿಯಿಂದ ಈ ಬಾರಿಯ ದಸರಾ ವೇಳೆ ಅಂಬಾರಿ ಹೊರುವ ಆನೆಗಳನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಪ್ರತಿವರ್ಷ ದಸರಾ ಸಂದರ್ಭದಲ್ಲಿ ಗಜಪಡೆ ಕಾಡಿನಿಂದ ನಾಡಿಗಾಗಮಿಸಿ ಅರಮನೆ ಪ್ರವೇಶಿಸಿದ ಮರು ದಿನ ಆನೆಗಳನ್ನು ತೂಕ ಮಾಡಿಸಲಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಸಹ ಕೊರೊನಾ ಮೂರನೇ ಅಲೆಯ ಆತಂಕ ದೂರವಾಗದ ಪರಿಣಾಮ ಈ ಬಾರಿ ಆನೆಗಳನ್ನು ತೂಕ ಹಾಕಿಸಲು ಸಹ ಅರಮನೆಯಿಂದ ಹೊರಗೆ ಕರೆದೊಯ್ಯಲಾಗುತ್ತಿಲ್ಲ.
ಅರಣ್ಯ ಇಲಾಖೆ ಕೂಡ ಕೆಲ ಕಾರ್ಯ ವಿಧಾನಗಳನ್ನು ಕೈಬಿಟ್ಟಿದ್ದು, ಆನೆಗಳು, ಮಾವುತರು ಹಾಗೂ ಕಾವಾಡಿಗಳೂ ಕೂಡ ಅರಮನೆ ಆವರಣವನ್ನು ಬಿಟ್ಟು ಹೊರಗೆ ತೆರಳದಂತೆ ಕಟ್ಟುನಿಟ್ಟಿನ ನಿಯಗಳನ್ನು ಜಾರಿ ಮಾಡಿದ್ದಾರೆ.
ಈ ನಡುವೆ ದಸರಾ ಗಜಪಡೆಯೊಂದಿಗೆ ಮೈಸೂರು ಅರಮನೆಗೆ ಆಗಮಿಸಿರುವ ಮಾವುತರು, ಕಾವಾಡಿಗಳು, ಸಹಾಯಕರು ಹಾಗೂ ಆನೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಸಿಬ್ಬಂದಿ ಸೇರಿದಂತೆ ಎಲ್ಲರ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಎಲ್ಲರ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.
ಆದರೆ ಸಾಂಪ್ರದಾಯಿಕ ದಸರಾಗೆ ದಿನಗಣನೆ ಆರಂಭವಾಗಿದ್ದು, ದಸರೆಯ ಸಿದ್ಧತೆ ಮಾಡಿಕೊಳ್ಳುವ ಜೊತೆಗೆ ಕೊರೊನಾ ಕಂಟಕ ಎದುರಾಗದಂತೆ ನಿಗಾವಹಿಸಬೇಕಾದ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13ರಂದು ಕಾಡಿನಿಂದ ನಾಡಿಗೆ ಬಂದಿದ್ದ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಸೆಪ್ಟೆಂಬರ್ 16ರಂದು ಸಾಂಪ್ರದಾಯಿಕ ಸ್ವಾಗತದೊಂದಿಗೆ ಅರಮನೆ ಪ್ರವೇಶಿಸಿದ್ದವು.
ಇದಾದ ಕೆಲ ದಿನಗಳವರೆಗೂ ವಿಶ್ರಾಂತಿ ಪಡೆದಿದ್ದ ಆನೆಗಳಿಗೆ ಇಂದಿನಿಂದ ತಾಲೀಮು ನೀಡಲಾಗುತ್ತಿದೆ. ಆರಂಭಿಕವಾಗಿ ಸಾಧಾರಣ ತಾಲೀಮು ಆರಂಭಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಮುಂದಿನ ದಿನಗಳಲ್ಲಿ ಗಜಪಡೆಯ ಸಾರಥಿ ಅಭಿಮನ್ಯುವಿಗೆ ಮರಳಿನ ಮೂಟೆ ಹಾಗೂ ಮರದ ಅಂಬಾರ ಹೊರಿಸಿ ತಾಲೀಮು ನೀಡುತ್ತಾರೆ.
ಇನ್ನೂ ಇದೇ ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಂಡಿರುವ ಅಶ್ವತ್ಥಾಮ ಆನೆ ಸಹ ತಾಲೀಮಿನಲ್ಲಿ ಭಾಗವಹಿಸಿದ್ದ. ಅರಮನೆ ಪ್ರವೇಶಿಸುವ ದಿನದಂದು ವಾಹನಗಳ ಸದ್ದಿಗೆ ಬೆದರಿದ್ದ ಅಶ್ವತ್ಥಾಮ ಇದೀಗ ನಗರದ ವಾತಾವರಣಕ್ಕೆ ಹೊಂದುಕೊಂಡಿದ್ದು, ತಾಲೀಮಿನ ವೇಳೆ ಕೊಂಚವೂ ವಿಚಲಿತನಾಗದೆ ನಿರಾಯಾಸವಾಗಿ ಹೆಜ್ಜೆಹಾಕಿದ.
ಮೊದಲ ದಿನದಂದು ಯಶಸ್ವಿಯಾಗಿ ತಾಲೀಮು ನಡೆಸಿದ ಗಜಪಡೆಗೆ ಸೋಮವಾರದಿಂದ ಮರಳಿನ ಮೂಟೆ ಹೊರಿಸಿ ಅರಮನೆ ಆವರಣದಲ್ಲಿ ತಾಲೀಮು ನೀಡಲಾಗುತ್ತದೆ. ಆದರೆ ಮರಳಿನ ಮೂಟೆ ತಾಲೀಮು ಆರಂಭಿಸುವ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಭಿಮನ್ಯು ನೇತೃತ್ವದ ಗಜಪಡೆಗೆ ಮಧ್ಯಾಹ್ನ 12.10ರಿಂದ ಮರಳಿನ ಮೂಟೆ ಹೊರಿಸಿ ತಾಲೀಮು ನೀಡಲಿದ್ದು, ಇದಕ್ಕೂ ಮುನ್ನ ಬೆಳಗ್ಗೆ 11.30ಕ್ಕೆ ಆನೆಗಳಿಗೆ ಪೂಜೆ ಸಲ್ಲಿಸಲಾಗುವುದು.












Click it and Unblock the Notifications