ಮೈಸೂರು ದಸರಾ 2021; ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭ
ಮೈಸೂರು, ಆಗಸ್ಟ್ 23; ಕೋವಿಡ್ ಪರಿಸ್ಥಿತಿಯ ನಡುವೆಯೇ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಅಕ್ಟೋಬರ್ 7ರಿಂದ 15ರ ತನಕ ಈ ಬಾರಿಯ ದಸರಾ ಮಹೋತ್ಸವ ನಡೆಯಲಿದೆ.
ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ವಿಜಯದಶಮಿ ದಿನದಂದು ನಡೆಯುವ ಜಂಬೂ ಸವಾರಿ. ಅರಣ್ಯ ಇಲಾಖೆ ಈ ಬಾರಿಯ ದಸರಾಕ್ಕೆ ಗಜಪಡೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು 2021ರ ದಸರಾ ಮಹೋತ್ಸವಕ್ಕಾಗಿ 14 ಆನೆಗಳನ್ನು ಗುರುತಿಸಿದ್ದಾರೆ. 11 ಗಂಡು ಮತ್ತು 3 ಹೆಣ್ಣು ಆನೆಗಳ ಪಟ್ಟಿ ತಯಾರು ಮಾಡಲಾಗಿದ್ದು, ಆನೆಗಳ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

ಅರಣ್ಯ ಇಲಾಖೆಯ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ತಂಡ ಮತ್ತಿಗೋಡು, ದುಬಾರೆ ಸೇರಿದಂತೆ ವಿವಿಧ ಆನೆ ಶಿಬಿರಗಳಿಗೆ ಭೇಟಿ ಕೊಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯರಿಂದ ಆನೆಗಳ ಆರೋಗ್ಯದ ಬಗ್ಗೆ ವರದಿ ಕೇಳಿದ್ದಾರೆ.
ಅಭಿಮನ್ಯಯ ಆನೆ ವಿಜಯದಶಮಿಯಂದು ಚಿನ್ನದ ಅಂಬಾರಿ ಹೊರಲಿದ್ದಾನೆ. ಗೋಪಿ, ವಿಕ್ರಮ, ವಿಜಯ ಮತ್ತು ಕಾವೇರಿ ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ. ಉಳಿದಂತೆ ಗೋಪಾಲಕೃಷ್ಣ, ಧನಂಜಯ, ಪ್ರಶಾಂತ, ಹರ್ಷ, ಲಕ್ಷ್ಮಣ, ಚೈತ್ರಾ ಆನೆಗಳನ್ನು ಸಹ ಗುರುತಿಸಲಾಗಿದೆ.
ದಸರಾಗೆ ಆಗಮಿಸುವ ಮಾವುತರು, ಕಾವಾಡಿಗಳಿಗೆ ಕೋವಿಡ್ ಲಸಿಕೆ ನೀಡುವಂತೆ ಈಗಾಗಲೇ ಅರಣ್ಯ ಇಲಾಖೆ ಆರೋಗ್ಯ ಇಲಾಖೆಗೆ ಮನವಿ ಮಾಡಿದೆ. ಕೋವಿಡ್ ಪರಿಸ್ಥಿತಿ ನಡುವೆಯೇ ದಸರಾ ಮತ್ತು ಜಂಬೂ ಸವಾರಿಗೆ ಸಿದ್ಧತೆಗಳನ್ನು ಆರಂಭಿಸಲಾಗಿದೆ.
ಸರಳ ದಸರಾ ಆಚರಣೆ; "ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ಚಿಂತಿಸಲಾಗಿದೆ" ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಕೆಲವು ದಿನಗಳ ಹಿಂದೆ ಹೇಳಿದ್ದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವರು, "ಸರಳ ದಸರ ಆಚರಣೆಗೆ ರೂಪರೇಷೆಗಳನ್ನು ಸಿದ್ದಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೂಪರೇಷೆ ಸಿದ್ದವಾದ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದ್ದರು.
"ಕಳೆದ ವರ್ಷ ದಸರಾ ಆಚರಣೆಗೆ 10 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆ ಪೈಕಿ 7 ಕೋಟಿ ಅನುದಾನ ಉಳಿದಿದೆ. ಈ ವರ್ಷದ ದಸರಾ ಆಚರಣೆಗೆ ಸರ್ಕಾರದ ಅನುಮೋದನೆ ಪಡೆದು, ಆ ಉಳಿದ ಅನುದಾನ ಬಳಸಿಕೊಳ್ಳಲಾಗುವುದು" ಎಂದು ಸಚಿವರು ಹೇಳಿದ್ದರು.
"ಮೈಸೂರು ದಸರಾ ಮಹೋತ್ಸವವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ವರ್ಷವೂ ದಸರಾ ಆಚರಣೆ ಮಾಡಲಾಗುತ್ತದೆ" ಎಂದು ಎಸ್. ಟಿ. ಸೋಮಶೇಖರ್ ತಿಳಿಸಿದ್ದರು.
ಕಳೆದ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಯುವ ದಸರಾ, ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಅರಮನೆ ಆವರಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು.
ಖಾಸಗಿ ದರ್ಬಾರ್ ನೋಡಲು ಜನರ ಭೇಟಿಗೆ ಸಹ ನಿಷೇಧ ಹೇರಲಾಗಿತ್ತು. ಮೈಸೂರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸದಂತೆ ಕ್ರಮ ಕೈಗೊಳ್ಳಲಾಗಿತ್ತು. ಜಂಬೂ ಸವಾರಿ ಸಹ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಸುಮಾರು 200 ಜನರು ಮಾತ್ರ ಜಂಬೂ ಸವಾರಿ ವೀಕ್ಷಣೆ ಮಾಡಿದ್ದರು.
ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 79 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 992. ಜಿಲ್ಲೆಯ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 175261.












Click it and Unblock the Notifications