Mysuru Dasara: ಅಂಬಾರಿ ಹೊರಲು ಅಭಿಮನ್ಯು ತಯಾರಿ; 520 ಕೆಜಿ ಹೊತ್ತು ನಡೆದ ಕ್ಯಾಪ್ಟನ್
ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಸರ್ಕಾರ ಅದ್ದೂರಿಯಾಗಿ ದಸರಾ ಆಚರಿಸಲು ನಿರ್ಧರಿಸಿದ್ದು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದು, ಅದಕ್ಕಾಗಿ ತಾಲೀಮು ನಡೆಸುತ್ತಿದೆ. ತೂಕ ಪರೀಕ್ಷೆ, ಪಾದದ ಲೋಹ ಪರೀಕ್ಷೆಗಳನ್ನು ಮಾಡಿದ್ದು, ಇಂದು ಗಜಪಡೆ ತೂಕ ಹೊತ್ತು ತಾಲೀಮು ನಡೆಸಿದೆ. ಕ್ಯಾಪ್ಟನ್ ಅಭಿಮನ್ಯು 520 ಕೆಜಿ ತೂಕದ ಮರಳು ಮೂಟೆ ಹೊತ್ತು ನಿರಾಯಾಸವಾಗಿ ಬನ್ನಿ ಮಂಟಪ ತಲುಪಿದೆ.
ಈ ಜಂಬೂ ಸವಾರಿಯಲ್ಲಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು ಇದರಲ್ಲಿ ಈಗಾಗಲೇ ಅಭಿಮನ್ಯು, ವರಲಕ್ಷ್ಮೀ, ಲಕ್ಷ್ಮಿ, ಭೀಮ, ಗೋಪಿ, ಧನಂಜಯ, ರೋಹಿತ, ಏಕಲವ್ಯ ಅರಮನೆ ಪ್ರವೇಶಿಸಿವೆ. ಕಂಜನ್ ಆನೆ ಹೊರತು ಪಡಿಸಿ ಉಳಿದೆಲ್ಲ ಆನೆಗಳು ಈಗಾಗಲೇ ತಾಲೀಮು ನಡೆಸಿವೆ.

ಭಾರದ ತಾಲೀಮು ಹೊರುವುದಕ್ಕೂ ಮುನ್ನ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಕೋಡಿಸೋಮೇಶ್ವರ ದೇವಸ್ಥಾನದ ಬಳಿ ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾಗೆ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಮೊದಲಿಗೆ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮ್ದಾ ಹಾಗೂ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಅಭಿಮನ್ಯು ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಲಾಯಿತು.
ನಿರಾಯಾಸವಾಗಿ ಬನ್ನಿಮಂಟಪ ತಲುಪಿದ ಅಭಿಮನ್ಯು
ಭಾರ ಹೊತ್ತು ಅರಮನೆಯಿಂದ ಹೊರಟ ಕ್ಯಾಪ್ಟನ್ ಅಭಿಮನ್ಯು ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿ ಸೈ ಎನಿಸಿಕೊಂಡ. ರಸ್ತೆ ಬದಿಯಲ್ಲಿ ಹೂ, ಹಣ್ಣು ವ್ಯಾಪಾರಿಗಳು ಆನೆಗಳನ್ನು ಕಂಡು ಕೈಮುಗಿದು, ತಮ್ಮಲ್ಲಿರುವ ಹೂ, ಹಣ್ಣುಗಳನ್ನು ಆನೆಗಳಿಗೆ ನೀಡುವ ಮೂಲಕ ಧನ್ಯತೆ ಮೆರೆದರು.

ಡಿಸಿಎ ಡಾ.ಐ.ಬಿ. ಪ್ರಭುಗೌಡ ಮಾತನಾಡಿ, ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆಯಿಲ್ಲ. ಕಂಜನ್ ಆನೆಗೆ ಕಾಲಿನ ನೋವು ಇರುವುದರಿಂದ ವಿಶ್ರಾಂತಿ ನೀಡಲಾಗಿದೆ. ಭಾರವನ್ನು ಹಂತ ಹಂತವಾಗಿ 750 ಕೆಜಿ ಬರುವ ತನಕ ಹೆಚ್ಚಿಸಿ ತಾಲೀಮು ಮಾಡುತ್ತೇವೆ. ಭಾರ ಹೆಚ್ಚಿಸಿದ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.
ಅಕ್ಟೋಬರ್ 3 ರಿಂದ ಅಕ್ಟೋಬರ್ 12ರವರೆಗೆ ಮೈಸೂರು ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದ್ದು, ಪೌಷ್ಠಿಕ ಆಹಾರ ನೀಡಲಾಗುತ್ತಿದೆ.












Click it and Unblock the Notifications