ಮೈಸೂರು ಮೇಯರ್ ಸಂದರ್ಶನ : ನನ್ನಿಂದ ತಪ್ಪಾಗಿದೆ ಕ್ಷಮಿಸಿ
ಮೈಸೂರು, ಜವನರಿ 24 : ಗೊಂದಲ, ಕುತೂಹಲ, ಹೈಡ್ರಾಮಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸಾಕ್ಷಿಯಾಯಿತು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅವರು ನಗರದ ನೂತನ ಮೇಯರ್ ಆಗಿ ಬುಧವಾರ ಆಯ್ಕೆಯಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲೇ ಮುಖಭಂಗ ಉಂಟಾಗಿದೆ. ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಕಮಲಾ ಉದಯ್ ಸೋಲುಕಂಡರು. ಉಪ ಮೇಯರ್ ಸ್ಥಾನ ಜೆಡಿಎಸ್ ಪಾಲಾಗಿದ್ದು, ಇಂದಿರಾ ಮಹೇಶ್ ಆಯ್ಕೆಯಾಗಿದ್ದಾರೆ.
ಕಮಲಾ ಉದಯ್ ಅಧಿಕೃತ ಅಭ್ಯರ್ಥಿ ಎಂದು ಗೊತ್ತಾಗುತ್ತಿದ್ದಂತೆ ಭಾಗ್ಯವತಿ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಬೆಂಬಲ ಅವರಿಗೆ ಸಿಕ್ಕಿತು. 43 ಮತಗಳನ್ನು ಪಡೆದು ಅವರು ನಗರದ ಪ್ರಥಮ ಪ್ರಜೆಯಾದರು.
ಭಾಗ್ಯವತಿ ಅವರ ಮನವೊಲಿಸಲು ಕಾಂಗ್ರೆಸ್ ಶತ ಪ್ರಯತ್ನ ನಡೆಸಿತು. ಆದರೆ, ಕೊನೆ ಕ್ಷಣದ ತನಕ ಅದು ಸಾಧ್ಯವಾಗಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ಮಾತಿನ ಚಕಮಕಿಗೂ ಇಂದಿನ ಮೇಯರ್ ಆಯ್ಕೆ ಚುನಾವಣೆ ಕಾರಣವಾಯಿತು.
ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ ನೂತನ ಮೇಯರ್ ಭಾಗ್ಯವತಿ ಅವರು, 'ನನ್ನಿಂದ ತಪ್ಪಾಗಿದೆ ಕ್ಷಮಿಸಿ' ಎಂದು ಹೇಳಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇಕೆ? ಎಂದು ಅವರು ಉತ್ತರ ನೀಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...

ಮೇಯರ್ ಆಗಿರುವುದು ಸಂತಸ ತಂದಿದೆಯೇ ?
ಮೇಯರ್ ಆಗಬೇಕೆಂಬುದು ನನ್ನ ಬಹು ದಿನಗಳ ಕನಸು. ಬಹಳ ಸಂತಸದಿಂದ ನನಗೆ ವಹಿಸುವ ಕೆಲಸವನ್ನು ನಿರ್ವಹಿಸುತ್ತೇನೆ. ಜನರ ಸೇವೆ ಮಾಡುತ್ತೇನೆ.

ನೀವು ಕಾಂಗ್ರೆಸ್ ಗೆ ದ್ರೋಹ ಬಗೆದ ಹಾಗಿದೆಯಲ್ಲವೇ?
ಖಂಡಿತಾ ನಾನು ಯಾರಿಗೂ ಮೋಸ ಮಾಡಿಲ್ಲ. ಅಭಿವೃದ್ಧಿಗಾಗಿ ಈ ನಿಲುವು ತೆಗೆದುಕೊಂಡೆ. ನನಗೆ ಕಾಂಗ್ರೆಸ್ ನಲ್ಲಿ ಸಾಮಾಜಿಕ ನ್ಯಾಯ ಸಿಗಲಿಲ್ಲ. ನನ್ನ ಮತ್ತು ಮತ್ತೊಬ್ಬರ ನಡುವೆ ಮೇಯರ್ ಗದ್ದುಗೆಗೆ ಸ್ಪರ್ಧೆ ಇತ್ತು. ಅವರಿಗೆ ಅವಕಾಶ ಹೆಚ್ಚಿತ್ತು. ಹಾಗಾಗಿ ನಾನು ಈ ನಿರ್ಧಾರ ತೆಗೆದುಕೊಂಡೆ.

ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಹಠವೇಕೆ ?
ನಮ್ಮದು ಭೋವಿ ಜನಾಂಗ. ನಮ್ಮಲ್ಲಿ ಯಾರು ಕೂಡ ರಾಜ್ಯದ ಇತಿಹಾಸದಲ್ಲಿಯೇ ಅಧಿಕಾರದ ಗದ್ದುಗೆಗೆ ಏರಿರಲಿಲ್ಲ. ಇದೊಂದು ಅವಕಾಶದ ಕಾರಣಕ್ಕಾಗಿಯೇ ನಾನು ಈ ರೀತಿ ನಡೆದುಕೊಂಡೆ. ನನ್ನ ನಿಲುವಿಗೆ ದೇವೇಗೌಡರು, ಕುಮಾರಸ್ವಾಮಿ, ಸಾ.ರಾ. ಮಹೇಶ್ ಸೇರಿದಂತೆ ಎಲ್ಲರೂ ಬೆಂಬಲ ನೀಡಿದರು.

ಸಿದ್ದರಾಮಯ್ಯಗೆ ಮುಖಭಂಗವಾಗಲಿಲ್ಲವೇ?
ನಿಮ್ಮ ನಿಲುವಿನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ
ನನಗೆ ಅವರ ಆಶೀರ್ವಾದ ಬೇಕಿದೆ. ನಾನು ಗೆದ್ದಿದ್ದೇನೆ. ಆದರೆ, ಪಕ್ಷ ಬಿಟ್ಟು ಹೋಗಿಲ್ಲ. ನಾನು ನಮ್ಮ ಭೋವಿ ಜನಾಂಗಕ್ಕೆ ಅವಕಾಶಕ್ಕೋಸ್ಕರ ಈ ನಿಲುವು ತಾಳಿದೆ. ನಮ್ಮ ನಿಗಮದ ಅಧ್ಯಕ್ಷರು, ಜನರು ಎಲ್ಲರೂ ತೆರಳಿ ಮುಖ್ಯಮಂತ್ರಿಗಳನ್ನು ಅವಕಾಶಕ್ಕಾಗಿ ಕೇಳಿಕೊಂಡಿದ್ದರು. ಅವಕಾಶ ಸಿಗದ ಕಾರಣ ನಾನು ಈ ರೀತಿ ಮಾಡಬೇಕಾಯಿತು.

ನಿಮ್ಮನ್ನು ಜೆಡಿಎಸ್ ನಾಯಕರು ಹೈ ಜಾಕ್ ಮಾಡಿದರೆ?
ಇಲ್ಲ ನಾನೇ ತೆರಳಿ ಕೇಳಿಕೊಂಡಿದ್ದು. ಯಾರು ನನ್ನನ್ನು ಹೈ ಜಾಕ್ ಮಾಡಿಲ್ಲ.

ಪಕ್ಷಾಂತರ ನಿಷೇಧ ಕಾಯ್ದೆ ಹೇರಿದರೆ?
ನಾನು ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ. ಅದು ಹೇಗೆ ಪಕ್ಷಾಂತರವಾದೀತು ?. ನಾನು ಕೇಳಿದ್ದು ಸಹಕಾರವಷ್ಟೇ. ನನ್ನಿಂದ ತಪ್ಪಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ. ನನಗೊಂದು ಅವಕಾಶ ಕೊಟ್ಟು ನೋಡಿ.











Click it and Unblock the Notifications