ರಾಷ್ಟ್ರೀಯ ಲೋಕ ಅದಾಲತ್: ಮನಸ್ತಾಪ ಮರೆತು ಒಂದಾದ ಮೈಸೂರಿನ 36 ಜೋಡಿಗಳು
ನಾನಾ ಕಾರಣದಿಂದ ಮನಸ್ತಾಪಗೊಂಡು ಪರಸ್ಪರ ವಿಚ್ಛೇದನ ಬಯಸಿದ್ದ ಮೈಸೂರಿನ 36 ಜೋಡಿಗಳು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ತಮ್ಮ ನಡುವಿನ ಮನಸ್ತಾಪ ಮರೆತು ಮತ್ತೆ ಒಂದಾಗಿದ್ದಾರೆ.
ಮೈಸೂರು, ಫೆಬ್ರವರಿ 13: ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ತಮ್ಮ ನಡುವಿನ ಮನಸ್ತಾಪ ಮರೆತು ಮೈಸೂರು ಜಿಲ್ಲೆಯ 36 ಜೋಡಿಗಳು ಮತ್ತೆ ಒಂದಾಗಿದ್ದು, ವಿಚ್ಛೇದನ ತಿರಸ್ಕರಿಸಿ ಜೊತೆಯಾಗಿ ಬಾಳಲು ಮುಂದಾಗಿದ್ದಾರೆ.
ಮೈಸೂರಿನ ಮಳಲವಾಡಿಯಲ್ಲಿರುವ ಕೋರ್ಟ್ನ ಸಭಾಂಗಣದಲ್ಲಿ ನಡೆದ ಲೋಕ ಅದಾಲತ್ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್. ಸಂಗ್ರೇಶಿ ಲೋಕ ಅದಾಲತ್ನಲ್ಲಿ ಒಂದಾದ ಜೋಡಿಗಳ ಬಗ್ಗೆ ಮಾಹಿತಿ ನೀಡಿದರು.
ನಾನಾ ಕಾರಣದಿಂದ ಮನಸ್ತಾಪಗೊಂಡು ಪರಸ್ಪರ ವಿಚ್ಛೇದನ ಬಯಸಿದ್ದ ದಂಪತಿಗಳನ್ನು ವಕೀಲರ ಮೂಲಕ ಸಂಪರ್ಕಿಸಿ ರಾಜಿ ಸಂಧಾನ ನಡೆಸಿದ ನ್ಯಾಯಾಧೀಶರು, ಒಂದಾಗಿ ಬಾಳುವಂತೆ ಮಾಡಿದರು. ಮೈಸೂರು ನಗರದಲ್ಲಿ 27 ಜೋಡಿ ಒಂದಾದರೆ ಗ್ರಾಮಾಂತರ ಪ್ರದೇಶದಲ್ಲಿ 9 ಜೋಡಿ ಒಂದಾಗಿದ್ದಾರೆ.

ಮೈಸೂರು ನ್ಯಾಯಾಲಯಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾದ 1322 ಪ್ರಕರಣಗಳಿದ್ದು, ಅವುಗಳಲ್ಲಿ 200 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು. ಶನಿವಾರ ನಡೆದ ಅದಾಲತ್ನಲ್ಲಿ 36 ದಂಪತಿಗಳಿಗೆ ಬುದ್ಧಿವಾದ ಹೇಳಿ ಒಟ್ಟಾಗಿ ಮಾಡುವಂತೆ ಮಾಡಲಾಗಿದೆ. ಒಂದಾದ ದಂಪತಿಗಳಿಗೆ ಅದಾಲತ್ನಿಂದ ಸಿಹಿ ನೀಡುವುದರೊಂದಿಗೆ ಹೂ ಗಿಡವನ್ನು ನೀಡಿ ಶುಭ ಹಾರೈಸಲಾಗಿದೆ ಎಂದು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರಿಂದ ಸಿಕ್ಕ ಬುದ್ಧಿ ಮಾತುಗಳು, ವಯೋವೃದ್ಧ ದಂಪತಿ ಬಾಳಿನಲ್ಲಿ ಮತ್ತೆ ದಾಂಪತ್ಯ ಗೀತೆ ಶುರುವಾಗುವಂತೆ ಮಾಡಿದೆ. ಶಂಕರ್ ಮತ್ತು ಯಶೋಧ ದಂಪತಿ ತಮ್ಮ ಇಳಿ ವಯಸ್ಸಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿದ್ದರು. ಆದರೆ ಲೋಕ ಅದಾಲತ್ನಲ್ಲಿ ನಡೆದ ರಾಜಿ ಸಂಧಾನದಿಂದ ಮತ್ತೆ ಒಂದಾಗಿದ್ದಾರೆ. ಒಂದೇ ಮನೆಯಿಂದ ಪ್ರತ್ಯೇಕವಾಗಿ ಬಂದವರು ಒಂದಾಗಿ ಒಟ್ಟಿಗೆ ಮನೆಗೆ ತೆರಳಿ ಹೊಸ ಜೀವನ ಆರಂಭಿಸಿದ್ದಾರೆ. ಇಳಿ ವಯಸ್ಸಿನಲ್ಲಿ ತಮ್ಮಿಬ್ಬರ ನಡುವೆ ಇದ್ದ ಕಲಹವನ್ನು ಮರೆತು ಮತ್ತೆ ಹೊಸ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಕೌಟುಂಬಿಕ ನ್ಯಾಯಾಲಯಗಳ ನ್ಯಾಯಾಧೀಶರಾದ ಗಿರೀಶ್ ಭಟ್,ವೇಲಾ ಕೊಡೆ, ರೋಡಾಲ್ಡ್ ಪೇರೆರಾ, ಮೈಸೂರು ಜಿಲ್ಲಾ ವಕೀಲರ ಸಂಘದ ಮಹದೇವ ಸ್ವಾಮಿ, ಕಾರ್ಯದರ್ಶಿ ಉಮೇಶ್ ಭಾಗಿಯಾಗಿದ್ದರು.












Click it and Unblock the Notifications