ಇನ್ಮುಂದೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದ ಪಾಠ!
ಮೈಸೂರು, ಜನವರಿ 15 : ವಿದ್ಯಾರ್ಥಿಗಳಿಗೆ ಹೊಸ ಅನ್ವೇಷಣೆಗಳನ್ನು ತಿಳಿಸಿಕೊಡುವ ದೃಷ್ಟಿಯಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಹಾಗೂ ತಜ್ಞರನ್ನು ಆಹ್ವಾನಿಸಿ ಅವರಿಂದ ಬೋಧನೆ ಮಾಡಿಸಲು ತೀರ್ಮಾನಿಸಲಾಗಿದೆ.
ವಿಶ್ವದ ಶ್ರೇಷ್ಠ 500 ರಾಂಕಿಂಗ್ ನಲ್ಲಿರುವ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಿಗೆ ಮಾತ್ರ ಅವಕಾಶವಿದ್ದು, ಇವರು 1 ತಿಂಗಳ ಕಾಲ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಇದಕ್ಕಾಗಿ ಮೈಸೂರು ವಿವಿ ಪ್ರಸಕ್ತ ವರ್ಷ 1 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧದಲ್ಲಿರುವ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆದ 2ನೇ ಶಿಕ್ಷಣ ಮಂಡಳಿ ಸಭೆಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅವರು, ಇದಕ್ಕಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಪ್ರವೃತ್ತರಾಗಿರುವುದಾಗಿ ಹೇಳಿದರು.
ಮುಕ್ತ ವಿವಿ ಬಗ್ಗೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು
ಈ ಹಿನ್ನೆಲೆಯಲ್ಲಿ 500 ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಈ ಸಂಬಂಧ ಪತ್ರ ಬರೆಯಲಿದ್ದು, ತಜ್ಞರ ಪಟ್ಟಿ ಕಳುಹಿಸಿಕೊಡುವಂತೆ ಮನವಿ ಮಾಡಲಾಗುವುದು. ಅಲ್ಲಿಂದ ಉತ್ತರ ಬಂದ ಕೂಡಲೇ ಶೈಕ್ಷಣಿಕ ವಿಭಾಗಾವಾರು ಆಯ್ಕೆ ಮಾಡಿ ಆಹ್ವಾನ ನೀಡಲಾಗುವುದು. ಇದಕ್ಕೆ ಯಾವುದೇ ಮಿತಿ ಇಲ್ಲ. ಅವರು ಇಲ್ಲಿಗೆ ಆಗಮಿಸಿ ಬೋಧನೆ ಮಾಡುವ ಎಲ್ಲಾ ಸೌಕರ್ಯಗಳನ್ನು ಮೈಸೂರು ವಿವಿ ಕಲ್ಪಿಸಿಕೊಡಲಿದೆ ಎಂದು ಹೇಮಂತ ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಅನುದಾನ ಮೀಸಲು
ಮುಂದಿನ ಬಜೆಟ್ ನಲ್ಲಿ ಇದಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಮೀಸಲಿಡಲಾಗುವುದು. ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಮೈಸೂರು ವಿವಿಯ ಗುಣಮಟ್ಟವನ್ನೂ ಹೆಚ್ಚಿಸುವುದು ಇದರ ಉದ್ದೇಶ ಎಂದು ಕುಲಪತಿಗಳು ಸ್ಪಷ್ಟಪಡಿಸಿದರು.
ಕೆಎಸ್ಓಯು ದೂರ ಶಿಕ್ಷಣ ಕೋರ್ಸ್, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ!
ಭಾಷೆ ಕಲಿಕೆಗೂ ಪ್ರಾಧಾನ್ಯತೆ ನೀಡಿ
ಈ ಸಂದರ್ಭದಲ್ಲಿ ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ಅವರು, ಭಾಷೆ ಕಲಿಕೆಗೂ ಅಷ್ಟೇ ಪ್ರಾಧಾನ್ಯತೆ ನೀಡಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ವಿವಿಧ ವಿವಿಗಳಲ್ಲಿ ನಿವೃತ್ತರಾಗಿರುವ ಕನ್ನಡ ಪ್ರಾಧ್ಯಾಪಕರು ಹಾಗೂ ವಿಷಯತಜ್ಞರನ್ನು ಕರೆಸಿ ಉಪನ್ಯಾಸ ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು.
ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ
ಕನ್ನಡಕ್ಕೂ ಆದ್ಯತೆ
ಪ್ರೊ.ನೀಲಗಿರಿ ಎಂ.ತಳವಾರ್ ಅವರ ಮನವಿಗೆ ಸ್ಪಂದಿಸಿದ ಕುಲಪತಿ ಪೊ.ಜಿ.ಹೇಮಂತಕುಮಾರ್, ಕನ್ನಡ ಅಧ್ಯಯನ ಸಂಸ್ಥೆಯಿಂದ ಪಸ್ತಾವನೆ ಕಳುಹಿಸಿದರೆ ಇದಕ್ಕೆ ಒಪ್ಪಿಗೆ ನೀಡಲಾಗುವುದು. ಕನ್ನಡಕ್ಕೂ ಆದ್ಯತೆ ನೀಡಲಾಗುವುದು ಎಂದರು.
ಶಿಕ್ಷಣ ಮಂಡಳಿಯ ಪಾತ್ರ ದೊಡ್ಡದಿದೆ
2020 ಜನವರಿಯಲ್ಲಿ ರಾಷ್ಟ್ರೀಯ ಮಾನ್ಯತಾ ಸಮಿತಿ (ನ್ಯಾಕ್) ಮೈಸೂರು ವಿವಿಗೆ ಭೇಟಿ ನೀಡಲಿದ್ದು, ಇದಕ್ಕಾಗಿ ಈಗಿನಿಂದಲೇ ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಮೈಸೂರು ವಿವಿಯನ್ನು ಗ್ರೇಡ್ 1ಕ್ಕೆ ಏರಿಸಿ ದೇಶದ ಮೊದಲ 10 ವಿವಿಗಳ ಸಾಲಿಗೆ ತರಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಣ ಮಂಡಳಿಯ ಪಾತ್ರ ದೊಡ್ಡದಿದೆ. ಇದಕ್ಕೆ ಪ್ರಾಧ್ಯಾಪಕರು, ಡೀನ್, ಶಿಕ್ಷಣ ಮಂಡಳಿ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು. ಇದಕ್ಕಾಗಿ ಪ್ರೊ.ಆಯಿಷಾ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ನೀಡುವ ಪ್ರಾಥಮಿಕ ವರದಿಯನ್ನು ಮುಂದಿನ ಶಿಕ್ಷಣ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ಕುಲಪತಿಗಳು ಹೇಳಿದರು.