ಅರಮನೆ ನಗರಿಯಲ್ಲಿ ಮುಂದುವರಿದ ಮಳೆ
ಮೈಸೂರು, ಮೇ 13: ಮೈಸೂರಿನಲ್ಲಿ ನೆನ್ನೆಯಿಂದ ಬಿಡುವು ಕೊಡದೆ ಸುರಿಯುತ್ತಿರುವ ಮಳೆಯಿಂದ ನಗರದ ಹಲವೆಡೆ ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಶುರುವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಕೆಲವಡೆ ರಸ್ತೆ ಸಂಚಾರ ಅಡ್ಡಿಯಾಗಿದೆ. ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ ಹಿನ್ನೆಲೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮುಂದುವರಿದ ಮಳೆಯಿಂದಾಗಿ ನಗರದಲ್ಲಿ ಶಿಥಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳು ಕುಸಿಯು ಭೀತಿ ಎದುರಾಗಿದೆ.
ಕಳೆದ ಎರಡು ವಾರಗಳಿಂದಲೂ ಸುರಿಯುತ್ತಿರುವ ಮಳೆ
ತುಂತುರು, ಜಿಟಿ ಜಿಟಿ ಮಳೆ ಶುರುವಾಯಿತ್ತಲ್ಲದೇ ಜನತೆಯನ್ನು ಪರದಾಡುವಂತೆ ಮಾಡಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಇದರಿಂದ ನೀರನ್ನು ಹೊರಹಾಕುವಲ್ಲಿ ನಿವಾಸಿಗಳ ಪಾಡು ಹೇಳತೀರಲಾಗಿದೆ. ಗುರುವಾರ ಜಿಲ್ಲೆಯ ಕೆಲವೆಡೆಗೆ ಸೀಮಿತವಾಗಿದ್ದ ಮಳೆ ಶುಕ್ರವಾರ ಜಿಲ್ಲಾದ್ಯಂತ ಬಿದ್ದಿದ್ದು, ಜನ ಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಮಳೆಯೊಂದಿಗೆ ಶೀತಗಾಳಿಯು ಸೇರಿದ್ದರಿಂದ ಸಾಕಷ್ಟು ಚಳಿ ಮನೆ ಮಾಡಿತ್ತು. ಹೀಗಾಗಿ ಒಳಗಿದ್ದ ಸ್ವೆಟರ್, ಜರ್ಕಿನ್, ಬೆಚ್ಚನೆಯ ಟೋಪಿಗಳು ಹೊರ ಬಂದಿದ್ದವು. ಮಳೆಯ ಕಾರಣಕ್ಕೆ ಛತ್ರಿಗಳು ಜನತೆಗೆ ಆಶ್ರಯವಾಗಿದ್ದವು.
ಶಾಲೆ ಮಕ್ಕಳ ಪರದಾಟ: ಶಾಲೆ ಬಿಡುವ ವೇಳೆಗೆ ಮಳೆ ಬೀಳುತ್ತಿದ್ದ ಕಾರಣ ವಿದ್ಯಾರ್ಥಿಗಳು ಸಹ ಮನೆಗೆ ತೆರಳಲು ಸಾಕಷ್ಟು ಪರದಾಡಬೇಕಾಯಿತು. ಪ್ರಮುಖ ರಸ್ತೆಗಳನ್ನು ಹೊರತು ಪಡಿಸಿ, ಉಳಿದ ಸಣ್ಣ, ಪುಟ್ಟ ರಸ್ತೆಗಳು ಕೆಸರುಮಯವಾದ್ದರಿಂದ ಕಾಲ್ನಡಿಗೆಯಲ್ಲಿ ಹೋಗುವವರು, ವಾಹನಗಳಲ್ಲಿ ತೆರಳುವವರು ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಯಿತು. ಶಾಲಾ ಮಕ್ಕಳು ಸರ್ಕಸ್ ಮಾಡುವಂತಾಯಿತು. ಇಂದು ಸಹ ಹೀಗೆ ಮಳೆ ಮುಂದುವರಿಯುವ ಸಾಧ್ಯತೆ ಕಂಡು ಬಂದಿದೆ.

ವ್ಯಾಪಾರಸ್ಥರಿಗೂ ತೊಂದರೆ
ಎರಡು ದಿನಗಳಿಂದ ಬೀಳುತ್ತಿರುವ ಜಿಟಿ ಜಿಟಿ ಮಳೆ ವ್ಯಾಪಾರಸ್ಥರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳಿಗೆ ಎರಡು ದಿನದಿಂದ ಸಾಕಷ್ಟು ನಷ್ಟವಾಗಿದೆ. ಜನ ಸಂಚಾರ ಹೆಚ್ಚು ಇಲ್ಲದಿರುವುದು ಒಂದು ರೀತಿಯಲ್ಲಿ ವ್ಯಾಪಾರದ ಮೇಲೆ ಪರಿಣಾಮ ಬೀರಿದರೆ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ತೊಂದರೆಗೆ ಸಿಲುಕಿದ್ದಾರೆ. ಅದೇ ರೀತಿ ಕಾರ್ಮಿಕರಿಗೂ ಇದೊಂದು ರೀತಿಯಲ್ಲಿ ಹೊಡೆತ ನೀಡಿದೆ.

ರಾಗಿ ಕಟಾವಿಗೆ ಅಡ್ಡಿ: ಜಿಲ್ಲೆಯ ತಾಲೂಕಿನಲ್ಲಿ ಮಳೆ ಕೊರತೆ ನಡುವೆಯೂ ಒಂದಷ್ಟು ರಾಗಿ ಬೆಳೆ ಕಟಾವಿಗೆ ಬಂದಿದೆ. ಆದರೆ, ಅದನ್ನು ಕಟಾವು ಮಾಡುವ ಸಂದರ್ಭದಲ್ಲಿ ಬೀಳುತ್ತಿರುವ ಈ ಮಳೆ, ಆ ಪ್ರಕ್ರಿಯೆಗೆ ಅಡ್ಡಿಯಾಗಿದೆ.












Click it and Unblock the Notifications