ಜಂಬೂಸವಾರಿ ತಡವಾಗಲು ಕಾರಣ ಗೊತ್ತಾ?
ಮೈಸೂರು, ಅ.25: ಐತಿಹಾಸಿಕ ಮೈಸೂರು ದಸರಾ ಮುಗಿದಿದೆ. ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಗಳು ಅವುಗಳ ಶಿಬಿರ ತಲುಪುತ್ತಿವೆ. ಆದರೆ, ಈ ಬಾರಿ ದಸರಾ ಅನೇಕ ಪ್ರಶ್ನೆಗಳನ್ನು ಉಳಿಸಿದೆ.
ಸಾಗರೋಪಾದಿಯಲ್ಲಿ ಬಂದ ಪ್ರವಾಸಿಗರು ಜಂಬೂಸವಾರಿ ವೀಕ್ಷಿಸಿ ಸುತ್ತಮುತ್ತಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಖುಷಿ ಪಡುತ್ತಾ ತಮ್ಮ ಊರಿನ ಹಾದಿ ಹಿಡಿದಿದ್ದಾರೆ. ಆದರೆ ಜಂಬೂಸವಾರಿಯ ಸಂದರ್ಭ ನಡೆದ ಕೆಲವೊಂದು ಪ್ರಮಾದಗಳು ಇದೀಗ ನಿಧಾನವಾಗಿ ಹೊರಬರುತ್ತಿವೆ. ಇದೊಂದು ರೀತಿಯಲ್ಲಿ ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತಾಗಿದೆ. [ನಂದಿಧ್ವಜ ಪೂಜೆಯಲ್ಲಿ ಮತ್ತೆ ಗೊಂದಲ]
ಈ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಿಗದಿತ ಮೂಹೂರ್ತದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ನಡೆಯಬೇಕಿತ್ತು. ಆದರೆ ಅದು ಆಗಲಿಲ್ಲ. ತಡವಾಗಿ ನಡೆಯಿತು. ಇದಕ್ಕೆ ಕಾರಣಗಳನ್ನು ಹಲವರು ಹಲವು ರೀತಿಯಲ್ಲಿ ಹೇಳಿದರಾದರೂ ಅದ್ಯಾವುದು ಕಾರಣವಲ್ಲ. ಅಂಬಾರಿಗೆ ವಿಮೆ ಮಾಡಿಸುವಲ್ಲಿನ ಗೊಂದಲವೇ ಮುಖ್ಯ ಕಾರಣ ಎಂಬ ಮಾತು ಕೇಳಿಬಂದಿದೆ.[ಅಪಶಕುನದ ಚರ್ಚೆಗೆ ನಾಂದಿ ಹಾಡಿದ ಮೈಸೂರು ದಸರಾ]

ಪ್ರತಿ ದಸರಾ ಜಂಬೂಸವಾರಿಯಂದು ಅಂಬಾರಿಗೆ ಸುರಕ್ಷತೆಯ ದೃಷ್ಟಿಯಿಂದ ವಿಮೆ ಮಾಡಿಸಲಾಗುತ್ತದೆ. ಈ ಬಾರಿಯೂ ಸುಮಾರು 15ಕೋಟಿ ವಿಮೆ ಮಾಡಿಸಲಾಗಿದೆ. ವಿಮೆ ಮಾಡಿಸಿದ ಮೇಲೆಯೂ ಏನು ಗೊಂದಲ ಎಂಬ ಪ್ರಶ್ನೆ ಮೂಡಬಹುದು.
ಆದರೆ, ಆಗಿದ್ದು ಇಲ್ಲೇ ಎಡವಟ್ಟು. ವಿಮೆಯನ್ನು ರಾಜಮನೆತನದ ಹೆಸರಿನಲ್ಲಿ ಮಾಡಲಾಗುತ್ತದೆ. ಆದರೆ ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ವಿಮೆ ಮಾಡಿಸಲಾಗಿತ್ತು.
ಹಿಂದಿನ ಸಂಪ್ರದಾಯವನ್ನು ಮುರಿದಿದ್ದು, ರಾಣಿ ಪ್ರಮೋದಾದೇವಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ ಬೇಸರಗೊಂಡ ಅವರು ರಾಜಮಹಲ್ ಸೇರಿದ್ದರು. ಇತ್ತ ಜಿಲ್ಲಾಧಿಕಾರಿ ಶಿಖಾ ಅವರು ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಗಣ್ಯರೊಂದಿಗೆ ಆಸೀನರಾಗಿದ್ದರು.
ರಾಣಿ ಪ್ರಮೋದಾದೇವಿ ಅವರು ಅಸಮಾಧಾನಗೊಂಡಿದ್ದನ್ನು ತಿಳಿದ ಕೆಲವರು ಅವರನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅರ್ಜುನನಿಗೆ ಅಂಬಾರಿ ಕಟ್ಟುವುದು ತಡವಾಯಿತು.
ಈ ನಡುವೆ ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ತೆರಳಿ ಪ್ರಮೋದಾ ದೇವಿಯವರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಸಮ್ಮತಿಸಿದರು ಎಂದು ಹೇಳಲಾಗಿದೆ. ಪ್ರತಿ ವರ್ಷದ ಸಂಪ್ರದಾಯವನ್ನು ಜಿಲ್ಲಾಧಿಕಾರಿ ಶಿಖಾ ಅವರು ಮುರಿಯಲು ಕಾರಣವೇನು? ಸರ್ಕಾರವೇ ಆದೇಶ ನೀಡಿತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿವೆ.












Click it and Unblock the Notifications