ಚಾಮುಂಡೇಶ್ವರಿ ತಾಯಿ ಮುಂದೆ ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸಂಸದ ಸುನೀಲ್ ಬೋಸ್
ಮೈಸೂರು, ಜುಲೈ 28: ಮೈಸೂರು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯ ಹಣೆಗೆ ಚಾಮರಾಜನಗರದ ಸಂಸದ ಸುನೀಲ್ ಬೋಸ್ ಕುಂಕುಮ ಇಟ್ಟಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮೊನ್ನೆ (ಜುಲೈ 26) ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮರಾಜನಗರದ ನೂತನ ಸಂಸದ ಸುನೀಲ್ ಬೋಸ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಬಿ.ಕೆ. ಸವಿತಾ ಅವರ ಹಣೆಗೆ ಕುಂಕುಮ ಇಟ್ಟಿದ್ದಾರೆ. ಅಲ್ಲದೇ ತಾಯಿಯ ಆಶೀರ್ವಾದದ ಪ್ರಸಾದವನ್ನು ಸಹ ಅರ್ಚಕರು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಬಿ.ಕೆ. ಸವಿತಾ ಅವರಿಗೆ ನೀಡಿದ್ದಾರೆ.

ಈ ಫೋಟೋಗಳು ಸದ್ಯ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಸಂಸದರೊಬ್ಬರು ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸಂಗತಿ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚಾಮುಂಡಿ ಬೆಟ್ಟಕ್ಕೆ ಸಂಸದ ಸುನೀಲ್ ಬೋಸ್ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಜೊತೆಯಾಗಿ ಬಂದಿದ್ದರು. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಜೊತೆಗೆ ಬೆಂಬಲಿಗರ ಸಮ್ಮುಖದಲ್ಲೇ ನಿರ್ದೇಶಕಿ ಸವಿತಾ ಅವರ ಹಣೆಗೆ ಸುನೀಲ್ ಬೋಸ್ ಕುಂಕುಮ ಇಟ್ಟಿದ್ದರು. ಘಟನೆಯ ವಿಡಿಯೋ, ಫೋಟೊಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಚಾಮರಾಜನಗರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಸುನೀಲ್ ಬೋಸ್ ಚುನಾವಣಾ ಆಯೋಗಕ್ಕೆ ಅಫಿಡೆವಿಟ್ ಸಲ್ಲಿಸುವ ವೇಳೆ ಹೆಂಡತಿ ಮಕ್ಕಳ ಹಾಗೂ ಹಿಂದೂ ಅವಿಭಕ್ತ ಕುಟುಂಬ ಬಗ್ಗೆ ನಿಖರವಾದ ಮಾಹಿತಿ ನೀಡಿರಲಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆಯಾಗಿಲ್ಲ ಎಂದು ಸುನೀಲ್ ಬೋಸ್ ಅಫಿಡೆವಿಟ್ ಸಲ್ಲಿಸಿದ್ದರು ಎನ್ನಲಾಗಿದೆ.
ಸುನೀಲ್ ಬೋಸ್ ತಮ್ಮ ವೈವಾಹಿಕ ಜೀವನವನ್ನು ಮರೆಮಾಚಿದ್ದರು. ಇದಕ್ಕೆ ಪ್ರತಿಯಾಗಿ ಚಾಮರಾಜನಗರ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಕೂಡ ನೀಡಿತ್ತು. ಸುನೀಲ್ ಬೋಸ್ ಅವರು ಎಂ.ಕೆ. ಸವಿತಾ ಅವರನ್ನು ಮದುವೆಯಾಗಿದ್ದು, ಆರು ವರ್ಷದ ಹೆಣ್ಣುಮಗುವಿದೆ ಎಂದು ಫೋಟೊ ಸಹಿತ ದೂರು ನೀಡಿದ್ದರು.
ಇದೀಗ ಚಾಮುಂಡಿ ಬೆಟ್ಟದ ಫೋಟೋ ಸಖತ್ ವೈರಲ್ ಆಗುತ್ತಿದ್ದು, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಈ ಬಾರಿ ಸಂಸದರ ಫೋಟೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗಳಿಗೆ ಮತ್ತೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications