ಸಿದ್ದರಾಮಯ್ಯ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಮತ್ತೆ ವಾಗ್ದಾಳಿ
ಮೈಸೂರು, ಡಿಸೆಂಬರ್ 22: ಮಾಜಿ ಸಿಎಂ ಸಿದ್ದರಾಮಯ್ಯ ದಪ್ಪ ಚರ್ಮದ ಮನುಷ್ಯ ಆಗಿದ್ದು, ಆತನಿಗೆ ನಾಗರಿಕತೆ, ಸಂಸ್ಕೃತಿ ಇಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ವಿಪಕ್ಷ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಮಾತಾಡಿಸುವುದನ್ನೆ ರೂಢಿ ಮಾಡಿಕೊಂಡಿದ್ದಾನೆ. ಇದಕ್ಕೆ ಹಳ್ಳಿಯಿಂದ ಬಂದಿದ್ದೇನೆ ಎಂಬ ಸಮಜಾಯಿಷಿ ನೀಡುತ್ತಾನೆ ಎಂದು ಕಿಡಿಕಾರಿದರು.
""ನಿಮ್ಮಂತೆ ಹಳ್ಳಿಯಿಂದ ಸಾಕಷ್ಟು ಜನರು ಬಂದಿದ್ದಾರೆ. ಆದರೆ ಯಾರೂ ಕೂಡ ನಿಮ್ಮಂತೆ ಅನಾಗರಿಕತೆಯಿಂದ ಮಾತನಾಡುವುದಿಲ್ಲ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಶ್ರೀನಿವಾಸ ಪ್ರಸಾದ್, ನಿಮಗ್ಯಾರು ಬೆನ್ನಿಗೆ ಚೂರಿ ಹಾಕ್ತಾರೆ. ನೀವು ಸರಿಯಾಗಿ ಇದ್ದಿದ್ದರೆ ನಿಮ್ಮ ವಿರುದ್ಧ ಹೈಕಮಾಂಡ್ಗೆ ಯಾಕೆ ದೂರು ಕೊಡ್ತಿದ್ರು? ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ನಿಮ್ಮ ನಾಯಕತ್ವದಲ್ಲಿ ಯಾವ ಚುನಾವಣೆ ಗೆದ್ದಿದ್ದೀರಾ? ಎಂದು ಪ್ರಶ್ನಿಸಿದರು.
ನೀವು ಇದ್ದರೆ ಕಾಂಗ್ರೆಸ್ ಪಕ್ಷ ನಾಶವಾಗಲಿದೆ ಎಂದು ನಿಮ್ಮ ಪಕ್ಷದವರೇ ನಿಮ್ಮ ವಿರುದ್ಧ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ಇದರಲ್ಲೇ ನಿಮ್ಮ ನಾಯಕತ್ವದ ಮಟ್ಟ ತಿಳಿಯಲಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಮಾಜಿ ಸಿಎಂ ವಿರುದ್ಧ ಟೀಕಿಸಿದರು.












Click it and Unblock the Notifications