ಪ್ರವಾಹ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಮತ್ತು ಸಚಿವರು ಭೇಟಿ
ಮೈಸೂರು, ಆಗಸ್ಟ್ 17 : ಅತಿಯಾದ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವ ಮೈಸೂರಿನ ಕೆಲವು ಭಾಗಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಇಂದು ಭೇಟಿ ನೀಡಿದ್ದರು.
ಪಟ್ಟಣದ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಮಳೆ ಕಡಿಮೆಯಾದ ಕೂಡಲೇ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಷ್ಟಕ್ಕೆ ಒಳಗಾಗಿರುವರಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಕಳೆದ ಬಾರಿ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಆಗಮಿಸಿದ ಸಂದರ್ಭ 100 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದು ಸಾಲದು. ಈಗಾಗಲೇ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಸೂಕ್ತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದ್ದು, ಕೊಡಗಿನಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಯಾಗಿದ್ದು, ಹಲವೆಡೆ ರಸ್ತೆ ಸಂಪರ್ಕಗಳು ಸಂಪೂರ್ಣ ಕಡಿತಗೊಂಡಿದೆ. ಕುಶಾಲನಗರ ಜಲಾವೃತ್ತ ಆಗುವ ಭೀತಿ ಎದುರಾಗಿದೆ ಪಿರಿಯಾಪಟ್ಟಣ ಗಡಿ ಹಾಗೂ ಕುಶಾಲನಗರದ ಕಾವೇರಿ ಸೇತುವೆ ಬಳಿ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದೇ ಮೊದಲ ಭಾರಿಗೆ ಕೊಡಗು ಮೈಸೂರು ಸಂಪರ್ಕ ಕಡಿತವಾಗಿದೆ.

ಸಚಿವ ಆರ್ ವಿ ದೇಶಪಾಂಡೆ, ಸಾ ರಾ ಮಹೇಶ್ ಕೂಡ ಭೇಟಿ
ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ. ಮಳೆಯಿಂದ ಜಲಾವೃತವಾಗಿದ್ದ ಸ್ಥಳಗಳಿಗೆ ಕಂದಾಯ ಸಚಿವರಾದ ಆರ್. ವಿ ದೇಶಪಾಂಡೆ, ಸಾ.ರಾ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.

ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವರುಗಳು ಕಾವೇರಿ ನದಿ ಪಾತ್ರದಲ್ಲಿ ಮುಳುಗಡೆಯಾಗಿರು ಭೂಮಿಯನ್ನು ವೀಕ್ಷಣೆ ಮಾಡಿದರು. ಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರವನ್ನು ಸಹ ಪರಿಶೀಲಿಸಿದರು. ಅಲ್ಲಿನ ಅಧಿಕಾರಿಗಳ ಜೊತೆ ಹಾನಿಯ ಕುರಿತು ಸಂಪೂರ್ಣ ವಿವರಗಳನ್ನು ಸಹ ಪಡೆದುಕೊಂಡರು.












Click it and Unblock the Notifications