ಮೈಸೂರಿನಲ್ಲಿ ಮತ್ತೆ ಚಿಗುರೊಡೆದಿದೆ ಫಿಲಂ ಸಿಟಿ ನಿರ್ಮಾಣದ ಕನಸು
ಮೈಸೂರು, ಆಗಸ್ಟ್ 31: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಪ್ರಯತ್ನದ ನಡುವೆಯೂ ನನೆಗುದಿಗೆ ಬಿದ್ದಿದ್ದ ಮೈಸೂರು ಫಿಲಂ ಸಿಟಿ ಕಾರ್ಯ ಯೋಜನೆಗೆ ಮತ್ತೊಮ್ಮೆ ಜೀವ ಬಂದಂತೆ ಕಾಣುತ್ತಿದೆ. ಸಂಸದ ಪ್ರತಾಪ್ ಸಿಂಹ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹೈದರಾಬಾದ್ ರಾಮೋಜಿ ಫಿಲಂ ಸಿಟಿ ಉಸ್ತುವಾರಿ ರಾಜೀವ್ ಅವರನ್ನು ಪ್ರತಾಪ್ ಸಿಂಹ ಖುದ್ದು ಭೇಟಿ ಮಾಡಿ ಮೈಸೂರಿನಲ್ಲಿ ಇದೇ ಮಾದರಿಯ ಫಿಲಂ ಸಿಟಿ ಆರಂಭ ಮಾಡುವ ಕುರಿತು ಆಹ್ವಾನ ನೀಡಿರುವ ಪೋಸ್ಟ್ ಇದಕ್ಕೆ ಪುಷ್ಠಿ ನೀಡಿದೆ.
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆ ಹಾಗೂ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ ಬಳಿಯ 110 ಎಕರೆ ಜಾಗದಲ್ಲಿ ಫಿಲಂ ಸಿಟಿ ನಿರ್ಮಾಣದ ಕುರಿತು ಅನುಮೋದನೆ ನೀಡಿದ್ದರು. ಅಲ್ಲದೆ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ವಹಿಸಿದ್ದರು. ಅದಾದ ಬಳಿಕ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸುವ ಚಿತ್ರ ನಗರಿಯನ್ನು ರಾಮನಗರ ಬಳಿ ನಿರ್ಮಿಸಲಾಗುವುದು ಎಂದು ಘೊಷಣೆ ಮಾಡಿದರು. ಹೀಗಾಗಿ ಎಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಬೇಕೆಂಬ ಗೊಂದಲ ಉಂಟಾಗಿತ್ತು.

ಈಗ ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತಾಗಿ ಮುಂದಾಳತ್ವ ವಹಿಸಿದ್ದಾರೆ ಎನ್ನಲಾಗಿದೆ. ಮೈಸೂರಿನ ಸುತ್ತಮುತ್ತ ನದಿಗಳು, ಬೆಟ್ಟಗುಡ್ಡ, ಅರಣ್ಯವಿದೆ. 16 ಅರಮನೆಗಳು, ಸಂಚಾರ ದಟ್ಟಣೆ ಮುಕ್ತ ರಸ್ತೆ, ರಾಜಪರಂಪರೆ, ಮೈಸೂರಿನ ಅರಮನೆ ಸೇರಿದಂತೆ ಇತಿಹಾಸ ಪ್ರಸಿದ್ಧ ಸ್ಥಳಗಳು ಇಲ್ಲಿವೆ. ಈ ಎಲ್ಲಾ ವೈಶಿಷ್ಟ್ಯಗಳ ಕುರಿತು ಪ್ರತಾಪ್ ಸಿಂಹ ಅವರು ರಾಜೀವ್ ಅವರಿಗೆ ತಿಳಿಸಿ ಮನವಿ ಮಾಡಲಿರುವುದಾಗಿ ತಿಳಿದುಬಂದಿದೆ.
"ಮೈಸೂರಿನಲ್ಲಿ ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸಲು ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದರು. ಆದರೆ ರೈಲ್ವೆ, ವಿಮಾನ ಸಂಪರ್ಕ ಅಚ್ಚರಿ ರೀತಿಯಲ್ಲಿ ಸುಧಾರಣೆ ಕಂಡಿದೆ. ಹಾಗಾಗಿ ಉದ್ಯಮಿಗಳು, ನಾನಾ ಕಂಪನಿಗಳು ಮೈಸೂರಿನಲ್ಲಿಯೇ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ನಾನೇ ಉದ್ಯಮಿಗಳಲ್ಲಿ ಚರ್ಚೆ ನಡೆಸಿ ಹೂಡಿಕೆ ಮಾಡುವಂತೆ ಮನವಿ ಮಾಡುತ್ತೇನೆ. ರಾಮೋಜಿ ಫಿಲ್ಮ್ ಸಿಟಿ ನೋಡಿಕೊಳ್ಳುತ್ತಿರುವ ರಾಜೀವ್ ಅವರಲ್ಲೂ ಮಾತನಾಡಿದ್ದೇನೆ" ಎಂದರು ಸಂಸದ ಪ್ರತಾಪ್ ಸಿಂಹ.












Click it and Unblock the Notifications