ಅನುದಾನ ಅಸಮರ್ಪಕ ಬಳಕೆ; ಮೈಸೂರು ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಮೈಸೂರು, ಸೆಪ್ಟೆಂಬರ್ 9: ಜಿಲ್ಲಾಡಳಿತವು ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿರುವ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಅನುದಾನಗಳ ಹಣವನ್ನು ನಿರ್ದಿಷ್ಟ ಕಾಮಗಾರಿಗಳಿಗೆ ಮಾತ್ರವೇ ಬಳಸುವಂತೆ ಸೂಚಿಸಿದ್ದಾರೆ. ಪತ್ರದಲ್ಲಿ 14ನೇ ಹಣಕಾಸು ಯೋಜನೆ ಉಳಿಕೆ ಹಣವಾದ ರೂ 09.30 ಕೋಟಿ ರೂ, 15ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗಿರುವ 69.39 ಕೋಟಿ ರೂ ಹಣವನ್ನು ಅತ್ಯವಶ್ಯಕ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಈ ಅನುದಾನವನ್ನು ವಿದ್ಯಾರಣ್ಯಪುರಂ, ರಾಯನಕೆರೆ ಹಾಗೂ ಕೆಸರೆ ಘನ ತ್ಯಾಜ್ಯ ಘಟಕದ ನಿರ್ಮಾಣ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
"ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಈಗ ರಾಜಕೀಯ ಬಣ್ಣ ಬೇಡ"
ಹಾಗೆಯೇ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಈ ಹಿಂದಿನಿಂದ ಮೇಯರ್ ಉಪಮೇಯರ್, ಮಾಜಿ ಮೇಯರ್ ಗಳು, ಪಾರ್ಟಿ ಮುಖ್ಯಸ್ಥರು ನಿಯಮಾವಳಿಗಳನ್ನು ಉಲ್ಲಂಘಿಸಿ ಹೊಂದಾಣಿಕೆ ರಾಜಕಾರಣದ ಮೂಲಕ ಸಿಂಹಪಾಲನ್ನು ಪಡೆದುಕೊಳ್ಳುವಂತಹ ಅನಧಿಕೃತ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಇಂಥ ಹೊಂದಾಣಿಕೆ ವ್ಯವಸ್ಥೆಯನ್ನು ಅಂತ್ಯಗೊಳಿಸಿ ಎಂದರು.
ಶೇ. 50ರಷ್ಟು ಅನುದಾನವಾದ ರೂ.34.70 ಕೋಟಿ ಹಾಗೂ 14ನೇ ಹಣಕಾಸು ಯೋಜನೆಯ ಉಳಿಕೆಯಾಗಿರುವ ರೂ.9.30 ಕೋಟಿ ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿಯಮಾವಳಿ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯವನ್ನು ಪಡೆದು ಅನುದಾನ ವಿನಿಯೋಗ ಮಾಡಬೇಕು. ಕೇಂದ್ರ ಸರ್ಕಾರದ ಈ ಅನುದಾನವನ್ನು ಯಾವುದೇ ಕಾರಣಕ್ಕೂ ವೃತ್ತಗಳು, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಪೋಲು ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ತಾಕೀತು ಮಾಡಿದರು.