ಹರಿದುಬಂದ ಪ್ರವಾಸಿಗರ ದಂಡು, ಮೈಸೂರು ದಸರಾಗೆ ಬರದ ಮಾತೆಲ್ಲಿ..!
ಮೈಸೂರು, ಅಕ್ಟೋಬರ್ 30: ರಾಜ್ಯದಲ್ಲಿ ಬರ ಇದ್ದ ಹಿನ್ನೆಲೆಯಲ್ಲಿ ಸರ್ಕಾರ ಅದ್ಧೂರಿ ದಸರಾಗೆ ಬ್ರೇಕ್ ಹಾಕಿ ಸಾಂಪ್ರದಾಯಿಕ ದಸರಾ ಆಚರಿಸಿತು. ಆದರೆ, ದಸರಾಗೆ ಬರದ ಬಿಸಿ ತಟ್ಟಲಿಲ್ಲ. ಸಾಕಷ್ಟು ಪ್ರವಾಸಿಗರು ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ಹೊರ ಜಿಲ್ಲೆಗಳಿಂದ ಸಾಕಷ್ಟು ಪ್ರವಾಸಿಗರು ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರಕಾರದ ಶಕ್ತಿ ಯೋಜನೆ. ಉಚಿತ ಪ್ರಯಾಣವಾದ ಕಾರಣ ಹೊರ ಜಿಲ್ಲೆಗಳಿಂದ ಹೆಚ್ಚು ಜನರು ದಸರಾದ ವಿವಿಧ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡಿದ್ದಾರೆ. 10 ದಿನದಲ್ಲಿ 3.5 ಲಕ್ಷ ಮಹಿಳೆಯರು ಹೆಚ್ಚುವರಿಯಾಗಿ ಪ್ರಯಾಣಿಸಿದ್ದಾರೆ. ಕೆಎಸ್ಆರ್ಟಿಸಿ ಮೈಸೂರು-ಬೆಂಗಳೂರು ನಡುವೆ 600 ಬಸ್ಗಳನ್ನು ಹೆಚ್ಚುವರಿಯಾಗಿ ಬಿಟ್ಟಿತ್ತು.

ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳಲಿಲ್ಲ. ಕೃಷಿ ಬೆಳೆಗಷ್ಟೇ ಅಲ್ಲದೆ ಭವಿಷ್ಯದಲ್ಲಿ ಕುಡಿಯಲು ನೀರಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 216 ತಾಲೂಕುಗಳನ್ನು ಬರಪಿಡೀತ ತಾಲೂಕುಗಳೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಬಾರಿ ಅದ್ಧೂರಿ ದಸರಾಗೆ ಕಡಿವಾಣ ಹಾಕಿ ಸಾಂಪ್ರದಾಯಿಕ ದಸರಾ ಆಚರಿಸುವುದಾಗಿ ಘೋಷಿಸಿತ್ತು. ಆದರೂ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆ ಆಗಲಿಲ್ಲ. ಬರದ ದಸರಾ ಸಂಭ್ರಮವನ್ನು ಕುಗ್ಗಿಸಲಿಲ್ಲ.
ವ್ಯಾಪಾರ -ವಹಿವಾಟು ಜೋರು
ದಸರಾ ಎಂದರೆ ಸಾವಿರಾರು ಮಂದಿಗೆ ಬದುಕು. ಬಹಳಷ್ಟು ಮಂದಿ ದಸರಾದಲ್ಲಿ ಉತ್ತಮ ಆದಾಯ ಗಳಿಸುತ್ತಾರೆ. ಅಂತೆಯೇ ಈ ಬಾರಿಯೂ ಸ್ಥಳೀಯರ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿದೆ. ಅಂಗಡಿ ಮುಂಗ್ಗಟ್ಟು, ಬೀದಿಬದಿ ವ್ಯಾಪಾರಿಗಳು, ಆತಿಥ್ಯ ವಲಯ, ಟೂರಿಸ್ಟ್ ಅಂಡ್ ಟ್ರಾವಲ್ಸ್ , ಅರಮನೆ, ಝೂ, ಚಾಮುಂಡಿಬೆಟ್ಟ, ದಸರಾ ಪಾಸ್ಗಳಿಂದ ಉತ್ತಮ ಆದಾಯವೇ ಬಂದಿದೆ.
ಅರಮನೆಗೆ 1.5 ಲಕ್ಷ ಮಂದಿ ಭೇಟಿ
ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆ ಹಾಗೂ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಸಾವಿರಾರು ಮಂದಿ ಭೇಟಿ ನೀಡಿದ್ದು, ಆದಾಯವೂ ಹೆಚ್ಚಳವಾಗಿದೆ. ಅರಮನೆಗೆ ಅ.9ರಿಂದ ಅ.23ರವರೆಗೆ 1,67.065 ಮಂದಿ ಭೇಟಿ ಕೊಟ್ಟಿದ್ದಾರೆ. ದಿನವಾದ ಮೃಗಾಲಯಕ್ಕೆ ಅ. 15ರಿಂದ 24ರವರೆಗೆ 1,65,003 ಮಂದಿ ಬಂದಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡು
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಲಕ್ಷಾಂತರ ಮಂದಿ ಬೆಟ್ಟದ ತಾಯಿ ದರ್ಶನ ಪಡೆದಿದ್ದಾರೆ. ಜೊತೆಗೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೂ ಪ್ರವಾಸಿಗರು ಭೇಟಿ ಕೊಟ್ಟಿದ್ದರಿಂದ ಆದಾಯ ಹೆಚ್ಚಳವಾಗಿದೆ.












Click it and Unblock the Notifications