ಮೈಸೂರಿನಲ್ಲಿ ಐಎಂಎ ವಿರುದ್ಧ 1500ಕ್ಕೂ ಹೆಚ್ಚು ದೂರು ದಾಖಲು
ಮೈಸೂರು, ಜೂನ್ 14 : ಸಾವಿರಾರು ಮಂದಿಗೆ ವಂಚಿಸಿರುವ ಐಎಂಎ ಸಂಸ್ಥೆ ವಿರುದ್ಧ ನಗರದಲ್ಲಿ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಷೇರು ಬಂಡವಾಳ ಹೂಡಿ ವಂಚನೆಗೆ ಒಳಗಾದ ಮೈಸೂರಿನ ನೂರಾರು ಮಂದಿ ಗ್ರಾಹಕರು ಬೆಂಗಳೂರಿಗೆ ಹೋಗಿ ದೂರು ದಾಖಲಿಸಿ ಬಂದಿದ್ದರು. ಈ ಮಧ್ಯೆ ನಗರ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ ಹಿನ್ನೆಲೆ, ಮೈಸೂರಿನ ಠಾಣೆಗಳಲ್ಲೇ ಸಾಲಿನಲ್ಲಿ ನಿಂತು ದೂರು ದಾಖಲಿಸುತ್ತಿದ್ದಾರೆ.
ನಗರದ ಮಂಡಿ ಠಾಣೆಯಲ್ಲಿ 51, ನರಸಿಂಹರಾಜ ಠಾಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ್ದಾರೆ. ಅಲ್ಲದೆ ಜಿಲ್ಲೆಯ ಟಿ ನರಸೀಪುರ, ಕೆ.ಆರ್ ನಗರದಿಂದಲೂ ವಂಚನೆಗೊಳಗಾದವರು ದೂರು ದಾಖಲಿಸಿದ್ದಾರೆ. ನಗರದ ಉದಯಗಿರಿ ಠಾಣೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಂದಿ ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ. ಉದಯಗಿರಿ ಠಾಣೆಯಲ್ಲಿ ಬುಧವಾರ ಸಂಜೆಯಿಂದಲೇ ದೂರು ದಾಖಲಿಸಲು ಆರಂಭಿಸಿದ್ದರು.
ಐಎಂಎ ವಂಚನೆ: ಹೃದಯಾಘಾತದಿಂದ ಹೂಡಿಕೆದಾರ ಸಾವು
ಕಳೆದೆರಡು ದಿನಗಳಿಂದ ಇಲ್ಲಿಯವರೆಗೂ ಸುಮಾರು 1500ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ್ದಾರೆ. ಈಗಾಗಲೇ ದಾಖಲಾಗಿರುವ ದೂರುಗಳ ಅನ್ವಯ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚಿನ ಹಣದ ವಂಚನೆ ನಡೆದಿದೆ ಎನ್ನಲಾಗಿದೆ. ದೂರು ನೀಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಉದಯಗಿರಿ ಠಾಣೆ ಪೊಲೀಸರು ಜಬ್ಬರ್ ಹಾಲ್ ನಲ್ಲಿ ದೂರು ಸ್ವೀಕರಿಸುವ ವ್ಯವಸ್ಥೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಐಎಂಎ ವಂಚನೆ: ಮೈಸೂರಿಗರಿಗೆ ಇಲ್ಲೇ ದೂರು ನೀಡುವಂತೆ ಸೂಚನೆ
ಈಗ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ದೂರು ದಾಖಲಿಸಿದ್ದಾರೆ. ಇವರೆಲ್ಲರೂ ತಮ್ಮ ಉಳಿತಾಯದ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಮೋಸ ಹೋದವರು, ಹೂಡಿಕೆ ಮಾಡಿದ್ದಕ್ಕೆ ನೀಡುವ ರಸೀತಿ, ಬಾಂಡ್ ಗಳಲ್ಲಿನ ನೋಂದಣಿ ಸಂಖ್ಯೆಯನ್ನು ನೀಡುವ ಮೂಲಕ ದೂರು ನೀಡಿದರು. ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಅನೇಕರು ದೂರು ನೀಡಲು ಕಾದಿದ್ದು, ಅದರಲ್ಲಿ ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದ ಮಂದಿಯೇ ಹೆಚ್ಚಿದ್ದರು.