ಕೋಟ್ಯಂತರ ರೂ. ಲೂಟಿಗಿಂತ, ಸಿಡಿ ಹೆಚ್ಚಾಯ್ತಾ?: ಎಚ್.ವಿಶ್ವನಾಥ್ ವಾಗ್ದಾಳಿ
ಮೈಸೂರು, ಮಾರ್ಚ್ 25: ಕೋಟ್ಯಂತರ ರುಪಾಯಿ ಲೂಟಿ ಆಗಿರುವ ಬಗ್ಗೆ ಚರ್ಚೆ ಮಾಡೋಲ್ಲ ಸಿಡಿ ಚರ್ಚೆ ಮಾಡ್ತಿರಾ? ನಿಮಗೆ ಸಿಡಿಯೇ ಹೆಚ್ಚಾಯ್ತಾ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಸದನ ಮುಗಿತು ಅಷ್ಟೆ. ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶನ ಅಂದ್ರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಅದ್ಯಾವುದು ಚರ್ಚೆ ಆಗಲೇ ಇಲ್ಲ. ಈ ಬಜೆಟ್ ಅಧಿವೇಶನ ಜನತಂತ್ರ ವ್ಯವಸ್ಥೆಯ ಅಣಕ ಎಂದು ಟೀಕಿಸಿದರು.

ಸರ್ಕಾರದಷ್ಟೇ ಅಲ್ಲ, ವಿರೋಧ ಪಕ್ಷದ ತಪ್ಪು ಇದೆ
ಎಲ್ಲಿ ವಿರೋಧ ಪಕ್ಷ ಬಲಿಷ್ಠವಾಗಿರುತ್ತದೆಯೋ ಅಲ್ಲಿ ಸರ್ಕಾರ ಚೆನ್ನಾಗಿರುತ್ತೆ. ಆದರೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಹೊಣೆಗೇಡಿತನ ಪ್ರದರ್ಶನ ಮಾಡಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣವೇ ಹೆಚ್ಚಾಯ್ತು. ರಾಜ್ಯ ನಾಲ್ಕು ಲಕ್ಷ ಕೋಟಿ ಸಾಲಕ್ಕೆ ಬಂದು ನಿಂತಿದೆ.
2.5 ಲಕ್ಷ ಕೋಟಿ ಬಜೆಟ್ ಬಗ್ಗೆ ಚರ್ಚೆಯೇ ಇಲ್ಲದೆ ಕಲಾಪ ಮುಗಿಸಿದ್ದಾರೆ ಎಂದು ಕಿಡಿಕಾರಿದರು.

ಇಬ್ಬರು ಮಾಜಿ ಸಿಎಂಗಳ ಜವಾಬ್ದಾರಿ ಏನು?
ನಿಮಗೆ ಸಿಡಿಯೇ ದೊಡ್ಡದಾಯಿತಾ. ಮಂತ್ರಿಯೇ ರಾಜೀನಾಮೆ ನೀಡಿದ್ದಾರೆ ಇನ್ನೇನಿದೆ. ಆರು ಮಂತ್ರಿಗಳ ಮೇಲೆ ಚರ್ಚೆ, ಸುಧಾಕರ್ ಮೇಲೆ ಚರ್ಚೆ. ಇದು ಬೇಕಾಗಿತ್ತಾ ನಿಮಗೆ. ಬಜೆಟ್ ಅಧಿವೇಶದಲ್ಲಿ ಇದೇನಾ ಚರ್ಚೆನಾ ಮಾಡೋದು. ಈ ಬಗ್ಗೆ ನಮಗೆ ಜವಾಬ್ದಾರಿ ಇಲ್ಲವೇನೋ ಅನ್ನುವ ಥರ ನಡೆದುಕೊಂಡಿದ್ದೀರಿ. 30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಗಿದಿದೆ. ಅದಾದರೂ ನೆಟ್ಟಗಾಯ್ತಾ. ಒಬ್ಬ ಮಾಜಿ ಸಿಎಂ ಸದನಕ್ಕೆ ಬಂದು ಸಮಯ ವ್ಯರ್ಥ ಮಾಡಿದರು. ಇನ್ನೊಬ್ಬ ಮಾಜಿ ಸಿಎಂ ಸದನಕ್ಕೆ ಬಂದರೆ ಉಪಯೋಗ ಇಲ್ಲ ಎಂದು ಹೇಳಿದರು. ಇಂಥವರೆಲ್ಲ ವಿರೋಧ ಪಕ್ಷದಲ್ಲಿದ್ದರೆ ಇನ್ನೇನಾಗುತ್ತದೆ ಎಂದು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀವು ರಾಜಕಾರಣ ಮಾಡಿ ಭಾರೀ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ತಿರಾ? ಜನ ಎಲ್ಲವನ್ನು ನೋಡ್ತಿದ್ದಾರೆ ಎಂದು ಎಚ್ಚರಿಸಿದರು.

ಆರ್ಥಿಕ ನೀತಿ ಬಗ್ಗೆ ಚರ್ಚೆ ಮಾಡದೆ ಸಿಡಿ ಬಗ್ಗೆ ಚರ್ಚೆ
ಇದೇ ವೇಳೆ ಸಚಿವ ಡಾ.ಕೆ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಧಾಕರ್ ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡೋಲ್ಲ. ಅವರು ನಿನ್ನೆಯೇ ಕ್ಷಮೆ ಕೇಳಿದ್ದಾರೆ. ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅದು ಮುಗಿದು ಹೋಗಿದೆ ಅದರ ಬಗ್ಗೆ ಚರ್ಚೆ ಮಾಡೋಲ್ಲವೆಂದರು. ಆದರೆ, ವಿರೋಧ ಪಕ್ಷಗಳು ಇದನ್ನು ಉಪ ಚುನಾವಣೆಗೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ನಾವಿದ್ದಾಗ ಭಾರೀ ಚಿನ್ನ, ವಜ್ರ ಮಾರಾಟ ಮಾಡುವ ಸ್ಥಿತಿ ಇತ್ತು. ಈಗ ಎಲ್ಲವೂ ಹೋಗಿದೆ. ನಾವು ವಾಪಸ್ ಬರ್ತಿವಿ ಅಂತ ಮಾತನಾಡ್ತಿದ್ದಾರೆ. ಇದರಿಂದ ಪ್ರಯೋಜನ ಇಲ್ಲ. ಆರ್ಥಿಕ ನೀತಿ ಬಗ್ಗೆ ಚರ್ಚೆ ಮಾಡದೆ ಸಿಡಿ ಬಗ್ಗೆ ಚರ್ಚೆ ಮಾಡಿದ್ದು, ವ್ಯವಸ್ಥೆಯ ಅಣಕ ಎಂದು ಹೇಳಿದರು.

ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು
ಇನ್ನು ಸದನದಲ್ಲಿ ವಿರೋಧ ಪಕ್ಷದ ಸದಸ್ಯರು ಸಿಡಿ ಪ್ರದರ್ಶನ ಮಾಡಿದ್ದರ ಬಗ್ಗೆ ಲೇವಡಿ ಮಾಡಿದ ಎಂಎಲ್ಸಿ ಎಚ್.ವಿಶ್ವನಾಥ್, ಆ ಸಿಡಿ ಹಿಡಿಯನ್ನು ವಿಷ್ಣುಚಕ್ರ ಅಂದುಕೊಂಡಿದ್ದಾರಾ? ಸದನದಲ್ಲಿ ಸಿಡಿ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾರೆ. ಇದರಿಂದ ಏನು ಸಿಕ್ತು. ಸದನದಲ್ಲಿ ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದರೆ ಅಂತಹ ವಿಚಾರ ಚರ್ಚೆ ಬಿಟ್ಟು ಸಿಡಿಯನ್ನು ವಿಷ್ಣುಚಕ್ರದಂತೆ ತಿರುಗಿಸಿದ್ದಾರೆ ರಂದು ಲೇವಡಿ ಮಾಡಿದರು.












Click it and Unblock the Notifications