"ಯಾವ ಪುರುಷಾರ್ಥಕ್ಕೆ ಸರ್ಕಾರ ಬೀಳಿಸಿದೆವೋ'': ಎಚ್.ವಿಶ್ವನಾಥ್ ಅಸಮಾಧಾನ
ಮೈಸೂರು, ಮಾರ್ಚ್ 20: ರಾಜ್ಯದಲ್ಲಿ ಈಗ ಇರುವುದು ಬಿಜೆಪಿ ಸರ್ಕಾರ ಅಲ್ಲ. ಅದು ಒಬ್ಬರನ್ನೊಬ್ಬರು ರಕ್ಷಣೆ ಮಾಡುತ್ತಿರುವ ನ್ಯಾಷನಲ್ ಸರ್ಕಾರ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ತಮ್ಮದೇ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ರಕ್ಷಣೆ ಮಾಡ್ತಾರೆ, ಕುಮಾರಸ್ವಾಮಿರವನ್ನು ಸಿದ್ದರಾಮಯ್ಯ ರಕ್ಷಣೆ ಮಾಡ್ತಾರೆ. ಇಬ್ಬರೂ ಸೇರಿ ಯಡಿಯೂರಪ್ಪರನ್ನು ರಕ್ಷಿಸುತ್ತಿದ್ದಾರೆ. ಇದು ಒಬ್ಬೊರಿಗೊಬ್ಬರು ಅಡ್ಜಸ್ಟ್ಮೆಂಟ್ ರಾಜಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಲ್ಲಿ ಯಡಿಯೂರಪ್ಪ ನ್ಯಾಷನಲ್ ಗೌರ್ನ್ಮೆಂಟ್ ಚೀಫ್ ಮಿನಿಸ್ಟರ್. ಅವರು ಬುದ್ಧಿ ಚಾತುರ್ಯದಿಂದ ಎಲ್ಲರನ್ನು ಅಡ್ಜಸ್ಟ್ ಮಾಡಿಕೊಂಡಿದ್ದಾರೆ. ಅವರವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್.ವಿಶ್ವನಾಥ್ ಆರೋಪಿಸಿದರು.

ಇವರದ್ದೆಲ್ಲಾ ಅಡ್ಜಸ್ಟ್ಮೆಂಟ್ ರಾಜಕಾರಣ, ಭ್ರಷ್ಟಾಚಾರದಲ್ಲೂ ಅಷ್ಟೇ, ಈಗಿನ ಸಿಡಿಯಲ್ಲೂ ಅಷ್ಟೇ. ಸಿದ್ದರಾಮಯ್ಯ ಅವರ ಅರ್ಕಾವತಿ ಪ್ರಕರಣ ಮುಚ್ಚಿ ಹಾಕುವುದಕ್ಕೆ, ಕುಮಾರಸ್ವಾಮಿ ಅವರ ಪೋನ್ ಕದ್ದಾಲಿಕೆ ಮುಚ್ಚಿಕೊಳ್ಳಲು ಅಡ್ಜಸ್ಟ್ಮೆಂಟ್ ನಡೆದಿದೆ. ನಾವು ಯಾವ ಪುರುಷಾರ್ಥಕ್ಕೆ ದಂಗೆ ಎದ್ದು ಸರ್ಕಾರ ಬೀಳಿಸಿದೆವೋ ಅಂತ ಈಗ ಅನ್ನಿಸುತ್ತಿದೆ ಎನ್ನುವ ಮೂಲಕ ತಮ್ಮ ಅಕ್ರೋಶ ಹೊರಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಭ್ರಷ್ಟಾಚಾರಕ್ಕೆ ಲಸಿಕೆ ಯಾವಾಗ?' ಎಂಬ ಟ್ವೀಟ್ಗೆ ಕಿಡಿಕಾರಿದ ಎಚ್.ವಿಶ್ವನಾಥ್, ಇದ್ದ ಲೋಕಾಯುಕ್ತ ಎಂಬ ಲಸಿಕೆಯನ್ನು ನಾಶ ಮಾಡಿದವರು ಯಾರು ಸಿದ್ದರಾಮಯ್ಯ? ನಿಮ್ಮ ಅರ್ಕಾವತಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನು ಬಂದ್ ಮಾಡಿದಿರಿ, ಜನರು ದಡ್ಡರಲ್ಲ ಎಂದರು.
ಅಲ್ಲದೇ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ತಂಡದವರನ್ನು ಬ್ರಿಟಿಷರಿಗೆ ಹೋಲಿಸಿದ ಎಚ್.ವಿಶ್ವನಾಥ್, ಬ್ರಿಟಿಷರು ಹೇಗೆ ಭಾರತಕ್ಕೆ ಬಂದು ಭಾರತಿಯರನ್ನೇ ಓಡಾಡಿಸಿದರೋ ಹಾಗೆಯೇ ಸಿದ್ದರಾಮಯ್ಯ ಮತ್ತು ಗ್ಯಾಂಗ್ ಮೂಲ ಕಾಂಗ್ರೆಸಿಗರನ್ನು ಓಡಿಸುತ್ತಿದೆ. ವಲಸಿಗರೆಲ್ಲ ಸೇರಿ ಮೂಲ ಕಾಂಗ್ರೆಸಿಗರನ್ನು ಮುಗಿಸುತ್ತಿದ್ದಾರೆ.
ರೋಷನ್ ಬೇಗ್ ಆದಿಯಾಗಿ ಅಲ್ಪಸಂಖ್ಯಾತರನ್ನು ತುಳಿದರು. ಸಿದ್ದರಾಮಯ್ಯರನ್ನು ಯಾರು ಪ್ರಶ್ನೆ ಮಾಡುವಂತಿಲ್ಲ. ಮೈಸೂರು ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದರೆ ಇವರು ಕಾಂಗ್ರೆಸನ್ನೇ ಮುಗಿಸುವಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದರು.












Click it and Unblock the Notifications