ತನ್ವೀರ್ ಸೇಠ್ ಮಾಸ್ಟರ್ ಪ್ಲಾನ್: ಪಾಲಿಕೆಯಲ್ಲಿ ಅರಳುವ ಮೊದಲೇ ಮುದುಡಿದ 'ಕಮಲ'
ಮೈಸೂರು, ಫೆಬ್ರವರಿ 24: ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಉರುಳಿಸಿದ ರಾಜಕೀಯ ದಾಳಕ್ಕೆ ಮೈಸೂರು ಭಾಗದ ಬಿಜೆಪಿ ಕಂಪ್ಲೀಟ್ ಕಂಗಾಲಾಗಿ ಹೋಗಿದೆ.
ಜೆಡಿಎಸ್ ಜತೆ ಮೈತ್ರಿ ಕನಸು ಕಾಣುತ್ತಿದ್ದ ಕಮಲ ಪಾಳಯಕ್ಕೆ ಭರ್ಜರಿಯಾಗಿಯೇ ಚಳ್ಳೆಹಣ್ಣು ತಿನಿಸಿದ್ದಾರೆ. ಪ್ರಮುಖವಾಗಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ತನ್ವೀರ್ ಸೇಠ್ ಕಾರಣ ಅಂತ ಹೇಳಲಾಗುತ್ತಿದೆ.
ಭಾರೀ ಕುತೂಹಲ ಮೂಡಿಸಿದ್ದ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಟೊಂಕಕಟ್ಟಿ ನಿಂತ ತನ್ವೀರ್, ಮೈತ್ರಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಬಿಜೆಪಿ ನಾಯಕರಿಗೆ ಸಖತ್ ಶಾಕ್ ಕೊಟ್ಟಿದ್ದಾರೆ.

ಇನ್ನು, ಚುನಾವಣೆ ಮುಗಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ರಾಜಕಾರಣದಲ್ಲಿ ಕೊನೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಮೈಸೂರು ಮೇಯರ್ ಚುನಾವಣೆ ಒಂದು ಉತ್ತಮ ಉದಾಹರಣೆ ಎನ್ನುವ ಮೂಲಕ ಎದುರಾಳಿ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕೊನೆ ಹಂತದ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದೇವೆ. ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸಿಗುವ ಲಕ್ಷಣ ಇದ್ದ ಕಾರಣ ನಾವು ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು ಎಂದು ತಿಳಿಸಿದರು.

ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು, ಕೇಳಿಲ್ಲ ಎಂಬುದು ಬೇರೆ ಪ್ರಶ್ನೆ. ನಮಗೆ ನಮ್ಮ ಉದ್ದೇಶ ಈಡೇರಬೇಕಿತ್ತು ಅಷ್ಟೇ ಎಂದರು. ಹುಲಿಗಳನ್ನು ಬೋನಿಗೆ ಹಾಕಿದ್ದೇವೆ ಎನ್ನುವ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಸೇಠ್ ಅವರು, ಹುಲಿಗಳನ್ನು ಬೋನಿಗೆ ಹಾಕುವುದು ಹಳೆ ಸಂಸ್ಕೃತಿ. ಆದರೆ, ಮಂಗಗಳು ಎಲ್ಲಿ ಇರ್ತಾವೆ ಎಂಬುದು ಪ್ರತಾಪ್ಸಿಂಹಗೆ ಕೇಳಿ ಎಂದು ತನ್ವೀರ್ ಸೇಠ್ ವ್ಯಂಗ್ಯವಾಗಿ ನುಡಿದರು.
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆಸಲು ತನ್ವೀರ್ ಸಾಕಷ್ಟು ಶ್ರಮವಹಿಸಿದರು. ಮೈತ್ರಿಗಾಗಿ ಬಿಜೆಪಿ ನಾಯಕರು ನಡೆಸಿದ ಎಲ್ಲಾ ತಂತ್ರಗಳಿಗೂ ಪ್ರತಿತಂತ್ರ ಹೆಣೆದ ತನ್ವೀರ್, ಕಮಲಪಾಳಯಕ್ಕೆ ಟಾಂಗ್ ಕೊಟ್ಟು ಅಧಿಕಾರದ ಚುಕ್ಕಾಣಿ ಗಿಟ್ಟಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಗುದ್ದಾಟದಿಂದಾಗಿ ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದು ಬೀಳುವ ಸಾಧ್ಯತೆ ಇತ್ತು.
ಆದರೆ ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ತಪ್ಪು ಸಂದೇಶ ಹೋಗಬಾರದೆಂಬ ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ದೂರದೃಷ್ಟಿತ್ವ, ಬಿಜೆಪಿ ಜೊತೆಗಿನ ಮೈತ್ರಿ ಮಾಡಿಕೊಳ್ಳುವ ಸ್ಥಳೀಯ ಜೆಡಿಎಸ್ ನಾಯಕರ ಯೋಚನೆ ತಲೆಕೆಳಗಾಯಿತು ಎಂದು ಹೇಳಲಾಗಿದೆ. ಅದೇ ರೀತಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದ ಬಿಜೆಪಿ ಇಂದು ಮುಖಭಂಗ ಅನುಭವಿಸಿದೆ.












Click it and Unblock the Notifications