ಕೃಷ್ಣರಾಜ ಕ್ಷೇತ್ರವನ್ನು ಕೊರೊನಾಮುಕ್ತವಾಗಿಸಲು ರಾಮದಾಸ್ ಯತ್ನ
ಮೈಸೂರು, ಜುಲೈ 24: ಮೈಸೂರು ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸೋಂಕಿನ ನಿಯಂತ್ರಣಕ್ಕೆ ಮೈಸೂರು ನಗರದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳನ್ನು ವಿಕೇಂದ್ರೀಕರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೃಷ್ಣರಾಜ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತ್ಯೇಕ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ಶಾಸಕ ಎಸ್.ಎ.ರಾಮದಾಸ್ ಮೈಸೂರು ಮಕ್ಕಳ ಕೂಟದ ಆವರಣದಲ್ಲಿ ಉದ್ಘಾಟಿಸಿದರು.
Recommended Video
ಈ ಸಂದರ್ಭ ಮಾತನಾಡಿದ ಶಾಸಕರು, "ಮೈಸೂರಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಸೋಂಕಿನಿಂದ ಸಾವಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೃಷ್ಣರಾಜ ಕ್ಷೇತ್ರಕ್ಕೆ ಅಧಿಕಾರಿಗಳ ಕಾರ್ಯಪಡೆ ರಚಿಸಿ ಅವರಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ಹಂಚಲಾಗಿದೆ. ಈ ಕಾರ್ಯಪಡೆ ನಿರಂತರ ಕಾರ್ಯನಿರ್ವಹಿಸಿ ಕೃಷ್ಣರಾಜ ಕ್ಷೇತ್ರವನ್ನು ಕೋವಿಡ್ ನಿಂದ ಸಾವಿಲ್ಲದ ಕ್ಷೇತ್ರವನ್ನಾಗಿ ಪರಿವರ್ತಿಸಲು, ಪ್ರತ್ಯೇಕ ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿ ಇಂದು ಮೈಸೂರು ಮಕ್ಕಳ ಕೂಟದ ಆವರಣದಲ್ಲಿ ಪರೀಕ್ಷಾ ಕೇಂದ್ರ ಉದ್ಘಾಟಿಸಲಾಯಿತು" ಎಂದರು.
ಮೈಸೂರಲ್ಲಿ ಡೆತ್ ರೇಟ್ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿ
ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 115 ಕಂಟೈನ್ಮೆಂಟ್ ಝೋನ್ ಗಳಿದ್ದು, ಝೋನ್ ಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯುತ್ತಿದೆ. ಜೊತೆಗೆ 1 ವಲಯಕ್ಕೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಕಂಟೈನ್ಮೆಂಟ್ ಝೋನ್ ನಲ್ಲಿರುವ ಮನೆಗಳಿಗೆ ಅವಶ್ಯಕವಾಗಿರುವ ಪದಾರ್ಥಗಳನ್ನು ಒದಗಿಸುವ ದೃಷ್ಟಿಯಿಂದ ಪ್ರತ್ಯೇಕವಾಗಿ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.