ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಶಾಸಕ ಮಂಜುನಾಥ್
ಮೈಸೂರು, ನವೆಂಬರ್ 27: ಇತ್ತೀಚೆಗಷ್ಟೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದ ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ಅವರು, ಈ ಕುರಿತು ಜಿಲ್ಲಾಧಿಕಾರಿ ತಮಗೆ ಪತ್ರ ಬರೆದಿದ್ದರಿಂದ ಮತ್ತಷ್ಟು ಅಸಮಾಧಾನಗೊಂಡಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ಮಂಜುನಾಥ್, ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಬೆನ್ನ ಹಿಂದಿದ್ದಾರೆ ಎಂಬ ದುರಹಂಕಾರ ಬೇಡ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದರು. ನಿಮ್ಮ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಎರಡು ರಾಜ್ಯದ ಮುಖ್ಯಂತ್ರಿಗಳು ನಿಮ್ಮ ಬೆನ್ನ ಹಿಂದೆ ಇದ್ದಾರೋ ಅಥವಾ ಕಾಲ ಕೆಳಗೆ ಇದ್ದಾರೊ ಗೊತ್ತಿಲ್ಲ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಕಾನೂನು ಮೀರಿ ವರ್ತಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಎರಡು ದಿನವಾದರೂ ನನಗೆ ಪತ್ರ ತಲುಪಿಲ್ಲ
ಸಭೆಯಲ್ಲಿ ಶಾಸಕರು, ಜನಪ್ರತಿನಿಧಿಗಳು ಪ್ರಶ್ನೆ ಮಾಡುವುದು ಸಹಜ ಪ್ರಕ್ರಿಯೆ ಆಗಿದೆ. ಆದರೆ, ಡಿಸಿಯವರು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಮರುದಿನವೇ ಪತ್ರ ಬರೆದಿದ್ದಾರೆ. ಎರಡು ದಿನವಾದರೂ ನನಗೆ ಪತ್ರ ತಲುಪಿಲ್ಲ. ಆದರೆ ನನಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಬ್ಬ ಅಧಿಕಾರಿಯಾಗಿ ಜನಪ್ರತಿನಿಧಿಗಳ ಜೊತೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಶಾಸಕರ 'ಮಹಾರಾಣಿ' ಹೇಳಿಕೆಗೆ ಡಿಸಿ ರೋಹಿಣಿ ಸಿಂಧೂರಿ ತಿರುಗೇಟು
ಜನಪ್ರತಿನಿಧಿಗೆ ನೋಟಿಸ್ ರೀತಿ ಪತ್ರ
ಜಿಲ್ಲಾಧಿಕಾರಿ ನೇರವಾಗಿ ನನಗೆ ಪತ್ರ ಬರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ನನಗೆ ಬರೆದ ಪತ್ರವನ್ನು ಮಾಧ್ಯಮ, ಸಾರ್ವಜನಿಕರಿಗೆ ತಲುಪುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಪತ್ರ ಸಿಕ್ಕಿದೆ. ಜನಪ್ರತಿನಿಧಿಗೆ ನೋಟಿಸ್ ರೀತಿ ಪತ್ರ ಕೊಟ್ಟಿದ್ದಾರೆ. ಅವರು ಪಬ್ಲಿಕ್ ಸರ್ವೆಂಟ್, ಡಿಕ್ಟೇಟರ್ ಅಲ್ಲ ಎಂದು ಶಾಸಕ ಮಂಜುನಾಥ್ ಕಿಡಿಕಾರಿದರು.
ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳಿ
ನನಗೆ ಬ್ಲಾಕ್ಮೇಲ್ ರೀತಿಯಲ್ಲಿ ಪತ್ರ ಬರೆದಿದ್ದಾರೆ. ನಿಮ್ಮ ಫೈಲ್ಗಳು ನನ್ನ ಬಳಿ ಇವೆ ಅಂತ ಎಚ್ಚರಿಕೆ ನೀಡಿದ್ದಾರೆ. ಕೆಡಿಪಿ ಸಭೆಯಲ್ಲಿ ಆದ ಚರ್ಚೆಗೆ ನನ್ನ ಜಮೀನು ವಿಚಾರ ಬರೆದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ನಮ್ಮ ಅಪ್ಪನ ಆಸ್ತಿ ತೆಗೆದುಕೊಳ್ಳುವುದು ನಮಗೆ ಗೊತ್ತಿದೆ. ಈ ಬೆದರಿಕೆ ತಂತ್ರಕ್ಕೆ ನಾನು ಹೆದರುವುದಿಲ್ಲ. ನನ್ನನ್ನು ಎದುರಿಸುವ ಭ್ರಮೆಯಿಂದ ಹೊರಗೆ ಬನ್ನಿ. ಮೈಸೂರು ಜಿಲ್ಲೆ ನನ್ನದೇ ಅಂದುಕೊಳ್ಳಬೇಡಿ. ನಿಮ್ಮನ್ನೂ ಪ್ರಶ್ನೆ ಮಾಡುವವರು ಇರುತ್ತಾರೆ. ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ದುರಂಹಕಾರ ಬೇಡ
ನೀವು ಸಹೋದರಿ ಎಂದುಕೊಂಡು ಹೇಳುತ್ತಿದ್ದೇನೆ. ನೀವು ಇದನ್ನು ಮುಂದುವರಿಸುವುದಾದರೆ ನಾನು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ತಾಲ್ಲೂಕಿನ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಈ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡುತ್ತೇನೆ. ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಸ್ಪಂದಿಸುವ ಹೆಸರಿನಲ್ಲಿ ಜಿಲ್ಲಾಧಿಕಾರಿ ಮೆರವಣಿಗೆ ಮಾಡಬಹುದು. ಆದರೆ, ಜನರ ಕೆಲಸ ಮಾಡುವುದು ಜನಪ್ರತಿನಿಧಿಗಳೇ. ಸಿಎಂಗಳು ಬೆನ್ನಿಗಿದ್ದಾರೆ ಎಂಬ ದುರಂಹಕಾರ ಬೇಡ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ, ಪರಿಷತ್ ಸದಸ್ಯ ಧರ್ಮಸೇನಾ. ರಘು ಆಚಾರ್ ಭಾಗಿಯಾಗಿದ್ದರು.