ಮೈಸೂರಿನ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದೆ: ಸಚಿವ ಸೋಮಶೇಖರ್
ಮೈಸೂರು, ಜೂನ್ 5: "ಮೈಸೂರಿನಲ್ಲಿ ನಡೆದಿರುವ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದ್ದು, ಈ ಗೊಂದಲಕ್ಕೆ "ಇತಿ ಶ್ರೀ' ಹಾಡುವಂತೆ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದೇನೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಸಿಂಧೂರಿ v/s ಶಿಲ್ಪಾನಾಗ್ ಜಟಾಪಟಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ""ಎರಡು-ಮೂರು ದಿನದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಅವರಿಗೂ ಹೇಳಿದ್ದೇನೆ ಹಾಗೂ ದಯಮಾಡಿ ಇದನ್ನು ಸರಿಪಡಿಸಿ ಅಂತಾ ಮನವಿ ಮಾಡಿದ್ದೇನೆ. ಹೀಗಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಅನ್ನೋ ವಿಶ್ವಾಸವಿದೆ'' ಎಂದರು.
ಈ ಬೆಳವಣಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಎಲ್ಲಾ ಮಾಹಿತಿ ಕಲೆ ಹಾಕಿದ್ದು, ಸಿಎಂ ಸಹ ಅವರದ್ದೇ ಮೂಲಗಳಿಂದ ಮಾಹಿತಿಯನ್ನು ಪಡೆದಿರುತ್ತಾರೆ. ಆದ್ದರಿಂದ ಸಿಎಂ ಕ್ರಮಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲೇ ಸಿಎಂ ಏನು ಕ್ರಮ ಕೈಗೊಳ್ತಾರೆ ಅಂತ ಗೊತ್ತಾಗಲಿದೆ ಎಂದು ಹೇಳಿದರು.

ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೈಸೂರಿನ ಎಲ್ಲಾ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅದರ ವರದಿಯನ್ನು ಸಿಎಂಗೆ ಸಲ್ಲಿಸುತ್ತಾರೆ. ಆ ಮಾಹಿತಿ ಆಧಾರಿಸಿ ಕ್ರಮ ಆಗಲಿದೆ ಎಂದರು.
ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ನಾನು ಹೇಳುವುದಿಲ್ಲ. ಎಲ್ಲವನ್ನೂ ಮುಖ್ಯ ಕಾರ್ಯದರ್ಶಿ ಬಂದು ನೋಡಿದ್ದಾರೆ. ಅವರು ಸಂಗ್ರಹಿಸಿದ ಮಾಹಿತಿ ಸಿಎಂಗೆ ವರದಿ ಮಾಡುವರು. ನಾನು ಇಂದು ಸಂಜೆ ಅವರ ಬಳಿ ಮಾಹಿತಿ ಪಡೆದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳೇ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.












Click it and Unblock the Notifications