"ಧಮ್' ಪದ ಬಳಕೆ: ಮಾಜಿ ಸಿಎಂಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ
ಮೈಸೂರು, ಜೂನ್ 19: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಧಮ್ ಇಲ್ಲ ಅನ್ನುವ ಹೇಳಿಕೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಸಿಎಂ ಯಡಿಯೂರಪ್ಪನವರಿಗೆ ಧಮ್ ಇರುವ ಕಾರಣಕ್ಕೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದು, ಕುರುಬ ಸಮುದಾಯದ ಹಲವು ನಾಯಕರಿಗೆ ಸ್ಥಾನಮಾನ ನೀಡಿದ ದೊಡ್ಡ ಗುಣ ಅವರದು. ನಾನೂ ಸೇರಿದಂತೆ ಎಂಟಿಬಿ ನಾಗರಾಜ್, ಆರ್.ಶಂಕರ್ ಇತರರಿಗೆ ಅವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಅವರ ಧಮ್ ಏನು ಅನ್ನುವುದನ್ನು ತೋರಿಸಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವುದಕ್ಕೆ ಧಮ್ ಇಲ್ಲ, ಅಂತಹದ್ದರಲ್ಲಿ ಯಡಿಯೂರಪ್ಪಗೆ ಧಮ್ ಇದೆಯಾ ಎಂದು ಪ್ರಶ್ನೆ ಮಾಡ್ತೀರಾ? ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪಗೆ ಧಮ್ ಇದ್ದಿದ್ದಕ್ಕೆ ೨೬ ಸೀಟ್ ಗೆಲ್ಲಲು ಸಾಧ್ಯವಾಯಿತು. ಇವರಿಗೆ ಧಮ್ ಇಲ್ಲದೇ ಇರುವುದಕ್ಕೆ ಹೀನಾಯವಾಗಿ ಸೋತಿದ್ದು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ,
ಇದು ಹೈಕಮಾಂಡ್ ನಿರ್ಧಾರವಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದು ಮೈಸೂರಿನಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಂದ್ರ ಸರ್ಕಾರದಿಂದ 1,861 ಕೋಟಿ ರೂ. ಅನುದಾನದಲ್ಲಿ ಮುಂಗಡವಾಗಿ ಸಾವಿರ ಕೋಟಿ ನೀಡಿದ್ದಾರೆ. ಎರಡು ದಿನದ ಹಿಂದಷ್ಟೇ 461 ಕೋಟಿ ರೂ. ಹಣ ನೀಡಿದ್ದು, ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದಾರೆ ಎಂದರು.
ನರೇಗಾ ಕಾಮಗಾರಿ ಯೋಜನೆಯಡಿಯಲ್ಲಿ ಕೂಲಿ ಕೆಲಸಗಾರರಿಗೆ ಜಾಬ್ ಕಾರ್ಡ್ ವಿತರಿಸಿ ಕೆಲಸ ನಿರ್ವಹಿಸಿದ ಏಳು ದಿನಗಳ ಒಳಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ಈ ಸಂಬಂಧ ಚಾಮರಾಜನಗರ ಜಿಲ್ಲೆಯಲ್ಲಿ ನರೇಗಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು ಹೋಗುತ್ತಿದ್ದೇನೆ ಎಂದು ತಿಳಿಸಿದರು.












Click it and Unblock the Notifications