ಮೈಸೂರು: ಸಿದ್ದರಾಮಯ್ಯರನ್ನು ಪರ್ಸೆಂಟೇಜ್ ಕಿಂಗ್ ಎಂದ ಸಚಿವ ಈಶ್ವರಪ್ಪ
ಮೈಸೂರು, ನವೆಂಬರ್ 20: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ್ಸೆಂಟೇಜ್ ಕಿಂಗ್, ಅವರ ಸರ್ಕಾರ ಪರ್ಸೆಂಟೇಜ್ ತಗೆದುಕೊಂಡಿದ್ದಕ್ಕಾಗಿ ಜನ ಅವರನ್ನು ಕಿತ್ತೊಗೆದಿದ್ದಾರೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಸರ್ಕಾರವನ್ನು ಟೀಕಿಸುವ ಹಕ್ಕಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಪರ್ಸೆಂಟೇಜ್ ಅನ್ನುವುದು ಮುಖ್ಯವಾಹಿನಿಗೆ ಬಂದಿತು. ಪರ್ಸೆಂಟೇಜ್ ಆರೋಪ ಸಂಬಂಧ ಗುತ್ತಿಗೆದಾರ ಸಂಘದವರು ದಾಖಲೆ ನೀಡಿದರೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ತಿರುಗೇಟು ನೀಡಿದರು.
ವಿಡಿಯೋ; ನನ್ನ ಸೋಲಿಸಿ ಬಿಟ್ಟು ಇಲ್ಲಿ ಬಂದಿದ್ದೀರಿ; ಸಿದ್ದರಾಮಯ್ಯ ಗರಂ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ನೆಲೆ ಭದ್ರ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿಯೇ ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ:
ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಬಣ ರಾಜಕೀಯಕ್ಕೆ ಪಕ್ಷ ಸಂಪೂರ್ಣವಾಗಿ ನೆಲ ಕಚ್ಚಿದೆ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಅಲ್ಪಸಂಖ್ಯಾತರ ಹೆಸರಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡೋದನ್ನು ನಿಲ್ಲಿಸಲಿ. ಜಾತಿ ಜಾತಿ ಒಡೆದು ಸಿದ್ದರಾಮಯ್ಯ ರಾಜಕೀಯ ನೆಲೆ ಭದ್ರ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಕುರಿತು ವ್ಯಂಗ್ಯ:
ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಕಾರಣ. ಷಡ್ಯಂತ್ರ ಮಾಡಿ ಅವರನ್ನು ಸೋಲಿಸಿದರು. ಈಗ ತಮ್ಮನ್ನು ಸೋಲಿಸಿದ್ದೀರಿ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ದೂಷಿಸಿದ್ದಾರೆ. ಸಿದ್ದಾರಾಮಯ್ಯಗೆ ನಾಚಿಕೆ ಆಗಬೇಕು ಎಂದು ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.
ಶಂಖ ಊದುವ ಹೇಳಿಕೆಗೆ ಈಶ್ವರಪ್ಪ ಪ್ರತ್ಯುತ್ತರ:
ರಾಜ್ಯದಲ್ಲಿ ಮಳೆಯಿಂದ ಅನಾಹುತ ಆಗಿದ್ದರೂ ಬಿಜೆಪಿಯವರು ಸಮಾವೇಶ ನಡೆಸಿ ಶಂಖ ಊದಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ಸಚಿವ ಈಶ್ವರಪ್ಪ ಪ್ರತ್ಯುತ್ತರ ನೀಡಿದರು. ಜೆಡಿಎಸ್ ಪಕ್ಷದಲ್ಲಿ ಶಂಖ ಊದುವುದಕ್ಕೂ ಯಾರು ಇಲ್ಲದಂತಾಗಿದೆ. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಮಂದಿ ಅಭ್ಯರ್ಥಿಗಳನ್ನು ಹಾಕುತ್ತಾರೆ ಕಾದು ನೋಡೋಣ. ಕುಮಾರಸ್ವಾಮಿ ಬೊಗಳೆ ಹೊಡೆಯುವುದನ್ನು ನಿಲ್ಲಿಸಲಿ, ಜನರು ಈಗಲೇ ನಿಮ್ಮನ್ನು ರಿಜೆಕ್ಟ್ ಮಾಡಿದ್ದಾರೆ. ಇನ್ನಾದರೂ ಬುದ್ಧಿ ಕಲಿಯಿರಿ ಎಂದು ವಾಗ್ದಾಳಿ ನಡೆಸಿದರು.
"ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 16 ಸ್ಥಾನ":
ರಾಜ್ಯದಲ್ಲಿ ಈ ಬಾರಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 15 ರಿಂದ 16 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆ ಮೂಲಕ ವಿಧಾನ ಪರಿಷತ್ತಿನಲ್ಲೂ ಬಿಜೆಪಿ ಬಹುಮತ ಹೊಂದಲಿದೆ ಎಂದು ಸಚಿವ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದ ಸಚಿವರು:
ಮಳೆಯಿಂದಾಗಿ ಸಂಭವಿಸಿರುವ ಹಾನಿ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು. "ಮೈಸೂರು ಜಿಲ್ಲೆಯಲ್ಲಿ 500 ಹೆಕ್ಟೇರ್ ಬೆಳೆ ನಾಶವಾಗಿದೆ. 1994 ಮನೆಗಳಿಗೆ ಹಾನಿಯಾಗಿದ್ದು, 1907 ಮನೆಗಳು ಭಾಗಶಃ ಹಾನಿ ಉಂಟಾಗಿದೆ. 87 ಮನೆಗಳು ಸಂಪೂರ್ಣ ಹಾನಿಯಾಗಿವೆ. ನಗರ ಪ್ರದೇಶದಲ್ಲಿ 500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 67 ಶಾಲೆಗಳು, 33 ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಮೂರು ಜನ ಸಾವನ್ನಪ್ಪಿದ್ದಾರೆ. ಪರಿಹಾರ ಕಾರ್ಯಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದು, ವಿಶೇಷ ಅನುದಾನಕ್ಕೆ ಮನವಿ ಮಾಡುತ್ತೇವೆ," ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.