ನೀರು ಬಿಟ್ಟಿಲ್ಲ ಅಂದ್ರೆ ಬೆಂಕಿ ಹಚ್ತೀವಿ: ಎಂಸಿಸಿ ಸದಸ್ಯ ಆಕ್ರೋಶ
ಕುಡಿಯುವ ನೀರನ್ನು ಕೊಡದೆ ಇದ್ದಲ್ಲಿ ನಗರ ಪಾಲಿಕೆ ಕಚೇರಿಗೇ ಬೆಂಕಿ ಹಾಕುವುದಾಗಿ ಬೆದರಿಕೆವೊಡ್ಡಿ, ನಗರದ ನೀರಿನ ಸಮಸ್ಯೆಯ ಬಗ್ಗೆ ಮೈಸೂರು ನಗರ ಪಾಲಿಕೆ ಸದಸ್ಯ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು, ಮೇ 9: 'ರೀ ಕುಡಿಯುವ ನೀರು ಕೊಡ್ರಿ ಮೊದಲು. ಇಲ್ಲಾಂದ್ರೆ ಮೈಸೂರು ನಗರ ಪಾಲಿಕೆ (ಎಂಸಿಸಿ) ಕಚೇರಿಗೆ ಬೆಂಕಿ ಹಚ್ಚಿ ಜೈಲಿಗೂ ಹೋಗಲು ನಾನು ಸಿದ್ಧ ಕಣ್ರಿ' ಹೀಗೆಂದು ಹರಿಹಾಯ್ದಿದ್ದು ಮೈಸೂರು ನಗರ ಪಾಲಿಕೆ ಸದಸ್ಯ ಕೆಂಪಣ್ಣ.
ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಕೆ.ಆರ್.ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಸಭೆ ನಡೆಯುತ್ತಿದ್ದ ವೇಳೆ, ಏಕಾಏಕಿ ಆಗಮಿಸಿದ ನಗರ ಪಾಲಿಕೆ ಸದಸ್ಯ ಕೆಂಪಣ್ಣ, ಮೇಯರ್ ರವಿಕುಮಾರ್ ಗೆ ತರಾಟೆಗೆ ತೆಗೆದುಕೊಂಡರು.[ಒಡೆಯರ್ ವಂಶಸ್ಥ ಯದುವೀರ್ ನೆಟಿಜನ್ಸ್ ಗೆ ಕೊಟ್ರು ಎಚ್ಚರಿಕೆ]

ಬರೀ ಕಚೇರಿಯಲ್ಲಿ ಕುಳಿತು ಮೀಟಿಂಗ್ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು. ಕಳೆದ ಒಂದು ವಾರದಿಂದ ನೀರಿಲ್ಲದೆ ಜನ ನನಗೆ ಬೈಯುತ್ತಿದ್ದಾರೆ. ಇಲ್ಲಿ ಕುಳಿತು ಸಭೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸ್ಥಳಕ್ಕೆ ಬನ್ನಿ ಮೊದಲು ಎಂದು ಗಲಾಟೆ ಮಾಡಿದರು. ಈ ವೇಳೆ ಪಾಲಿಕೆಯ ಇತರ ಸದಸ್ಯರು ಮಧ್ಯಪ್ರವೇಶಿಸಿದ್ದರಿಂದ ಮಾತಿನ ಚಕಮಕಿ ಉಂಟಾಯಿತು.
ಎಲ್ಲಾ ವಾರ್ಡ್ ಗಳಲ್ಲೂ ಸಮಸ್ಯೆ ಇದೆ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಈ ರೀತಿ ಸಭೆಯಲ್ಲಿ ಗದ್ದಲವೆಬ್ಬಿಸುವುದು ಸರಿಯಲ್ಲ ಎಂದು ಒತ್ತಾಯ ಮಾಡಿದರೂ, ಕೆಂಪಣ್ಣನವರು ಮಾತೇ ಕೇಳಲಿಲ್ಲ.[ವಿಶ್ವನಾಥ್ ರೊಂದಿಗೆ ನಾನು ಮಾತನಾಡುವುದಿಲ್ಲ: ಸಿದ್ದರಾಮಯ್ಯ]
ಸದಸ್ಯರ ಮಾತಿಗೆ ಸುಮ್ಮನಾಗದ ಕೆಂಪಣ್ಣ, ಅಧಿಕಾರಿಗಳು ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. 15 ಲಕ್ಷ ನೀರು ಲೀಕೇಜ್ ಆಗಿದೆ ಎಂದು ಹೇಳುತ್ತಾರೆ. ಟ್ಯಾಂಕ್ ನೀರು ಮೂರು ಗಂಟೆಯಲ್ಲಿ ಖಾಲಿಯಾಗಲು ಹೇಗೆ ಸಾಧ್ಯ. ಜನ ನಮ್ಮನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಕೂಡಲೇ ನೀರು ಬಿಡದಿದ್ದರೆ ಬೆಂಕಿ ಹಾಕಿ ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಸೋಮಶೇಖರ್, ಎಲ್ಲಾ ವಾರ್ಡ್ ಗಳಲ್ಲೂ ನೀರಿನ ಸಮಸ್ಯೆ ಇದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಿ ಬಗೆಹರಿಸಿಕೊಳ್ಳಬೇಕು.
ಎಲ್ಲಾ ವಾರ್ಡ್ ಗಳಿಗೂ ಪ್ರತಿನಿತ್ಯ ನೀರು ಬಿಡುವ ವ್ಯವಸ್ಥೆ ಮಾಡಬೇಕು. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಲೈನ್ ಗಳಿಗೆ ನೀರು ಹರಿಸಬೇಕು. ಅಧಿಕಾರಿಗಳು, ಲೈನ್ ಮನ್ ಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಒಟ್ಟಾರೆ ಮೈಸೂರಿನ ನೀರಿನ ಸಮಸ್ಯೆ ಪಾಲಿಕೆ ಅಧಿಕಾರಿಗಳ ಜಟಾಪಟಿಗೂ ಕಾರಣವಾಗಿರುವುದು ಬೇಸರದ ಸಂಗತಿ.












Click it and Unblock the Notifications