ಮೈಸೂರು ಪಾಲಿಕೆ ಚುನಾವಣೆ; ಬ್ರೇಕಿಂಗ್ ನ್ಯೂಸ್ ಕೊಟ್ಟ ಸಚಿವರು!
ಮೈಸೂರು, ಫೆಬ್ರವರಿ 08; "ನಾಳೆ ಅಥವಾ ನಾಡಿದ್ದು ಮೇಯರ್-ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಲಿದೆ" ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು. ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಭಾರಿ ಕುತೂಹಲಕ್ಕೆಕಾರಣವಾಗಿದೆ.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು, "ಮೀಸಲಾತಿ ವಿಚಾರದಲ್ಲಿ ರಾಜ್ಯಾದ್ಯಂತ ಸ್ವಲ್ಪ ಸಮಸ್ಯೆ ಇತ್ತು. ವಿಧಾನಸಭೆ ಅಧಿವೇಶನ ಕೂಡ ಇತ್ತು. ಹೀಗಾಗಿ ಮೀಸಲಾತಿ ಪ್ರಕಟವಾಗುವುದು ತಡವಾಗಿದೆ. ನಾಳೆ ಅಥವಾ ನಾಡಿದ್ದು ಮೀಸಲಾತಿ ಘೋಷಣೆ ಆಗಲಿದೆ" ಎಂದರು.
"ಜೆಡಿಎಸ್ ಜೊತೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ನವರು ತಿರಸ್ಕಾರ ಮಾಡಿದ್ದಾರೆ. ಆದರೆ, ನಾವು ಜೆಡಿಎಸ್ನವರನ್ನು ಒಪ್ಪಿಕೊಳ್ಳುತ್ತೇವೆ" ಎಂದು ಹೇಳಿದ ಸಚಿವರು, ಜೆಡಿಎಸ್ ಜೊತೆ ಮೈತ್ರಿ ಆಗುವುದರ ಬಗ್ಗೆ ಸುಳಿವು ನೀಡಿದರು.

"ಮೈಮುಲ್ ಚುನಾವಣೆಯಲ್ಲಿ ಯಾರನ್ನು ಕಣಕ್ಕೀಳಿಸಬೇಕೆಂದು ಬಿಜೆಪಿ ಕೋರ್ ಕಮಿಟಿ ತೀರ್ಮಾನ ಮಾಡುತ್ತದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮಾರ್ಚ್ ನಂತರ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ" ಎಂದು ಎಸ್. ಟಿ. ಸೋಮಶೇಖರ್ ಹೇಳಿದರು.
ಕಿಮ್ಮತ್ತು ಇಲ್ಲ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, "ಅವರ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಅವರಿಗೆ ಮಾತನಾಡುವ ಚಟ ಇದೆ ಅಷ್ಟೇ. ಪಕ್ಷದ ಅಧ್ಯಕ್ಷರು ಕೇಂದ್ರದ ನಾಯಕರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳೋಬೇಕೋ ಅದನ್ನು ಮಾಡುತ್ತಾರೆ" ಎಂದರು.
"ಅವರು ಹೇಳಿದ್ದು ಇದುವರೆಗೂ ಏನು ಆಗಿಲ್ಲ. ಅವರು ನಾನು ಇದ್ದೀನಿ ಅಂತಾ ತೋರಿಸಿಕೊಳ್ಳಲು ಹೇಳಿಕೆ ನೀಡುತ್ತಾರೆ. ಅವರ ಹಿಂದೆ ಯಾರೂ ಇಲ್ಲ. ಅವರಿಗೆ ಬೆಂಬಲ ಕೊಡುವವರು ಯಾರೂ ಇಲ್ಲ" ಎಂದು ಸಚಿವರು ತಿಳಿಸಿದರು.












Click it and Unblock the Notifications