ಮೈಸೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗಾಂಧಿ ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳು
ಮೈಸೂರು, ನವೆಂಬರ್ 6: ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.
ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ದಂಡಿಯಾತ್ರೆ ಚಿತ್ರಣದ ಸ್ಮಾರಕದಲ್ಲಿನ ಗಾಂಧಿ ಪ್ರತಿಮೆಯನ್ನು ಶುಕ್ರವಾರ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಗಾಂಧೀಜಿ ಕೈಯಲ್ಲಿ ಹಿಡಿದಿರುವ ಕೋಲು, ಕನ್ನಡಕ ಮತ್ತು ಎಡಗೈಯನ್ನು ಭಗ್ನಗೊಳಿಸಿದ್ದಾರೆ. ಗಾಂಧಿಯ ಕೈಯಲ್ಲಿದ್ದ ಕಂಚಿನ ಊರುಗೋಲನ್ನು ಹೊತ್ತೊತ್ತೊಯ್ಯುವ ಮೂಲಕ ಮಹಾತ್ಮ ಗಾಂಧಿಗೆ ಅಪಮಾನ ಎಸಗಿದ್ದಾರೆ.

ಮದ್ಯ ವ್ಯಸನಿಗಳಿಂದ ಈ ಕೃತ್ಯ ನಡೆದಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದು, ಘಟನೆಯನ್ನು ಖಂಡಿಸಿ ಸ್ಥಳೀಯರು ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ಉದ್ಯಾನದಲ್ಲಿ ಸೂಕ್ತವಾದ ಭದ್ರತೆ ಇಲ್ಲ. ಹೀಗಾಗಿ ಇಲ್ಲಿ ಅನೈತಿಕ ಚಟುವಟಿಕೆಗಳೂ ಸಾಗುತ್ತಿವೆ. ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಕಿಡಿಗೇಡಿಗಳು ಕೃತ್ಯ ಎಸಗುತ್ತಾರೆ. ಇಂದು ಗಾಂಧೀಜಿಯ ಪ್ರತಿಮೆ ಭಗ್ನಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಡಳಿತ ಈ ಘಟನೆಯ ಕುರಿತು ಹಾಗೂ ಉದ್ಯಾನದ ಭದ್ರತೆಗೆ ಸಂಬಂಧಿಸಿದಂತೆಯೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.












Click it and Unblock the Notifications