ಮಧ್ಯಪ್ರದೇಶದ ಕಳ್ಳರ ಗ್ಯಾಂಗ್ ಅಂದರ್: ಬೆಳಕಿಗೆ ಬಂತು 28 ಮನೆಗಳ್ಳತನ ಪ್ರಕರಣ
ಮೈಸೂರು, ಜನವರಿ 21: ನಿಮ್ಮ ಮನೆಗೆ ಹ್ಯಾಂಗಿಂಗ್ ಲಾಕ್ ಹಾಕಿ ಊರಿಗೆ ತೆರಳಿದ್ದೀರಾ? ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹಾಲು, ದಿನಪತ್ರಿಕೆಗಳನ್ನು ಹಾಕದಿರಲು ತಿಳಿಸಿಲ್ಲವೆ? ಎಚ್ಚರ ಮಾಲೀಕರೇ? ನೀವು ಮನೆಯಲ್ಲಿ ಇಲ್ಲದಿರುವುದನ್ನು ನಿಮ್ಮ ಮನೆಯ ವಾತಾವರಣ ಖಚಿತಪಡಿಸಿದರೆ ಮನೆಗೆ ಕನ್ನ ಗ್ಯಾರಂಟಿ.
ಹೌದು, ಇಂತಹ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕನ್ನ ಹಾಕುತ್ತಿದ್ದ ಮಧ್ಯಪ್ರದೇಶದ ಖದೀಮರ ತಂಡವೊಂದನ್ನು ಸಿಸಿಬಿ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬೇಟೆಯಾಡಿದ್ದಾರೆ. ಆದರೆ, ತಂಡದ ಮತ್ತಷ್ಟು ಸದಸ್ಯರು ನಗರದಲ್ಲಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಪರ ಊರಿಗೆ ತೆರಳುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಖದೀಮರ ತಂಡ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸುಳಿವರಿತ ಸಿಸಿಬಿ ಪೊಲೀಸರು ಎರಡು ದಿನಗಳ ಹಿಂದೆ ಮನೆಗಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಐವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆ ವೇಳೆ ತಾವು ಕಳ್ಳತನ ನಡೆಸುವ ವಿಧಾನ, ಮನೆಗಳನ್ನು ಆಯ್ಕೆ ಮಾಡಿಕೊಳ್ಳುವ ರೀತಿಯನ್ನು ಕಳ್ಳರು ವಿವರವಾಗಿ ತಿಳಿಸಿದ್ದಾರೆ.
ಖದೀಮರು ನೀಡಿದ ಮಾಹಿತಿ ಆಧರಿಸಿ ಕಳ್ಳರೇ ತುಂಬಿರುವ ಮಧ್ಯಪದೇಶದ ಗ್ರಾಮವೊಂದಕ್ಕೆ ತೆರಳಿ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಸಾಹಸ ಮೆರೆದಿದ್ದಾರೆ.
15 ನಿಮಿಷದಲ್ಲಿ ರೈಲು ದೋಚಿದ ದುಷ್ಕರ್ಮಿಗಳು, ಸನ್ ಗ್ಲಾಸ್ ಕೂಡ ಬಿಡಲಿಲ್ಲ
ಮಧ್ಯಪ್ರದೇಶದ ಧಾರ್ ಜಿಲ್ಲೆಯ ತಾಂಡಾ ತಾಲ್ಲೂಕು, ಬಗೌಲಿ ಗ್ರಾಮದ ನಿವಾಸಿಗಳಾದ ಭರತ್(27), ಮಾನ್ಸಿಂಗ್(30), ಆಲಂಸಿಂಗ್(21), ತರ್ಸಿಂಗ್ ಗ್ರಾಮದ ನಿವಾಸಿ ಕಾಲು ದಾವರ್(25) ಹಾಗೂ ಶಾಗಿಯಾ ಗ್ರಾಮದ ನಿವಾಸಿ ಪಾರ್ಸಿಂಗ್(47) ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿದ ವೇಳೆ ಅವರುಗಳು ಮನೆ ಕಳ್ಳತನ ಮಾಡಲು ಇಟ್ಟುಕೊಂಡಿದ್ದ ಟಪಾರಿಯ ಕಟರ್, ಕಬ್ಬಿಣದ ರಾಡು, ರಿಂಚ್ ಸ್ಪ್ಯಾನರ್, ಸ್ಕ್ರೂ ಡ್ರೈವರ್ ಮತ್ತಿತರ ಆಯುಧಗಳು ಮತ್ತು ಪರಿಕರಗಳನ್ನು ಇಟ್ಟುಕೊಂಡಿದ್ದ ಬ್ಯಾಗನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಕಿಗೆ ಬಂತು
ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ವೇಳೆ ಮೈಸೂರು, ಶಿವಮೊಗ್ಗ, ಭದ್ರಾವತಿ, ಬೆಳ್ಳೂರು, ತಮಿಳುನಾಡಿನಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಒಟ್ಟು 28 ಮನೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಆ ಬ್ಯಾಂಕ್ ಉದ್ಯೋಗಿ ಕದ್ದಿದ್ದು 84 ಲಕ್ಷ ರುಪಾಯಿ, ಎಲ್ಲವೂ ನಾಣ್ಯಗಳೇ!
ಕಳ್ಳರ ಟಾರ್ಗೆಟ್
ಆರೋಪಿಗಳು ಬಸ್ಸಿನ ಮೂಲಕ ಮಧ್ಯಪ್ರದೇಶದಿಂದ ಮೈಸೂರಿಗೆ ಬಂದು ಹಗಲು ವೇಳೆ ಹ್ಯಾಂಗಿಂಗ್ ಲಾಕ್ ಹಾಕಿರುವ ಮನೆಗಳನ್ನು ಹಾಗೂ ಹಲವು ದಿನಗಳಿಂದ ದಿನ ಪತ್ರಿಕೆಗಳು ಮನೆಯ ಮುಂದೆ ಬಿದ್ದಿರುವ ಮನೆಗಳನ್ನು ಗುರುತಿಸಿಕೊಂಡು ಹೋಗುತ್ತಿದ್ದರು. ಕತ್ತಲಾಗುತ್ತಿದ್ದಂತೆ ಮತ್ತೆ ಅಲ್ಲಿಗೆ ಬರುತ್ತಿದ್ದ ಅವರು, ಮನೆಗಳ ಬಳಿ ಇರುವ ಪೊದೆಗಳ ಬಳಿ ಅವಿತು ಕುಳಿತು ಮಧ್ಯರಾತ್ರಿ 1 ಗಂಟೆ ನಂತರ ಮನೆಗಳ ಬೀಗ ಮುರಿದು, ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡುತ್ತಿದ್ದರು.
ಮಹಿಳಾ ಇನ್ಸ್ಪೆಕ್ಟರ್ ಮನೆಯಲ್ಲಿ ಕಳವು: ನಾಲ್ವರ ಬಂಧನ
ಊರಿಗೆ ವಾಪಸ್
ಕಳ್ಳತನ ನಡೆಸಿದಾಗ ಆ ಮನೆಯಲ್ಲಿ ಅವರು ಅಂದುಕೊಂಡಷ್ಟು ಚಿನ್ನಾ ಭರಣಗಳು ದೊರಕಿದರೆ, ತಕ್ಷಣವೇ ಅಲ್ಲಿಂದ ಗಾಮಾಂತರ ಬಸ್ ನಿಲ್ದಾಣಕ್ಕೆ ಬಂದು ಯಾವುದೋ ಬಸ್ಸನ್ನಾದರೂ ಹತ್ತಿ ಬೇರೊಂದು ಊರಿಗೆ ತೆರಳಿ ನಂತರ ಮಧ್ಯಪದೇಶಕ್ಕೆ ಹೋಗುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ಅವರು ರಾಜ್ಯದ ಯಾವುದೇ ನಗರಗಳಲ್ಲಿ ಮಾರಾಟ ಮಾಡಿದ ಉದಾಹರಣೆ ಇಲ್ಲ. ತಮ್ಮ ಊರಿಗೆ ತೆರಳಿ ಅಲ್ಲಿನ ಕೆಲ ವ್ಯಕ್ತಿಗಳಿಗೆ ಮಾತ್ರ ಮಾರಾಟ ಮಾಡುತ್ತಿದ್ದರು. ಅದೂ ಕೂಡ ಅವರು ಕೊಟ್ಟಷ್ಟು ಹಣಕ್ಕೆ ಮಾತ್ರ.
ಪೊಲೀಸರ ವಶಕ್ಕೆ
ಖದೀಮರು ವಾಸವಿರುವ ಸ್ಥಳವು ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶ. ಆ ಊರಿನ ಬಹುತೇಕ ಜನರು ಕಳ್ಳತನ ಹಾಗೂ ವಿವಿಧ ಅಪರಾಧ ಹಿನ್ನೆಲೆಯುಳ್ಳವರು. ಇವರನ್ನು ಬೆನ್ನಟ್ಟಿ ಹೋಗುವ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಚಾಣಾಕ್ಷತೆ ಅವರಲ್ಲಿತ್ತು. ಹೀಗಾಗಿ ಕಳವಾದ ವಸ್ತುಗಳನ್ನು ವಶಕ್ಕೆ ಪಡೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಆದರೂ ಛಲ ಬಿಡದ ಸಿಸಿಬಿ ಪೊಲೀಸರು ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.