Prajwal Revanna Case: ದೇವರಾಜೇಗೌಡರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಂ.ಲಕ್ಷ್ಮಣ್ ಒತ್ತಾಯ
ವಕೀಲ ದೇವರಾಜೇಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಪ್ರೀತಂ ಗೌಡ, ಕಾರ್ತಿಕ್ ಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್ಡ್ರೈವ್ ಕೊಡಿಸಿದ್ದು ಯಾರು? ಎಲ್ಲಿಂದ ಖರೀದಿಸಿದರು? ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಒಂದರೆಡು ದಿನಗಳಲ್ಲಿ ಹೇಳುತ್ತೇವೆ, ಎಂದು ಸವಾಲು ಹಾಕಿದರು.

ದೇಶದಲ್ಲಿ 68 ಬಿಜೆಪಿ ಶಾಸಕರ ಸೆಕ್ಸ್ ಸಿಡಿ ಪ್ರಕರಣಗಳಿವೆ. ಕರ್ನಾಟಕದಲ್ಲಿಯೇ 14 ಶಾಸಕರ ಸಿಡಿಗಳಿವೆ. ಇವರೆಲ್ಲರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕ ಅಶೋಕ್ ಮಾಹಿತಿ ಪಡೆದುಕೊಳ್ಳಲಿ ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮೇಲೆ ನಂಬಿಕೆ ಇಲ್ಲದಿದ್ದರೆ ಸರಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಸಿಬಿಐಗೆ ವಹಿಸುವಂತೆ ಮೈತ್ರಿ ಪಕ್ಷದ ಮೇಲೆ ಒತ್ತಡ ತರಲಿ ಎಂದು ಹೇಳಿದರು.
ಜೆಡಿಎಸ್ ನಾಯಕರು ಯಾರನ್ನು ರಕ್ಷಿಸಲು ಪ್ರತಿಭಟನೆ ಮಾಡುತ್ತಿದ್ದಾರೆ? ಪ್ರತಿಭಟನೆ ವೇಳೆ ತನಿಖೆ ಬೇಡವೆಂದು ಭಿತ್ತಿಪತ್ರ ಹಿಡಿದಿದ್ದಾರೆ. ಪ್ರಜ್ವಲ್ ಬಂಧನ ಮಾಡದಂತೆ ತಡೆಯುತ್ತಿದ್ದಾರೆಯೇ? ಪ್ರಜ್ವಲ್ ರೇವಣ್ಣ ಯಾಕೆ ತನಿಖೆಗೆ ಸಹಕರಿಸುತ್ತಿಲ್ಲ? ಅಮಿತ್ ಶಾ ಯಾರನ್ನು ಕಾಪಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣವನ್ನು ಬಿಟ್ಟು ಪೆನ್ಡ್ರೈವ್ ಹಂಚಿದವರ ಬಗ್ಗೆ ಕೂಗಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕೊಲೆ ಮಾಡಿದವನನ್ನು ಬಿಟ್ಟು ಕತ್ತಿ ತಯಾರಿಸಿದವನಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸುವಂತಿದೆ, ಎಂದು ಟೀಕಿಸಿದರು.
ದೇಶ ಬಿಟ್ಟು ಕಳುಹಿಸಿದ್ದು ಯಾರು?
ಪ್ರಜ್ವಲ್ ರೇವಣ್ಣಗೆ 15 ನಿಮಿಷದಲ್ಲಿ ರಾಜತಾಂತ್ರಿಕ ಪಾಸ್ ಕೊಟ್ಟು ವೀಸಾ ಸಮೇತ ಮಧ್ಯರಾತ್ರಿ ದೇಶ ಬಿಟ್ಟು ಕಳುಹಿಸಿದ್ದು ಯಾರು? ಈ ಪ್ರಕರಣದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಡಬಲ್ ಸ್ಟ್ಯಾಂಡ್ ತೆಗೆದು ಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಪಾದಿಸಿದ ಮರ್ಯಾದೆಯನ್ನು ಸಂಪೂರ್ಣವಾಗಿ ಹರಾಜು ಹಾಕಿದ್ದಾರೆ. ಈ ಪ್ರಕರಣದಿಂದ ಒಕ್ಕಲಿಗ ಸಮುದಾಯ ತಲೆ ತಗ್ಗಿಸುವಂತಾಗಿದೆ. ಹೆಣ್ಣು ಮಕ್ಕಳ ಮಾನ ಹರಾಜಾಗಿದೆ ಎಂದರು.












Click it and Unblock the Notifications