ಮೈಸೂರು; ಪ್ರೇಯಸಿಗೆ ಚಾಕು ಇರಿದು ಪೊಲೀಸರಿಗೆ ಶರಣಾದ ಯುವಕ
ಮೈಸೂರು, ನವೆಂಬರ್ 16: ಇಲ್ಲಿನ ದೀವಾನ್ಸ್ ರಸ್ತೆಯಲ್ಲಿ ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕುವಿನಿಂದ ಇರಿದ ಯುವಕ ಪೊಲೀಸರಿಗೆ ಶರಣಾಗಿದ್ದಾನೆ.
ಗಗನ್ ಹಾಗೂ ಸುನೀತಾ (ಹೆಸರು ಬದಲಿಸಲಾಗಿದೆ) ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮಧ್ಯೆ ಯುವಕನ ಡ್ರೈವರ್ ಉದ್ಯೋಗ ಮದುವೆಗೆ ಅಡ್ಡಿ ಆಗಿತ್ತು. 'ನೀನು ಡ್ರೈವರ್ ಆಗಿರುವುದರಿಂದ ಮದುವೆ ಆಗುವುದಿಲ್ಲ" ಅಂತ ಪ್ರೇಯಸಿ ಹೇಳಿದ್ದು, ಇದರಿಂದ ಆಕ್ರೋಶಗೊಂಡ ಪ್ರಿಯಕರ ಭಾನುವಾರ, ನ.15ರಂದು ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವುದಾಗಿ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾಹಿತಿ ನೀಡಿದ್ದಾರೆ.
ಬೈಕ್ ಇಲ್ಲ ಅಂತ ಲೇವಡಿ ಮಾಡಿದ ಪ್ರೇಯಸಿ: ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಿಯಕರ!
ಇದೀಗ ಆಸ್ಪತ್ರೆಯಲ್ಲಿ ಯುವತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಕೊಲೆಗೆ ಯತ್ನಿಸಿದ ಪ್ರೇಮಿ ಪೊಲೀಸರ ವಶದಲ್ಲಿದ್ದಾನೆ. ಗಗನ್ ಮತ್ತು ಸುನೀತಾ ಕೆ.ಆರ್.ಮೊಹಲ್ಲಾ ನಿವಾಸಿಗಳಾಗಿದ್ದು, ಯುವತಿಗೆ 18 ವರ್ಷವಾದ ನಂತರ ಮದುವೆ ಆಗಲು ಇಬ್ಬರೂ ತೀರ್ಮಾನಿಸಿದ್ದರು. ಆದರೆ ಇವರ ಪ್ರೀತಿ ವಿಷಯ ಮನೆಯವರಿಗೆ ಗೊತ್ತಾಗಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಆ ಬಳಿಕ ಯುವತಿ ಗಗನ್ ನನ್ನು ನಿರ್ಲಕ್ಷಿಸಿದ್ದಾಳೆ.
ಜೊತೆಗೆ ಗಗನ್ ಡ್ರೈವರ್ ಕೆಲಸಕ್ಕೆ ಸೇರಿದ್ದ ಕುರಿತು ಸುನೀತಾ ಬೇಸರ ಮಾಡಿಕೊಂಡಿದ್ದಳು ಎನ್ನಲಾಗಿದೆ. ನಾಲ್ಕೈದು ತಿಂಗಳಿಂದ ಇದೇ ವಿಚಾರಕ್ಕೆ ಜಗಳ ಕೂಡ ಆಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಗಗನ್ ಭಾನುವಾರ ಬೆಳಿಗ್ಗೆ ಮನೆ ಬಳಿ ನಿಂತಿದ್ದ ಸುನೀತಾಗೆ ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾಗಿದ್ದಾನೆ.
ಗಗನ್ ಮೇಲೆ ಈ ಹಿಂದೆಯೇ ದೇವರಾಜ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಕೇಸ್ ದಾಖಲಾಗಿದೆ. ಸಣ್ಣಪುಟ್ಟ ಕೇಸ್ಗಳಲ್ಲಿ ಭಾಗಿಯಾಗಿದ್ದ ಗಗನ್ ಆಟೋ ಚಾಲನೆ ಮಾಡುತ್ತಿದ್ದ. ಇತ್ತೀಚೆಗೆ ಕಾರು ಚಾಲಕನಾಗಿ ಜೀವನ ಸಾಗಿಸುತ್ತಿದ್ದ. ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.