ಮೈಸೂರಿನಲ್ಲಿ ಕಾಂಗ್ರೆಸ್ ಸೋಲ್ತು ಅನ್ಕೊಳ್ಳಿ, ಸಮ್ಮಿಶ್ರ ಸರಕಾರದ ಕಥೆ?
Recommended Video
ಮೇ23 ಜನಸಾಮಾನ್ಯರನ್ನು ಹೇಗೆ ಕುತೂಹಲದಿಂದ ಕಾಯುವಂತೆ ಮಾಡಿದೆಯೋ, ಹಾಗೇ, ಸಮ್ಮಿಶ್ರ ಸರಕಾರದ ಭವಿಷ್ಯವೂ ಕೂಡಾ. ಒಂದೋ ಕುಮಾರಸ್ವಾಮಿ ಸರಕಾರ ಇರುತ್ತೆ, ಇಲ್ಲವೋ ರಾಜಕೀಯ ಸ್ಥಿತ್ಯಂತರ ನಿಶ್ಚಿತ ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.
ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆಯ ಫಲಿತಾಂಶ ರಾಜ್ಯದಲ್ಲಿ ಏನಿರುತ್ತೋ? ಒಂದು ಕಡೆ ಮೋದಿ ಜಪ, ಇನ್ನೊಂದೆಡೆ ಎರಡು ಪಕ್ಷಗಳ ಒಗ್ಗಟ್ಟಿನ ಮಂತ್ರದ ನಡುವೆ, ಎರಡೂ ಪಕ್ಷಗಳ ಮುಖಂಡರ ಅಪಸ್ವರ, ಇದನ್ನೆಲ್ಲಾ ನೋಡಿ, ಮತದಾರ ಈಗಾಗಲೇ ತನ್ನ ನಿರ್ಧಾರವನ್ನು ಮತಪೆಟ್ಟಿಗೆಯಲ್ಲಿ ಹಾಕಿದ್ದಾನೆ. ಇನ್ನೊಂದು ಇಪ್ಪತ್ತು ದಿವಸ ಕಾಯಬೇಕಷ್ಟೇ..
ಆದರೆ, ಒಟ್ಟು 28 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಏನೇ ಬರಲಿ, ಸಮ್ಮಿಶ್ರ ಸರಕಾರದ ಭವಿಷ್ಯವನ್ನು ಬರೆಯುವುದು ನಾಲ್ಕೈದು ಕ್ಷೇತ್ರಗಳ ರಿಸಲ್ಟ್ ಎನ್ನುವುದು ನಿಶ್ಚಿತ. ಅವು ಯಾವುದೆಂದರೆ, ಹಾಸನ, ಮಂಡ್ಯ, ತುಮಕೂರು, ಮೈಸೂರು ಮತ್ತು ಶಿವಮೊಗ್ಗ ಕೂಡಾ..
ರಾಜ್ಯದ ಈ 3 'ಎಚ್ಎಂಟಿ' ಕ್ಷೇತ್ರದ ಫಲಿತಾಂಶದ ಮೇಲೆ ಊರಿಗೆಲ್ಲಾ ಕಣ್ಣು
ಈ ಐದು ಕ್ಷೇತ್ರಗಳು ಯಾಕೆ ಮಹತ್ವ ಪಡೆದಿದೆಯಂದರೆ ಐದರಲ್ಲಿ ಮೂರರಲ್ಲಿ ಗೌಡ್ರ ಕುಟುಂಬ, ಒಂದರಲ್ಲಿ ಯಡಿಯೂರಪ್ಪ ಕುಟುಂಬ ಮತ್ತು ಇನ್ನೊಂದು ಸಿದ್ದರಾಮಯ್ಯನವರ ಪ್ರತಿಷ್ಠೆಯ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರಗಳ ಫಲಿತಾಂಶ, ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯನ್ನು ಸೂಚಿಸಲಿದೆ. ಸಂಚಲನ ಮೂಡಿಸಿದ ಜಿ ಟಿ ದೇವೇಗೌಡ್ರ ಹೇಳಿಕೆಯ ಹಿಂದೆ ಸಾವಿರ ಅನುಮಾನಗಳು..
ಮೊದಲು 12, ಆಮೇಲೆ 8, ಅದಾದ ಮೇಲೆ ಅಭ್ಯರ್ಥಿ ಕೊರತೆ ಕಾಡಿದ ನಂತರ 7
ಮೊದಲು ಹನ್ನೆರಡು, ಆಮೇಲೆ ಎಂಟು, ಅದಾದ ಮೇಲೆ ಅಭ್ಯರ್ಥಿ ಕೊರತೆ ಕಾಡಿದ ನಂತರ ಏಳರಲ್ಲಿ ಜೆಡಿಎಸ್ ಮತ್ತು ಇಪ್ಪತ್ತೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸುವುದು ಫೈನಲ್ ಆಗಿತ್ತು. ಇದರಲ್ಲಿ, ಕಾಂಗ್ರೆಸ್ಸಿಗೆ ತೀವ್ರ ಮುಜುಗರತಂದೊಡ್ಡಿದ್ದು ತುಮಕೂರು. ಹಾಲೀ ಸಂಸದ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಮುದ್ದಹನುಮೇಗೌಡ್ರು ಕಣ್ಣೀರು ಹಾಕಿ ದೇವೇಗೌಡ್ರಿಗೆ ಬಿಟ್ಟುಕೊಟ್ಟ ಕ್ಷೇತ್ರ.
ಮೈಸೂರು ಲೋಕಸಭಾ ಚುನಾವಣೆ ಬಗ್ಗೆ ಜಿ.ಟಿ.ದೇವೇಗೌಡ ಶಾಕಿಂಗ್ ಹೇಳಿಕೆ
ಪರಮೇಶ್ವರ್ ಮತ್ತು ಸಿದ್ದರಾಮಯ್ಯನವರ ನಡುವೆ, ಹಲವು ಸುತ್ತಿನ ರಾಜಕೀಯ ಮೇಲಾಟ
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಮತ್ತು ಅದಕ್ಕೂ ಮೊದಲು, ಪರಮೇಶ್ವರ್ ಮತ್ತು ಸಿದ್ದರಾಮಯ್ಯನವರ ನಡುವೆ, ಹಲವು ಸುತ್ತಿನ ರಾಜಕೀಯ ಮೇಲಾಟ ನಡೆದಿರುವುದು ಗೊತ್ತೇ ಇದೆ. ಇವೆಲ್ಲದರಲ್ಲೂ ಸಿದ್ರಾಮಣ್ಣ ಮೇಲುಗೈ ಸಾಧಿಸುತ್ತಲೇ ಬಂದಿದ್ದರು. ತುಮಕೂರು ಮತ್ತು ಮೈಸೂರು, ಇವೆರಡರಲ್ಲಿ ಯಾವುದು ಜೆಡಿಎಸ್ಸಿಗೆ ಎನ್ನುವ ವಿಚಾರದಲ್ಲೂ ಪರಮೇಶ್ವರ್ ಹಿನ್ನಡೆ ಅನುಭವಿಸಿದ್ದು ಸ್ಪಷ್ಟ.
ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದಕ್ಕೆ ಜೆಡಿಎಸ್ ನಲ್ಲಿ ಭಾರೀ ಅಪಸ್ವರ
ಆದರೆ, ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದಕ್ಕೆ ಜೆಡಿಎಸ್ ನಲ್ಲಿ ಭಾರೀ ಅಪಸ್ವರ ಎದ್ದಿದ್ದು ಹೊಸ ವಿಚಾರವೇನೂ ಅಲ್ಲ. ಜಿ ಟಿ ದೇವೇಗೌಡ, ಸಾ.ರಾ. ಮಹೇಶ್ ಎದುರಲ್ಲೇ, ಜೆಡಿಎಸ್ ಕಾರ್ಯಕರ್ತರು ಮೋದಿಗೆ ಜೈ ಎಂದಿದ್ದರು. ಇದು, ಸಾರ್ವಜನಿಕವಾಗಿ ಬಹಳಷ್ಟು ಸುದ್ದಿಯಾಗಿತ್ತು. ಮೈಸೂರು ಭಾಗದ ಪ್ರಭಾವೀ ಮುಖಂಡ ಜಿಟಿಡಿ, ಏನೋ ಕಾಟಾಚಾರಕ್ಕೆ ಎನ್ನುವಂತೆ ಪ್ರಚಾರದಲ್ಲಿ ಭಾಗವಹಿಸಿಕೊಂಡಿದ್ದರು.
ಕಾರ್ಮಿಕರ ದಿನಾಚರಣೆ
ಇವೆಲ್ಲದರ ಜೊತೆ, ಸಚಿವ ಜಿ ಟಿ ದೇವೇಗೌಡ್ರು ಕಾರ್ಮಿಕರ ದಿನಾಚರಣೆಯಂದು ನೀಡಿದ ಹೇಳಿಕೆ, ಸರಕಾರದ ಭವಿಷ್ಯದ ಬಗ್ಗೆ ಇನ್ನಷ್ಟು ಅನುಮಾನ ಪಡುವಂತೆ ಮಾಡಿದೆ. ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಆದರೆ ಮೈತ್ರಿಯಲ್ಲಿ ತಪ್ಪಾಗಿದೆ. ಜೆಡಿಎಸ್- ಕಾಂಗ್ರೆಸ್ ಜಿದ್ದಾಜಿದ್ದಿನ ಚುನಾವಣೆ ನಡೆಸಿದ್ದವು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಜೆಡಿಎಸ್ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎನ್ನುವ ಇವರ ಹೇಳಿಕೆ, ಹಲವು ಚರ್ಚೆಗೆ ನಾಂದಿ ಹಾಡಿದೆ.
ಮೈಸೂರಿನಲ್ಲಿ ಮೈತ್ರಿ ಕೆಲಸ ಮಾಡಿದೆಯಾ ಎನ್ನುವ ಅನುಮಾನ
ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಸಾ.ರಾ. ಮಹೇಶ್, ಮಂಡ್ಯದಲ್ಲಿ ನಮ್ಮ ಬೆಂಬಲಕ್ಕೆ ನಿಂತರೆ, ನಾವು ಮೈಸೂರಿನಲ್ಲಿ ನಿಮಗೆ ಸಾಥ್ ಕೊಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ, ಸ್ಥಳೀಯ ಮಂಡ್ಯ ಕಾಂಗ್ರೆಸ್ ಮುಖಂಡರು ಇದಕ್ಕೆ ಸೊಪ್ಪು ಹಾಕಲಿಲ್ಲ. ಹಾಗಾಗಿ, ಮೈಸೂರಿನಲ್ಲಿ ಮೈತ್ರಿ ಸರಿಯಾಗಿ ಕೆಲಸ ಮಾಡಿದೆಯಾ ಎನ್ನುವ ಅನುಮಾನ ಕಾಡುವುದು ಸಹಜ.
ಮೈಸೂರು ಫಲಿತಾಂಶ ಸಮ್ಮಿಶ್ರ ಸರಕಾರದ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ
ಚಾಮುಂಡೇಶ್ವರಿಯಲ್ಲಿ ಭಾರೀ ಅಂತರದಿಂದ ಸಿದ್ದರಾಮಯ್ಯ ಸೋತ ನಂತರ, ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹಾಗಾಗಿ, ಇಲ್ಲಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಗೆಲುವು ಸಿದ್ದರಾಮಯ್ಯಗೆ ರಾಜಕೀಯವಾಗಿ ಬಲುಮುಖ್ಯ. ಒಂದು ವೇಳೆ, ಇಲ್ಲಿ ಕಾಂಗ್ರೆಸ್ ಸೋತರೆ, ಜೆಡಿಎಸ್ ಇಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲದೇ ಇದ್ದದ್ದೇ ಸೋಲಿಗೆ ಕಾರಣ ಎನ್ನುವ ಅಪವಾದ ನಿರೀಕ್ಷಿತ. ಆದುದರಿಂದ, ಮೈಸೂರು ಫಲಿತಾಂಶ ಸಮ್ಮಿಶ್ರ ಸರಕಾರದ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.