ಮೈಸೂರು : ಬಿಸಿಲ ತಾಪಕ್ಕೆ ಚಿರತೆ ಬಲಿ
ಮೈಸೂರು, ಮೇ 04 : ಬಿರು ಬಿಸಿಲಿನ ತಾಪ ಮನುಷ್ಯರನ್ನು ಮಾತ್ರ ಕಂಗೆಡಿಸಿಲ್ಲ. ಅರಣ್ಯದಲ್ಲಿರುವ ಪ್ರಾಣಿಗಳು ಆಹಾರ, ನೀರು ಸಿಗದೆ ಸಾವನ್ನಪ್ಪುವ ಸ್ಥಿತಿಗೆ ಬಂದು ತಲುಪಿವೆ. ನಂಜನಗೂಡು ತಾಲೂಕಿನ ದಾಸನೂರು ಗ್ರಾಮದ ಹೊರ ವಲಯದ ಜಮೀನಿನೊಂದರಲ್ಲಿ ಚಿರತೆಯೊಂದು ಸಾವನ್ನಪ್ಪಿದ್ದು, ಹಸಿವು ಮತ್ತು ಬಿಸಿಲಿನ ತಾಪವೇ ಕಾರಣ ಎಂದು ಶಂಕಿಸಲಾಗಿದೆ.
ದಾಸನೂರು ಗ್ರಾಮದ ಹೊರ ವಲಯದಲ್ಲಿರುವ ಮಲ್ಲಣ್ಣ ಎಂಬುವರ ಜಮೀನಿನಲ್ಲಿ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಕೆಲ ದಿನಗಳ ಹಿಂದೆ ಪೊದೆಯೊಳಗೆ ಸಾವನ್ನಪ್ಪಿದೆ. ದುರ್ವಾಸನೆ ಬಂದ ಹಿನ್ನಲೆಯಲ್ಲಿ ದನಗಾಹಿಗಳು ಪತ್ತೆ ಹಚ್ಚಿದ್ದು ಚಿರತೆ ಎಂದು ತಿಳಿದ ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಎಸಿಎಫ್ ಬಸವರಾಜು, ಆರ್ಎಫ್ಓ ಜಯಶೇಖರ್, ಡಿಎಫ್ಓ ಚಂದ್ರಶೇಖರ್, ಅರಣ್ಯ ರಕ್ಷಕ ಮೋಹನ್ ಮುಂತಾದವರು ಪರಿಶೀಲಿಸಿದ್ದು, ಬಂಡಿಪುರ ವಿಭಾಗದ ಡಾ. ನಾಗರಾಜು ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಬಿಸಿಲಿನ ತಾಪ, ಜ್ವರದಿಂದ ಬಳಲಿ, ಬೇಟೆಯಾಡಲು ಸಾಧ್ಯವಾಗದೆ ಚಿರತೆ ಸಾವನ್ನಪ್ಪಿದೆ. ಇದು ಸ್ವಾಭಾವಿಕ ಸಾವು ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬಂದಿದೆ. ಜಮೀನಿನಲ್ಲೇ ಚಿರತೆಯ ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಬಾರಿ ಅರಣ್ಯಗಳು ಕಾಡ್ಗಿಚ್ಚಿಗೆ ನಾಶವಾಗಿದ್ದು, ಮಳೆ ಬಾರದ ಕಾರಣ ಪ್ರಾಣಿಗಳು ಆಹಾರ ಮತ್ತು ನೀರು ಹುಡುಕಿಕೊಂಡು ನಾಡಿನತ್ತ ಬರತೊಡಗಿವೆ. ಮಳೆ ಬಾರದೆ ಹೋದರೆ ಮನುಷ್ಯರ ಜತೆಗೆ ಕಾಡು ಪ್ರಾಣಿಗಳಿಗೂ ಸಂಕಷ್ಟ ಎದುರಾಗಲಿದೆ.












Click it and Unblock the Notifications