ಪೌಲ್ಟ್ರಿ ನಡೆಸುವ ನೆಪದಲ್ಲಿ ರೈತರಿಗೆ ಲಕ್ಷಾಂತರ ರೂಪಾಯಿ ವಂಚನೆ
ಮೈಸೂರು, ನವೆಂಬರ್ 24: ನಂಜನಗೂಡು ತಾಲೂಕಿನಲ್ಲಿ ಪೌಲ್ಟ್ರಿ ನಡೆಸುವ ನೆಪದಲ್ಲಿ ವಿವಿಧೆಡೆ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗಿದ್ದ ಅಂತರರಾಜ್ಯ ವಂಚಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೇರಳದ ತಿರುವನಂತಪುರಂ ಸಮೀಪದ ನೆಯ್ಯಂಟಿಕರ ನಗರದ ಪ್ರಮೋದ್ (60) ಎಂದು ಗುರುತಿಸಲಾಗಿದೆ. ಈತ 2016ರಲ್ಲಿ ಒಮೇಗಾ 36 ಪೌಲ್ಟ್ರಿ ಟೆಕ್ನಾಲಜಿ ಫಾರಂ ಹೆಸರಿನಲ್ಲಿ ದೇವೀರಮ್ಮನಹಳ್ಳಿ ಬಡಾವಣೆಯಲ್ಲಿ ಕಚೇರಿ ತೆರೆದು, ಒಂದೇ ವರ್ಷದಲ್ಲಿ ರೈತರ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಆಸೆ ಹುಟ್ಟಿಸಿದ್ದ. ಉತ್ತಮ ತಳಿಯ ಕೋಳಿ ಮರಿಯೊಂದಕ್ಕೆ ತಲಾ 1200 ರೂ.ಗಳಂತೆ ಮಾರಾಟ ಮಾಡುತ್ತಿದ್ದ.
ರೈತರಿಂದ ತಲಾ 1.25 ಲಕ್ಷ ರೂ ಪಡೆದು ನೂರು ಕೋಳಿ ಮರಿಗಳನ್ನು ಸಾಕಲು ನೀಡುತ್ತಿದ್ದ. ಅವುಗಳ ಮೊಟ್ಟೆಯನ್ನು ತಾನೇ ತಲಾ 5 ರೂ.ಗಳಂತೆ ಕೊಂಡು ಕೊಳ್ಳುತ್ತಿದ್ದ. ಕೆಲ ಸಮಯ ಹೀಗೆ ಜನರ ಬಳಿ ವ್ಯವಹಾರ ನಡೆಸಿ, ನಂಬಿಕೆ ಹುಟ್ಟಿಸಿ ಹಲವರಿಂದ ಹಣ ವಸೂಲಿ ಮಾಡಿದ್ದ. ಕೆಲ ಸಮಯದ ನಂತರ ಮೊಟ್ಟೆಗಳಿಗೆ ಬೇಡಿಕೆ ಕಡಿಮೆ ಆಯ್ತು ಎಂದು ಇದ್ದಕ್ಕಿದ್ದಂತೆ ಕಚೇರಿ ಬಂದ್ ಮಾಡಿ ಪ್ರಮೋದ್ ನಾಪತ್ತೆಯಾಗಿದ್ದ.

ಈತನಿಗೆ ಹಣ ನೀಡಿದವರಲ್ಲಿ ಕಡಕೊಳದ ಕಾಳಯ್ಯ, ಸಂಪತ್ ಸೇರಿದಂತೆ ನಾಲ್ಕೈದು ಮಂದಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಕಳೆದ ವರ್ಷವೇ ದೂರು ನೀಡಿದ್ದರು. ಈತ ನೆಟ್ಟಿಂಕರದಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಿ ಸೋಮವಾರ ನಂಜನಗೂಡು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ಧ ಮೈಸೂರು ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈತನ ವಿರುದ್ಧ ರಾಜ್ಯದಲ್ಲಿ ಒಟ್ಟು 28 ವಂಚನೆ ಪ್ರಕರಣಗಳು ದಾಖಲಾಗಿದ್ದು, ಮೈಸೂರು, ಮಂಡ್ಯ, ಹಾಸನ, ಕೊಡಗು ಮುಂತಾದ ಕಡೆಗಳಲ್ಲೂ ಜನರಿಗೆ ವಂಚನೆ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಮೈಸೂರು ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ನೆಯ್ಯಂಟ್ಟಿಕರದಲ್ಲಿ ದೊಡ್ಡ ಮನೆ ಹೊಂದಿರುವ ಈತ ಸ್ಥಳೀಯವಾಗಿ ಪ್ರಭಾವಿಯೇ ಆಗಿದ್ದಾನೆ. ಕಳೆದ ವರ್ಷ ಈತನನ್ನು ಬಂಧಿಸಲು ಎರಡು ಬಾರಿ ಪೊಲೀಸರು ಅಲ್ಲಿಗೆ ತೆರಳಿದ್ದರೂ ಬಂಧನ ಸಾಧ್ಯವಾಗಿರಲಿಲ್ಲ. ಅಲ್ಲಿನ ಪೊಲೀಸರು ಮೊದಲಿಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಒತ್ತಡ ಹೇರುತ್ತಿದ್ದರು. ಹಣ ವಾಪಸ್ ಕೇಳಿದ್ದ ರೈತನ ಮೇಲೆಯೇ ಸುಳ್ಳು ಕೇಸ್ ಹಾಕಿದ್ದ. ಇದೀಗ ಈತ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ.












Click it and Unblock the Notifications