ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕುರುಬ ಸಮುದಾಯ ಕೆಂಡಾಮಂಡಲ
ಮೈಸೂರು, ಮಾರ್ಚ್ 5: ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡುವ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಕುರುಬ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ವಿಷಯದ ಕುರಿತು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಹೇಳಿಕೆಯನ್ನು ಖಂಡಿಸಿರುವ ಹಾಲುಮತ ಮಹಾಸಭಾ ನಾಯಕರು, ಎಸ್.ಟಿ ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಕುರುಬ ಸಮಾಜದ ಪರವಾಗಿ ಧ್ವನಿಯಾಗಬೇಕಾದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರೇ ಕುರುಬರ ಮೇಲೆ ಯಾಕೆ ಸಿಟ್ಟು ಎಂದು ಪ್ರಶ್ನಿಸಿದ್ದಾರೆ.
RSSಗೂ, ಕುರುಬ ಸಮಾಜಕ್ಕೂ ಏನು ಸಂಬಂಧ; ಸಿದ್ದರಾಮಯ್ಯ ಅದ್ಯಾಕೆ ಹೇಳಿದ್ರು?
ರಾಜ್ಯದಲ್ಲಿರುವ ಮುಗ್ಧ, ನಾಚಿಕೆ ಸ್ವಭಾವ ಹಾಗೂ ಬುಡಕಟ್ಟು ಸಂಸ್ಕೃತಿ, ಆಚರಣೆಗಳನ್ನು ಹೊಂದಿರುವ ಕುರುಬ ಸಮಾಜದ 1950ನೇ ಇಸವಿಯಲ್ಲಿನ ಗೆಜೆಟ್ನಲ್ಲಿ ಪ್ರಕಟವಾಗಿರುವ 6 ಜಾತಿಗಳಲ್ಲಿ 2 ಜಾತಿಗಳಾದ ಜೇನು ಕುರುಬ, ಕಾಡು ಕುರುಬ ಜಾತಿಗಳು ಇವೆ. 1977ರಲ್ಲಿ ಕುರುಬ ಜಾತಿಯ 1) ಗೊಂಡ, ರಾಜಗೊಂಡ 2) ಕುರುಮನ್ಸ್ 3) ಕಾಟ್ಟುನಾಯಕನ್ 4) ಕುರುಬ ಎಂಬ ಜಾತಿಗಳು ಸೇರಿ ಒಟ್ಟು 6 ಜಾತಿಗಳು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದೆ. ಹೀಗಾಗಿ ಕುರುಬರು ಹೊಸದಾಗಿ ಎಸ್.ಟಿ ಮೀಸಲಾತಿ ನೀಡಿ ಎಂದು ಬೇಡಿಕೆ ಸಲ್ಲಿಸಿ, ಒತ್ತಾಯಿಸುತ್ತಿಲ್ಲ ಎಂದಿದ್ದಾರೆ.
ಬದಲಾಗಿ, ಈಗಾಗಲೇ ಎಸ್.ಟಿ ಮೀಸಲಾತಿ ಪಟ್ಟಿಯಲ್ಲಿರುವ ಕುರುಬರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ನಮ್ಮ ಒತ್ತಾಯವಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಕುರುಬರು ಪಾದಯಾತ್ರೆಯ ಮೂಲಕ ಬೆಂಗಳೂರಿನಲ್ಲಿ ಕುರುಬರ ಜಾಗೃತಿ ಸಭೆಯಲ್ಲಿ ಸರ್ಕಾರದ ಕಂದಾಯ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. 1991ರಲ್ಲಿ ವಾಲ್ಮೀಕಿ ಸಮಾಜದವರಿಗೆ ಬೇರೆ ರಾಜ್ಯದಲ್ಲಿರುವ ಸಮಾನಾರ್ಥ ಪದದನ್ವಯ ಎಸ್.ಟಿ ಮೀಸಲಾತಿಯಲ್ಲಿ ಸೇರಿಸಿರುವಂತೆ, ಕುರುಬ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ, ರಾಜ್ಯದಲ್ಲಿರುವ ಸಮಾನಾರ್ಥ ಪದದನ್ವಯ ಎಸ್.ಟಿ ಮೀಸಲಾತಿ ವಿಸ್ತರಿಸಬೇಕಿದೆ ಎಂದು ಕುರುಬ ಸಮುದಾಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಅನ್ಯಾಯವಾಗಿರುವ ಕುರುಬ ಸಮಾಜದ ಧ್ವನಿಯಾಗಬೇಕು. ಆದರೆ ಅವರೇ, ಸಿಟ್ಟು ಮಾಡಿಕೊಂಡರೆ ಹೇಗೆ? ಎಂದು ಪ್ರಶ್ನಿಸಿರುವ ಹಾಲುಮಹಾ ಮಹಾಸಭಾದ ಮುಖಂಡರು, ಕುರುಬ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನರು ಸ್ಥಿತಿವಂತರಿರಬಹುದು. ಆದರೆ ಇಡೀ ಕುರುಬ ಸಮಾಜದಲ್ಲಿ ರಾಜ್ಯಮಟ್ಟದ ರಾಜಕಾರಣಿಗಳಿರುವುದೇ ಬೆರಳೆಣಿಕೆಯಷ್ಟು ಮಾತ್ರ.
ಯಾರೋ ಒಬ್ಬರು ಹೆಲಿಕ್ಯಾಪ್ಟರ್ ನಲ್ಲಿ ಓಡಾಡಿದ ಮಾತ್ರಕ್ಕೆ ಸಮಾಜವೇ ಹೀಗಿದೆ ಎಂದು ಹೇಳಲು ಸಾಧ್ಯವೇ? ಕುರುಬ ಸಮಾಜ ಶೈಕ್ಷಣಿಕ, ಸಾಮಾಜಿಕವಾಗಿ ಇಂದಿಗೂ ಬಡತನದಲ್ಲಿದ್ದು, ಕುರುಬರು ತುಳಿತಕ್ಕೆ ಒಳಪಡುತ್ತಿದ್ದಾರೆ. ಈ ಕಾರಣಕ್ಕೆ ನ್ಯಾಯಯುತವಾಗಿ ಹಾಗೂ ಸಂವಿಧಾನಬದ್ಧವಾಗಿ ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ರಾಜ್ಯದಲ್ಲಿರುವ ಪ್ರತಿಯೊಬ್ಬ ಕುರುಬರಿಗೂ ಎಸ್.ಟಿ ಮೀಸಲಾತಿ ವಿಸ್ತಾರ ಮಾಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜತೆಗೆ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಸಹ ಕುರುಬರಿಗೆ ST ಮೀಸಲಾತಿಯಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕೆಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮನವಿ ಮಾಡಿದ್ದಾರೆ.