ಕುಂಭ ಮೇಳಕ್ಕೆ6 ದಿನ ಮಾತ್ರ ಬಾಕಿ, ತ್ರಿವೇಣಿ ಸಂಗಮದಲ್ಲಿ ಭರ್ಜರಿ ಸಿದ್ಧತೆ
ಮೈಸೂರು, ಫೆಬ್ರವರಿ 11: ದಕ್ಷಿಣ ಕಾಶಿ ತ್ರಿವೇಣಿ ಸಂಗಮದ ಕಾವೇರಿ ಹಾಗೂ ಕಪಿಲ ನದಿ ದಂಡೆಯಲ್ಲಿ ಫೆ.17 ರಿಂದ 19 ರವರೆಗೆ ಜರುಗಲಿರುವ 11ನೇ ಕುಂಭ ಮೇಳಕ್ಕಾಗಿ ಭರ್ಜರಿ ಸಿದ್ಧತೆ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಕುಂಭ ಮೇಳಕ್ಕೆ ಆರು ದಿನಗಳು ಮಾತ್ರ ಬಾಕಿ ಇವೆ.
ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಅಗತ್ಯ ಸಿದ್ಧತೆಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ನಿಗದಿತ ಸ್ಥಳದಲ್ಲಿ ಶಾಮಿಯಾನ ಅಳವಡಿಸಿ ಸಿದ್ಧತೆ ಮಾಡಲಾಗುತ್ತಿದೆ.
ಕಾಶಿಗಿಂತಲೂ ಒಂದು ಗುಲಗಂಜಿ ತೂಕದಷ್ಟು ಪುಣ್ಯ ಕ್ಷೇತ್ರವೆಂದು ಪುರಾಣಗಳಲ್ಲಿ ಬಿಂಬಿತಗೊಂಡಿರುವ ತ್ರಿವೇಣಿ ಸಂಗಮದಲ್ಲಿ ಜರುಗಲಿರುವ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಸುಮಾರು 8 ಲಕ್ಷ ಜನರು ಭಾಗವಹಿಸುತ್ತಾರೆ ಎಂದು ಅಂದಾಜಿಸಲಾಗಿದ್ದು, ಬರುವ ಭಕ್ತರು ಹಾಗೂ ಸಾಧು ಸಂತರಿಗೆ ಸೌಲಭ್ಯಗಳು ಕುಂಟಿತವಾಗದಂತೆ ತಯಾರಿ ನಡೆಯುತ್ತಿದೆ.

ನದಿಯ ಮಧ್ಯ ಭಾಗದಲ್ಲಿ ಸ್ವಾಮೀಜಿಗಳು ಕೈಗೊಳ್ಳುವ ಯಾಗ, ಯಜ್ಞಗಳಿಗೆ ಯಾಗ ಮಂಟಪ ಹಾಗೂ ಧಾರ್ಮಿಕ ಸಭೆಯ ವೇದಿಕೆ, ಪುಣ್ಯ ಸ್ಥಾನ ಮಾಡಿದ ಭಕ್ತರು ಬಟ್ಟೆ ಬದಲಿಸಲು ಸ್ತ್ರೀ ಮತ್ತು ಪುರಷರಿಗೆ ಪ್ರತ್ಯೇಕ ಕೊಟಡಿಗಳು, ಶೌಚಾಲಯ, ಶುದ್ಧ ಕುಡಿಯುವ ನೀರು, ಸಾರ್ವಜನಿಕರು ಸ್ಥಾನ ಮಾಡುವ ಸ್ಥಳಗಳಲ್ಲಿ ಬ್ಯಾರಿಕೇಡ್ ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳನ್ನು ಕಲ್ಪಿಸಲು ಸಿದ್ಧತೆ ಮಾಡಲಾಗುತ್ತಿದೆ.
ಮಠಾಧೀಶರು ಹಾಗೂ ಇತರೆ ಸ್ವಾಮೀಜಿಗಳು ಸ್ನಾನ ಮಾಡುವ ಸ್ಥಳದ ಸುತ್ತ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಸಂಗಮದ ಮಧ್ಯಭಾಗದಲ್ಲಿರುವ ನಡುಹೊಳೆ ಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಭಕ್ತರು ಬರುವ ಹಿನ್ನೆಲೆಯಲ್ಲಿ ಬ್ಯಾರೀಕೆಡ್ ಅಳವಡಿಸಲಾಗಿದೆ. ನದಿಯ ಮೂಲಕ ಹಾದು ಹೋಗಲು ಮರಳಿನ ಮೂಟೆ ಅಳವಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ.

ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭಾನುವಾರ ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿರುವ ಪೊಲೀಸರಿಗೆ ವಸತಿ ಸೌಲಭ್ಯ, ಧಾರ್ಮಿಕ ಸಭೆ ನಡೆಸುವ ಸ್ಥಳ ಮತ್ತಿತರ ಕಡೆಗಳಲ್ಲಿ ಅಳವಡಿಸಬೇಕಾದ ಶಾಮಿಯಾನದ ಬಗ್ಗೆ ಸಂಬಂಧಿಸಿದವರ ಜತೆ ಚರ್ಚಿಸಿದರು. ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ, ಸಂಚಾರ ವ್ಯವಸ್ಥೆಯ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದರು.












Click it and Unblock the Notifications