ಮೈಸೂರು: ಕೆ.ಆರ್.ಪೊಲೀಸ್ ಸ್ಟೇಶನ್ ನಲ್ಲಿ ಕೃಷ್ಣ ಮಂದಿರ!
ಮೈಸೂರು, ಆಗಸ್ಟ್ 14 : ಇಂದು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸುದಿನ. ಜನ್ಮಾಷ್ಟಮಿ ಅಂದರೆ ಸಾಕು ಗೋಪಿಲೋಲನ ನೆನೆದು ಆರಾಧಿಸುವವರೇ ಹೆಚ್ಚು. ಕೃಷ್ಣನ ಜನ್ಮಸ್ಥಾನ ಅಂದರೆ ಸಾಕು ನಮಗೆಲ್ಲಾ ಥಟ್ಟನೆ ನೆನಪಾಗುವುದು ಮಥುರಾ, ಮತ್ತೊಂದು ಸೆರೆಮನೆ ಅರ್ಥಾತ್ ಜೈಲು. ಆದರೆ ಇಲ್ಲೊಂದು ಜೈಲಿದೆ ಅಲ್ಲಿದೆ ದಿನನಿತ್ಯವೂ ಕೃಷ್ಣನ ರಾಧನೆ, ಪೂಜೆ ಎಲ್ಲವೂ ನಡೆಯುತ್ತದೆ.
ಈ ಮುದ್ದು ಕೃಷ್ಣರಿಗೆ ಸಾಟಿ ಯಾರು ಹೇಳಿ..?
ಅರೇ, ಇದೇನಪ್ಪಾ ಅಂತಹ ಹೌಹಾರಬೇಡಿ. ಹೌದು ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ರುವ ದೇವಾಲಯವಿದು. ಊರೆಂದ ಮೇಲೆ ಅಲ್ಲಿ ದೇವಸ್ಥಾನಗಳಿರುವುದು ಸಹಜ. ಇತ್ತೀಚೆಗೆ ಆಸ್ಪತ್ರೆಗಳಲ್ಲಿಯೂ ಪುಟ್ಟ ದೇವಸ್ಥಾನಗಳನ್ನು ನಿರ್ಮಿಸುತ್ತಾರೆ. ಆದರೆ ಪೊಲೀಸ್ ಸ್ಟೇಶನ್ ನಲ್ಲಿ ದೇವಸ್ಥಾನವಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ..? ಆದರೆ ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಠಾಣೆಯೊಳಗಿರುವ ದೇವಾಲಯ ರಾಜ್ಯದಲ್ಲಿಯೇ ಮೊದಲು.
ನಾವೆಲ್ಲರೂ ಆರೋಪಗಳನ್ನು ನಡೆಸಿದರೆ, ಕಳ್ಳತನ, ದರೋಡೆಗಳನ್ನು ಮಾಡಿದರೆ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿಬಿಡುತ್ತೇವೆ ಹುಷಾರ್ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಅವರು ಹೇಳುವುದರಲ್ಲೂ ಅರ್ಥವಿದೆ. ವಿಚಿತ್ರವೆಂದರೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಇರುವುದು ಶ್ರೀಕೃಷ್ಣನ ದೇವಸ್ಥಾನವೇ. ಗೋವಿನ ಹಿಂದೆ ಶ್ರೀಕೃಷ್ಣ ಕೊಳಲನ್ನು ಊದುತ್ತ ನಿಂತಿರುವ ವಿಗ್ರಹವಿದ್ದು ಅದಕ್ಕೆ ತಪ್ಪದೆ ಪ್ರತಿದಿನವೂ ಪೂಜೆ ಸಲ್ಲಿಸಲಾಗುತ್ತದೆ.
ಇವರೇ ಗೋಪಿಲೋಲನ ಆರಾಧನೆಗಾಗಿ ಪಕ್ಕದಲ್ಲಿಯೇ ಇರುವ ಗಣಪತಿ ದೇವಸ್ಥಾನದ ಅರ್ಚಕರನ್ನು ನೇಮಿಸಿದ್ದಾರೆ. ಹೋಗುತ್ತಾರಂತೆ. ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯಾಗಿದ್ದು ಪೊಲೀಸ್ ಠಾಣೆಯಲ್ಲಿರುವ ಶ್ರೀಕೃಷ್ಣನನ್ನು ಹೂಗಳಿಂದ ಅಲಂಕರಿಸಿ, ನೈವೇದ್ಯಕ್ಕಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದು, ಕೃಷ್ಣನ ಮುಂದೆ ಇರಿಸಲಾಗಿತ್ತು.
ಈ ಕುರಿತಾಗಿ ಪೊಲೀಸ್ ಸಿಬ್ಬಂದಿಯೋರ್ವರು ಮಾತನಾಡಿ, ನಮಗೆ ಕೃಷ್ಣನ ದೇವಸ್ಥಾನವಿರುವುದು ಖುಷಿ ತಂದಿದೆ. ಪ್ರತಿನಿತ್ಯ ಮನೆಯಲ್ಲಿ ಪೂಜೆ ಸಲ್ಲಿಸಲಾಗುವುದುಲ್ಲ. ಇಲ್ಲಿ ಬಂದು ಕೃಷ್ಣನನ್ನು ನಮಸ್ಕರಿಸಿ ಪ್ರಾರ್ಥಿಸಿದರೆ ನೆಮ್ಮದಿ ಸಿಕ್ಕಂತಾಗುತ್ತದೆ ಎನ್ನುತ್ತಾರೆ. ಒಟ್ಟಾರೆ ಪೊಲೀಸ್ ಅಧಿಕಾರಿಗಳೆಂದರೆ ಸಾಕು, ಅವರು ಪೂಜೆ -ಪುನಸ್ಕಾರ, ನಂಬಿಕೆ ಇಲ್ಲದವರು ಎನ್ನುವ ಅದೆಷ್ಟೋ ಮಂದಿಗೆ ಇವರ ಬೆಣ್ಣೆಚೋರನ ಆರಾಧನೆ ನಾಚಿಸುವಂತಹದ್ದೇ ಸರಿ.