ಆಷಾಢ ಶುಕ್ರವಾರ; ನಾಡದೇವತೆಗೆ ನಮಿಸಿದ ಡಿಕೆಶಿ
ಮೈಸೂರು, ಜುಲೈ,15 : ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳು ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮೈಸೂರು ನಗರ ಸಾರಿಗೆ ಬಸ್ನಲ್ಲಿಯೇ ಪ್ರಯಾಣ ಮಾಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಸಾರಿಗೆ ಬಸ್ ಮೂಲಕ ಚಾಮುಂಡಿಯ ದರ್ಶನಕ್ಕೆ ಹೊರಟ ಡಿಕೆಶಿ ಜನಸಾಮಾನ್ಯರ ಜೊತೆ ಬೆಟ್ಟಕ್ಕೆ ಪ್ರಯಾಣಿಸಿದರು. ಡಿಕೆಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಮಾಜಿ ಶಾಸಕ ವಾಸು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ದೇವನೂರು ಕೃತಿ ಟೀಕಿಸಿದ ಪ್ರತಾಪ್ ಸಿಂಹಗೆ ಯತೀಂದ್ರ ತಿರುಗೇಟು!
ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಾರೀ ಜನಜಂಗುಳಿ ಕಂಡು ಬಂತು. ಇದರಿಂದ ದೇವಿಯ ದರ್ಶನಕ್ಕೆ ಬಂದ ರಾಜಕೀಯ ಧುರೀಣರು ಹೈರಾಣದರು. ಹಲವು ಪ್ರಮುಖ ರಾಜಕೀಯ ನಾಯಕರು ಬೆಟ್ಟಕ್ಕೆ ಭೇಟಿ ನೀಡಿದರು.
ರಾಜಕೀಯ ಮುಖಂಡರು ಮುಂದೆ ಸಾಗಲು ಹರಸಾಹಸ ಪಟ್ಟರು. ಪೊಲೀಸರು ಅವರು ಮುಂದೆ ಸಾಗಲು ಅನುವು ಮಾಡಿಕೊಟ್ಟರು. ಚಾಮುಂಡೇಶ್ವರಿಗೆ ಡಿಕೆಶಿ ಪೂಜೆ ಸಲ್ಲಿಸಿ ವಾಪಾಸ್ ಆಗುವಾಗ ಅಭಿಮಾನಿಗಳಿಂದ ಜೈಕಾರ ಕೇಳಿ ಬಂತು.
ವಿದೇಶ ಪ್ರವಾಸದಿಂದ ಬಂದ ಬಿಎಸ್ವೈ ಮೌನಕ್ಕೆ ಶರಣು: ನಾನಾ ವ್ಯಾಖ್ಯಾನ
ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್ ಸಿದ್ದರಾಮೋತ್ಸವ ಆಚರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ. "ಅದು ಕೇವಲ ಸಿದ್ದರಾಮಯ್ಯ ಹುಟ್ಟುಹಬ್ಬದ ಆಚರಣೆಯಲ್ಲ. ಅದರ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ಪ್ರಣಾಳಿಕೆಯನ್ನು ಭಾಗಶಃ ಈಡೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತಾವಧಿ, ಪ್ರಗತಿಗಳ ಬಗ್ಗೆ ಮೆಲುಕು ಹಾಕುತ್ತೇವೆ" ಎಂದರು.
"ನಮ್ಮ ಆಡಳಿತಾವಧಿಯಲ್ಲಿ ಏನಾಗಿತ್ತು, ಈಗ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಜನರಿಗೆ ಆ ಮೂಲಕ ವಿವರಿಸುತ್ತೇವೆ. ಬಿಜೆಪಿಯವರು ವಿನಾಕಾರಣ ಅಸೂಯೆಯಿಂದ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಗೆದ್ದು ಮದ್ದು ನೀಡುತ್ತೇವೆ " ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂ ಪರಿಹಾರದ ಮೊತ್ತವನ್ನು ಮಹಿಳೆಯೋರ್ವರು ಎಸೆದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ , "ಯಾರು ಶಾಂತಿ ಕದಡುತ್ತಿದ್ದಾರೋ ಅವರಿಗೆ ಈ ಪ್ರಶ್ನೆಯನ್ನು ಕೇಳಬೇಕು. ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಯಾರು ಸಹ ಅರ್ಜಿ ಹಾಕಿ ಹುಟ್ಟುವುದಿಲ್ಲ. ಎಲ್ಲಾ ಭಗವಂತನ ಪ್ರೇರೇಪಣೆ. ಅವರು ರಕ್ಷಣೆ ಕೇಳುವುದರಲ್ಲಿ ತಪ್ಪಿಲ್ಲ" ಎಂದರು.
ಈ ಘಟನೆ ಸಂಬಂಧ ಸರಕಾರ ಎಚ್ಚೆತ್ತುಕೊಳ್ಳಬೇಕು, ಈಗಾಗಲೇ ರಾಜ್ಯದ ಅಲ್ಪಸಂಖ್ಯಾತರು , ಜನಸಾಮಾನ್ಯರು ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರ ನೋವುಗಳನ್ನು ಗಮನಿಸಬೇಕಾಗಿದೆ. ಶಾಂತಿಗೆ ಭಂಗ ಬರದಂತೆ ಸರಕಾರ ಕೆಲಸ ಮಾಡಬೇಕಿದೆ ಎಂದರು.