ಮೈಸೂರು: ವರ್ಷಕ್ಕೊಮ್ಮೆ ಶಿವನಿಗೆ ಚಿನ್ನದ ಕೊಳಗ ತೊಡಿಸುವ ವಿಶೇಷವೇನು?
ಮೈಸೂರು, ಫೆಬ್ರವರಿ 28: ಸಾಂಸ್ಕೃತಿಕ ನಗರಿ ಮೈಸೂರು ಮಹಾಶಿವರಾತ್ರಿ ಹಬ್ಬಕ್ಕೆ ಅಣಿಯಾಗುತ್ತಿದ್ದು, ಅಂಬಾವಿಲಾಸ ಅರಮನೆಯಲ್ಲಿ ತ್ರೀನೇಶ್ವರಸ್ವಾಮಿ ದೇಗುಲದಲ್ಲಿ ಸಕಲ ಸಿದ್ಧತೆ ಆರಂಭಗೊಂಡಿದೆ. ರಾಜಮನೆತನ ಕೊಡುಗೆ ನೀಡಿರುವ ಚಿನ್ನದ ಕೊಳಗವನ್ನು ತ್ರಿನೇಶ್ವರಸ್ವಾಮಿಗೆ ವರ್ಷಕ್ಕೆ ಒಂದೇ ದಿನ ಮಾತ್ರ ಲಿಂಗಕ್ಕೆ ಧಾರಣೆ ಮಾಡುವುದು ಇಲ್ಲಿನ ವಿಶೇಷವಾಗಿದೆ.
ಹಿಂದೂಗಳಿಗೆ ಶಿವರಾತ್ರಿ ಹಬ್ಬ ಎಂದರೆ ಎಲ್ಲಿಲ್ಲದ ಮಹತ್ವ. ಶಿವನಿಗೆ ಅಭಿಷೇಕ, ವಿಶೇಷ ಪೂಜೆ, ಉಪವಾಸ ಮೂಲಕ ಭಕ್ತರು ಶಿವಾರಾಧನೆ ಮಾಡುತ್ತಾರೆ. ಸದ್ಯ ಮೈಸೂರಿನ ತ್ರಿನೇಶ್ವರ ದೇವರಿಗೆ ಚಿನ್ನದ ಕೊಳಗ ತೊಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೈಸೂರು ಜಿಲ್ಲಾ ಖಜಾನೆಯಿಂದ ತಹಸೀಲ್ದಾರ ನೇತೃತ್ವದಲ್ಲಿ ದೇವಾಲಯಕ್ಕೆ ಚಿನ್ನದ ಕೊಳಗ ತರಲಾಗಿದೆ.
ಮೈಸೂರು ಜಿಲ್ಲಾಡಳಿದಿಂದ ಅರಮನೆ ಆಡಳಿತ ಮಂಡಳಿಗೆ 11 ಕೆಜಿ ಚಿನ್ನದ ಕೊಳಗವನ್ನು ಹಸ್ತಾಂತರ ಮಾಡಲಾಗಿದೆ. 1952ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಈ ಚಿನ್ನದ ಕೊಳಗ ಮಾಡಿಸಿದ್ದರು. ಪುತ್ರ ಸಂತಾನಕ್ಕಾಗಿ ಹರಕೆ ಹೊತ್ತು ತ್ರೀನೇಶ್ವರ, ಶ್ರೀಕಂಠೇಶ್ವರ, ಮುಡುಕೊತೊರೆ ಮಲ್ಲಿಕಾರ್ಜುನೇಶ್ವರನಿಗೆ ಮೂರು ಚಿನ್ನದ ಕೊಳಗವನ್ನು ಒಡೆಯರ್ ನೀಡಿದ್ದರು.

ಅರಮನೆ ಆವರಣದಲ್ಲಿರುವ ಶಿವನ ಮೂರ್ತಿಗೆ ಮಂಗಳವಾರ ಚಿನ್ನದ ಕೊಳಗ ತೊಡಿಸಿ ವಿಶೇಷ ಪೂಜೆ, ಅಭಿಷೇಕ ಮಾಡಲಾಗುತ್ತದೆ. ನಾಳೆ (ಮಂಗಳವಾರ) ಮಧ್ಯರಾತ್ರಿ 12 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆ 4ರಿಂದ 6 ಗಂಟೆಯೊಳಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನದ ಕೊಳಗ ಧರಿಸಿ ನಂತರ ಹೂವಿನ ಅಲಂಕಾರ ಮಾಡಿ, ರಾಜವಂಶಸ್ಥರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬೆಳಗ್ಗೆ 6 ಗಂಟೆಯಿಂದ ಭಕ್ತರ ದರ್ಶನಕ್ಕೆ ಪ್ರವೇಶಾವಕಾಶ ನೀಡಲಾಗುತ್ತದೆ.
ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದಂದು ಜಾತ್ರೆಯಂತೆ ವಿಶೇಷ ಪೂಜೆ ನೆರವೇರುತ್ತದೆ. ದಶಕಗಳ ಹಿಂದಿನವರೆಗೂ ಅರಮನೆ ಆವರಣದಲ್ಲಿ ಜಾಗರಣೆ ಮಾಡಲು ಹರಿಕಥೆ ಸೇರಿದಂತೆ ವಿವಿಧ ಭಕ್ತಿಗೀತೆ, ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು.

ಇದರಿಂದ ದೇವಾಲಯದಲ್ಲಿ ರಾತ್ರಿಯಿಡಿ ದರ್ಶನ ಪಡೆಯಲು ಬರುತ್ತಿದ್ದ ಭಕ್ತರು ದರ್ಶನ ಪಡೆದ ನಂತರ ಅರಮನೆ ಮುಂಭಾಗದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ಇದರಿಂದ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಚಿನ್ನದ ಕೊಳಗ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.












Click it and Unblock the Notifications