ಮದ್ಯ ಖರೀದಿಗಾಗಿ ಗಡಿ ದಾಟಿ ಬರುತ್ತಿದ್ದಾರೆ ಕೇರಳಿಗರು: ಮೈಸೂರು ಡಿಸಿ
ಮೈಸೂರು, ಮೇ 27: ಮದ್ಯ ಖರೀದಿಗಾಗಿ ಗಡಿ ದಾಟಿ ಕೇರಳ ಜನರು ಬರುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.
Recommended Video
ಕೇರಳದಿಂದ ಹೆಚ್.ಡಿ ಕೋಟೆಯ ಕಾಡಂಚಿನ ಗ್ರಾಮಗಳಿಗೆ ಬರುತ್ತಿರುವ ಬಗ್ಗೆ ದೂರು ಬಂದಿದೆ. ನದಿ ನೀರು ಕಡಿಮೆ ಇದ್ದಾಗ ದಾಟಿ ಬರುತ್ತಾರೆ, ನೀರು ಜಾಸ್ತಿ ಇದ್ದರೆ ಬೋಟ್ ಗಳಲ್ಲಿ ಬರುತ್ತಾರೆ. ಹೀಗಾಗಿ ಮೈಸೂರು ಜಿಲ್ಲಾಡಳಿತ ಮತ್ತು ವೈಯನಾಡು ಜಿಲ್ಲಾಡಳಿತ ಜಂಟಿಯಾಗಿ ಬೋಟಿಂಗ್ ಪಾಯಿಂಟ್ ಗಳನ್ನ ನಿರ್ಬಂಧಿಸಿದೆ ಎಂದು ಹೇಳಿದರು.
ಕಾಡಂಚಿನ 10 ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಗಸ್ತು ಹೆಚ್ಚಿಸಲಾಗಿದೆ. ನಾಗರಹೊಳೆ ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಲಾಗಿದೆ ಎಂದರು.

ಡಿಬಿ.ಕುಪ್ಪೆ, ಮಚ್ಚೂರು ಗಳಲ್ಲಿ ನಾಲ್ಕು ಮದ್ಯದಂಗಡಿಗಳ ಲೈಸೆನ್ಸ್ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು. ಕೊರೊನಾ ವೈರಸ್ ಹಾಟ್ ಸ್ಪಾಟ್ ರಾಜ್ಯಗಳಿಂದ ಬರುವವರಿಗೆ ಸರ್ಕಾರವು ನಿರ್ಬಂಧ ಹೇರಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ದೆಹಲಿ, ರಾಜಸ್ಥಾನ ರಾಜ್ಯಗಳಿಂದ ಬರುವವರ ಮೇಲೆ ನಿಗಾ ವಿಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅನ್ಯ ರಾಜ್ಯಗಳಿಂದ ಬರುವವರಿಗೆ 7 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯವಾಗಿರಲಿದೆ. ಕಷ್ಟದಲ್ಲಿರುವವರಿಗೆ ಹಾಸ್ಟೆಲ್ ಗಳಲ್ಲಿ ಉಚಿತ ಕ್ವಾರಂಟೈನ್ ಮಾಡಲಾಗುತ್ತದೆ. ಯಾವುದೇ ರೋಗ ಲಕ್ಷಣ ಕಂಡು ಬರದಿದ್ದರಷ್ಟೇ ಹೋಮ್ ಕ್ವಾರಂಟೈನ್ ಅವಕಾಶವಿದೆ ಎಂದರು.
ಮೈಸೂರಿನಲ್ಲಿ ಯಾವುದೇ ವಲಯಗಳ ಪದ್ದತಿ ಸದ್ಯಕ್ಕಿಲ್ಲ. ಕಂಟೈನ್ಮೆಂಟ್ ವಲಯ ನಿರ್ವಹಿಸಲಿಕ್ಕಷ್ಟೇ ಮಾರ್ಗಸೂಚಿ ನೀಡಲಾಗಿದೆ. ಅದರಲ್ಲೂ ಕೆಲ ಸಡಿಲಿಕೆ ಮಾಡಲಾಗಿದೆ. ಪೂರ್ತಿ ಏರಿಯಾ, ಗ್ರಾಮಗಳ ಬದಲು ಸಂಬಂಧಿಸಿದ ಮನೆ ಮತ್ತು ಬೀದಿ ಮಾತ್ರ ನಿರ್ಬಂಧಿತ ಪ್ರದೇಶಗಳನ್ನು ಗುರುತಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ನಾಗಲ್ಯಾಂಡ್, ಮಣಿಪುರ, ಮಧ್ಯಪ್ರದೇಶ ಇತರೆ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ಬೆಂಗಳೂರಿನವರೆಗೆ ಬಸ್ ಮೂಲಕ ಕಳುಹಿಸಲಾಗುತ್ತಿದೆ. ಬೆಂಗಳೂರಿನಿಂದ ರೈಲು ಮೂಲಕ ತೆರಳಿದ್ದಾರೆ. ನಾಳೆ ಮೈಸೂರಿನಿಂದ ೫೩ ಜನ ನಾಗಾಲ್ಯಾಂಡ್ ಗೆ ಬನ್ನಿಮಂಟಪದಿಂದ ಹೊರಡಲಿದ್ದಾರೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದರು.












Click it and Unblock the Notifications