ಇಡೀ ದೇಶ ಮೆಚ್ಚುವ ರೀತಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣವಾಗಿದೆ; ಈಶ್ವರಪ್ಪ
ಮೈಸೂರು, ಮೇ 21: ಇಡೀ ದೇಶವೇ ಮೆಚ್ಚುವ ರೀತಿಯಲ್ಲಿ ಕರ್ನಾಟಕ ಸರ್ಕಾರ ಕೊರೊನಾ ಸೋಂಕು ನಿಯಂತ್ರಣ ಮಾಡುತ್ತಿದೆ ಎಂದಿದ್ದಾರೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ.
Recommended Video
ಇಂದು ಇಲ್ಲಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, "ವಿರೋಧ ಪಕ್ಷದವರು ನರೇಂದ್ರ ಮೋದಿಯನ್ನು ಟೀಕೆ ಮಾಡುತ್ತಿದ್ದಾರೆ. ವಿಶ್ವದಲ್ಲೇ ಇಂದು ಎಲ್ಲರೂ ಮೋದಿಯವರನ್ನು ಮೆಚ್ಚುತ್ತಿದ್ದಾರೆ. ಭಾರತದವರು ಕೊರೊನಾ ವೈರಸ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಾಗಿಲ್ಲ" ಎಂದು ಖಾರವಾಗಿ ನುಡಿದರು.

"ಟೀಕೆ ಮಾಡುವುದರಲ್ಲೇ ಅವರಿಗೆ ಆನಂದ"
ಮೊದಲು ನೂರು ದಿನಗಳು ಮಾತ್ರ ಇತ್ತು. ಈಗ 150 ದಿನ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಎಲ್ಲ ಸಮಯದಲ್ಲೂ ರಾಜಕಾರಣ ಮಾಡುವವರಿಗೆ ಇದು ಕಾಣೋದಿಲ್ಲ. ಅವರಿಗೆ ಟೀಕೆ ಮಾಡುವುದರಲ್ಲೇ ಆನಂದ ಕಂಡರೆ ಟೀಕೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಅವರು ನಿಜಕ್ಕೂ ವಿರೋಧಪಕ್ಷದ ನಾಯಕರಾಗಿರೋದಕ್ಕೆ ಅಯೋಗ್ಯರು. ಬಂದು ನೋಡಲಿ, ನಮ್ಮ ಜಿಲ್ಲೆಗಳಲ್ಲಿ ಏನು ಕೆಲಸಗಳು ಆಗುತ್ತಿವೆ ಅಂತ ಎಂದು ಗುಡುಗಿದರು.

ವಿರೋಧ ಪಕ್ಷದ ಬಗ್ಗೆ ಈಶ್ವರಪ್ಪ ವಾಗ್ದಾಳಿ
ಪ್ರತಿಯೊಂದರಲ್ಲೂ ಟೀಕೆ ಮಾಡುವುದೇ ವಿರೋಧಪಕ್ಷದ ಕೆಲಸ ಅಂದುಕೊಂಡು ಬಿಟ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಧರಣಿ ಆಯ್ತು. ಅದೂ ಅನುಮತಿ ಪಡೆಯದೆ. ಒಬ್ಬ ಮುಖ್ಯಮಂತ್ರಿಯಾಗಿದ್ದವರು, ಒಬ್ಬ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ರಾಜ್ಯ ಸರ್ಕಾರದ ಅನುಮೋದನೆ ತೆಗೆದುಕೊಳ್ಳದೇ ವಿಧಾನಸೌಧದ ಒಳಗೆ ಪ್ರವೇಶಿಸಬಾರದು. ಗಾಂಧಿ ಪ್ರತಿಮೆ ಮುಂದೆ ಅನುಮತಿ ಇಲ್ಲದೆ ಧರಣಿ ನಡೆಸಬಾರದು ಅಂದಾಗ ಅನುಮತಿ ಇಲ್ಲದೇ ಧರಣಿ ಮಾಡಬಾರದು ಅಂತ ತಿಳಿಯಲ್ವಾ? ಸಂವಿಧಾನದ ಬಗ್ಗೆ ಬೆಳಿಗ್ಗೆಯಿಂದ ಸಂಜೆ ತನಕ ಭಾಷಣ ಮಾಡ್ತಿರ್ತಾರೆ. ಯಾಕೆ ಧರಣಿ ಮಾಡಿದ್ದಾರೆ, ಅನುಮತಿ ತೆಗೆದುಕೊಂಡಿದ್ದರಾ ಎಂದು ವಾಗ್ದಾಳಿ ನಡೆಸಿದರು.

"ಎಪಿಎಂಸಿ ಕಾಯ್ದೆಗೆ ಯಾವ ರೈತರೂ ವಿರೋಧಿಸಿಲ್ಲ"
ಎಪಿಎಂಸಿ ಕಾಯ್ದೆ ಸರಿ ಇಲ್ಲ, ಗ್ರಾಮ ಪಂಚಾಯತ್ ಗೆ ಆಡಳಿತ ಸಮಿತಿ ನೇಮಕ ಮಾಡಬಾರದು ಎಂದೆಲ್ಲಾ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಎಪಿಎಂಸಿ ತಿದ್ದುಪಡಿಯ ಮೂಲಕ ಇಡೀ ದೇಶದಲ್ಲಿ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ತಾನು ಸ್ವತಂತ್ರವಾಗಿ ಮಾರಬಹುದಾದ ಸಂದರ್ಭದಲ್ಲಿ, ಯಾವ ರೈತರೂ ಈ ಬಗ್ಗೆ ದೇಶದಲ್ಲಿ ವಿರೋಧ ಮಾಡಿಲ್ಲ. ಬೋಗಸ್ ವಿರೋಧ ಪಕ್ಷದ ನಾಯಕರು ವಿರೋಧ ಮಾಡ್ತಿದ್ದಾರೆ. ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಿದರೆ ಸಾಕು ಅನ್ನೋದೆ ಇವರ ಉದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ತಜ್ಞರ ಜೊತೆ ಚರ್ಚಿಸಿಯೇ ತೀರ್ಮಾನ ಮಾಡಿದ್ದು"
ಗ್ರಾಮಪಂಚಾಯ್ತಿಗಳಿಗೆ ನಾವು ಆಡಳಿತ ಸಮಿತಿಯನ್ನು ನೇಮಕ ಮಾಡಬೇಕು ಅಂತ ತೀರ್ಮಾನ ಮಾಡಿದ್ದು ಸ್ವಂತ ತೀರ್ಮಾನ ಅಲ್ಲ. ಕಾನೂನುಬದ್ಧವಾಗಿ ಕಾನೂನು ಇಲಾಖೆಯ ಎಲ್ಲ ತಜ್ಞರ ಜೊತೆ ಚರ್ಚೆ ಮಾಡಿ, ಈ ರಾಜ್ಯದ ಅಡ್ವೋಕೇಟ್ ಜನರಲ್ ಗಳ ಅಭಿಪ್ರಾಯ ತೆಗೆದುಕೊಂಡು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ ನಾವು ಘೋಷಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications