ಅಚ್ಚರಿ ಹುಟ್ಟಿಸಿದ ಕುಮಾರಸ್ವಾಮಿಯವರ ಆ ಹೇಳಿಕೆ!
Recommended Video
ಮೈಸೂರು, ಮೇ 09: ರಾಜ್ಯದಲ್ಲಿ ಈ ಬಾರಿ ಜನ ಜೆಡಿಎಸ್ ಅನ್ನು ಕೈಹಿಡಿಯಲಿದ್ದು ಸ್ವಂತಬಲದಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇದೀಗ ಮೆದು ಧೋರಣೆ ತಾಳಿದ್ದು, 'ನಮ್ಮ ಪಕ್ಷದ ಪ್ರಣಾಳಿಕೆಯನ್ನು ಗೌರವಿಸುವವರಿಗೆ ನನ್ನ ಬೆಂಬಲವಿದೆ' ಎಂದು ಹುಣಸೂರಿನಲ್ಲಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ನಡುವೆ ದೇವೇಗೌಡರು ನಾವು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ. ಪಕ್ಷೇತರರೊಂದಿಗೆ ಸೇರಿ ಸರ್ಕಾರ ರಚಿಸುವುದಾಗಿ ಹೇಳಿದ್ದರು. ಇನ್ನು ಕುಮಾರಸ್ವಾಮಿ ಅವರಂತೂ ಮತ್ತೆ ಚುನಾವಣೆಗೆ ಹೋದರೂ ಪರ್ವಾಗಿಲ್ಲ.
113 ಸ್ಥಾನ ಗೆಲ್ಲುವ ತಂತ್ರಗಾರಿಕೆ ಮಾಡಲಾಗಿದೆ :ಎಚ್ಡಿಕೆ
ಕಾಂಗ್ರೆಸ್ಸಿಗಾಗಲೀ, ಬಿಜೆಪಿಗಾಗಲೀ ಬೆಂಬಲ ನೀಡಲ್ಲ. ನಮ್ಮ ನಡುವೆ ಯಾವುದೇ ಒಪ್ಪಂದಗಳು ನಡೆದಿಲ್ಲ ಎಂಬ ಹೇಳಿಕೆಗಳನ್ನು ನೀಡಿದ್ದರು. ಇದೀಗ ಹುಣಸೂರಿನಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಗೌರವಿಸುವವರಿಗೆ ನನ್ನ ಬೆಂಬಲವಿದೆ ಎಂದು ಹೇಳಿರುವುದು ರಾಜಕೀಯ ವಲಯಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮ್ಯಾಜಿಕ್ ನಂಬರ್ ತಲುಪುವುದು ಸುಲಭವಲ್ಲ!
ಹಾಗೆನೋಡಿದರೆ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರು ಕಳೆದೊಂದು ವರ್ಷದಿಂದ ಬಿಡುವಿಲ್ಲದೆ ರಾಜ್ಯದಾದ್ಯಂತ ಪ್ರವಾಸ ನಡೆಸಿ ಪಕ್ಷದ ಸಂಘಟನೆ ಮಾಡಿದ್ದಾರೆ. ಮೈಸೂರು ಭಾಗದಲ್ಲಿ ಪಕ್ಷದ ಪ್ರಾಬಲ್ಯ ಇದೆಯಾದರೂ ಉತ್ತರಕರ್ನಾಟಕ, ಕರಾವಳಿಗಳಲ್ಲಿ ಜೆಡಿಎಸ್ ಇನ್ನೂ ಕೂಡ ಪ್ರಬಲವಾಗಿಲ್ಲ. ಹೀಗಾಗಿ ಅದು ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ಸ್ಥಾನವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಸದ್ಯದ ಸನ್ನಿವೇಶದಲ್ಲಿ ಅಸಾಧ್ಯ ಎಂಬುದುದ ರಾಜಕೀಯ ಪಂಡಿತರ ಅಂಬೋಣ. ಆದರೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಮಾತ್ರ ಅದೇ ವಿಶ್ವಾಸದಲ್ಲಿದ್ದಾರೆ.
ಸಮೀಕ್ಷೆಗಳು ಏನೆನ್ನುತ್ತವೆ?
ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಗಮನಿಸಿ ನೋಡಿದರೆ ಜೆಡಿಎಸ್ 50 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಎಲ್ಲಿಯೂ ಹೇಳಿಲ್ಲ. ಹೀಗಿರುವಾಗ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಜೆಡಿಎಸ್ ಕಿಂಗ್ ಮೇಕರ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿಯೇ ಬಹುಶಃ ಇದುವರೆಗೆ ನಾವೇ ಕಿಂಗ್ ಎನ್ನುತ್ತಿದ್ದ ಜೆಡಿಎಸ್ ಗೂ ಇದೀಗ ಕಿಂಗ್ ಮೇಕರ್ ಎಂಬುದು ಗೊತ್ತಾದಂತಿದೆ! ಆದರೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆಯಾಗುವುದು ಬಹುತೇಕ ಖಚಿತ ಎಂದು ಹಲವು ಸಮೀಕ್ಷೆಗಳು ಅಂದಾಜಿಸಿರುವುದರಿಂದ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಜೆಡಿಎಸ್ ಬೆಂಬಲ ಅನಿವಾರ್ಯವಾಗುತ್ತದೆ.
'ಜೆಡಿಎಸ್ ಯೋಜನೆಗಳನ್ನು ಅನುಷ್ಠಾನಕ್ಕೆ ಸಮ್ಮತಿಸಿದವರ ಜೊತೆ ಮೈತ್ರಿ'
ಜೆಡಿಎಸ್ ನಲ್ಲಿ ನಾಯಕರ ಕೊರತೆ
ಜೆಡಿಎಸ್ ನಲ್ಲಿಯೂ ನಾಯಕರಿಗೆ ಕೊರತೆಯಿದೆ. ಇಳಿ ವಯಸ್ಸಿನಲ್ಲೂ ಪ್ರಚಾರಕ್ಕೆ ತಾವೇ ಹೋಗಬೇಕಾದ ಪರಿಸ್ಥಿತಿ ದೇವೇಗೌಡರದ್ದಾಗಿದೆ. ಪಕ್ಷದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹೊರತು ಪಡಿಸಿದರೆ ಅಂತಹ ಜನಪ್ರಿಯ ನಾಯಕರು ಕಾಣಿಸಿಕೊಳ್ಳುತ್ತಿಲ್ಲ. ಪಕ್ಷದಲ್ಲಿದ್ದಂತಹ ಘಟಾನುಘಟಿ ನಾಯಕರು ಈಗಾಗಲೇ ಕಾಂಗ್ರೆಸ್ ಮಡಿಲಿನಲ್ಲಿದ್ದಾರೆ. ಈಗಿರುವ ಒಂದಷ್ಟು ನಾಯಕರನ್ನು ಕಟ್ಟಿಕೊಂಡು ಕುಮಾರಸ್ವಾಮಿ ಅವರು ಗೆಲುವಿನ ಪತಾಕೆ ಹಾರಿಸಬೇಕಾಗಿದೆ. ತಮಗೆ ಆರೋಗ್ಯ ಸಮಸ್ಯೆ ಇದ್ದರೂ ಅದೆಲ್ಲವನ್ನು ಮೀರಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವೇ.
ಲಾಭ ಜೆಡಿಎಸ್ ಗೇ!
ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಇದೆ. ಪ್ರಣಾಳಿಕೆಯಲ್ಲಿ ಹಲವು ಉತ್ತಮ ಯೋಜನೆಗಳನ್ನು ಘೋಷಿಸಿರುವ, ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ಹುಳುಕುಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಜೆಡಿಎಸ್ ಅನ್ನು ರಾಜ್ಯದ ಮತದಾರ ಹೇಗೆ ಸ್ವಾಗತಿಸುತ್ತಾನೆ ಎಂಬುದನ್ನು ಮೇ 15 ರವರೆಗೆ ಕಾದುನೋಡಬೇಕು. ಈಗಿನ ಎಲ್ಲ ಪರಿಸ್ಥಿತಿಯನ್ನು ಗಮನಿಸಿದರೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ಎದುರಾದರೆ ಅದರ ಲಾಭ ಜೆಡಿಎಸ್ ಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ರಾಮನಗರದಲ್ಲೂ ಕುಮಾರಸ್ವಾಮಿಗೆ ಗೆಲುವು