ವಿಜಯ್ ಈಶ್ವರನ್ ಕುರಿತಾದ ಪ್ರಶ್ನೆಗೆ ಕೆಂಡಾಮಂಡಲರಾದ ಸಿದ್ದು
ಮೈಸೂರು, ಜೂನ್ 7 : 'ವಿಜಯ ಈಶ್ವರನ್ ಯಾರೆಂದು ನನಗೆ ಗೊತ್ತಿಲ್ಲ. ಬಿಜೆಪಿಯವರ ಸುಳ್ಳುಗಳಿಗೆ ಉತ್ತರ ಕೊಡಲು ನಾನು ಹೋಗುವುದು ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ವಾಚ್ ಕಟ್ಟಿರೋದು ನಿಜ. ಫೋಟೋ ರಿಲೀಸ್ ಮಾಡಿರೋದರಲ್ಲಿ ವಾಚ್ ಇದ್ಯಾ..? ಪದೇ ಪದೇ ಯಾಕೆ ವಾಚ್ ವಿಷ್ಯ ಎತ್ತುತ್ತೀರಿ. ನೂರು ಸುಳ್ಳಿಗೆ ನೂರು ಉತ್ತರ ನೀಡಲು ಸಾಧ್ಯವಿಲ್ಲ ಎಂದು ಗರಂ ಆಗಿಯೇ ಉತ್ತರಿಸಿದರು.
ಸಾವಿರು ಜನರಿಗೆ ವಂಚಿಸಿರುವ ಆರೋಪ ಎದುರಿಸುತ್ತಿರುವ ವಿಜಯ್ ಈಶ್ವರನ್ ಅವರನ್ನು ಚೀನಾ ಪ್ರವಾಸದ ವೇಳೆ ಸಿದ್ದರಾಮಯ್ಯ ಭೇಟಿ ಮಾಡಿದ್ದ ಚಿತ್ರವನ್ನು ಬಿಜೆಪಿ ಸಾಮಾಜಿಕ ಮಾದ್ಯಮಗಳಲ್ಲಿ ಪ್ರಕಟಿಸಿತ್ತು.
ನರೇಂದ್ರ ಮೋದಿ ಅವರು ಯಾರು ಕೊಟ್ಟರು ಎಂದು ಲಕ್ಷ ರೂಪಾಯಿ ಬೆಲೆ ಬಾಳುವ ಸೂಟ್ ಹಾಕಿಕೊಂಡಿದ್ದರು, ಅದನ್ನ ಹಾರಾಜು ಹಾಕಿದರು. ಅದಕ್ಕೆ ಟ್ಯಾಕ್ಸ್ ಕಟ್ಟಿದ್ದರಾ? ಉಡುಗೊರೆಯಾಗಿ ನೀಡಿದ ಸೂಟ್ ಗೆ ಟ್ಯಾಕ್ಸ್ ಕಟ್ಟಿದ್ದರಾ ಎಂಬುದಕ್ಕೆ ಮೊದಲು ಉತ್ತರ ಕೊಡಲಿ. ವಾಚ್ ದು ಆಮೇಲೆ ಮಾತನಾಡೋಣ ಎಂದು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದರು.
ಕರ್ನಾಟಕಕ್ಕೆ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದ ಮೇಲೆ ನಮ್ಮ ಅಲೆ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದ ಜೊತೆಗೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಪ್ರಣಾಳಿಕೆ ಒಪ್ಪುವ ಪಕ್ಷದ ಜೊತೆ ಹೋಗ್ತೇವೆ ಅನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕುಮಾರಸ್ವಾಮಿ ಕಿಂಗ್ ಅಂತಿದ್ರು, ಈಗ ಕಿಂಗ್ ಅಲ್ವಾ ...ಕಿಂಗ್ ಮೇಕರ್ ಆದ್ರಾ ಎಂದು ತಿರುಗೇಟು ನೀಡಿದರು.

ನಾನೂ ಯುದ್ಧಭೂಮಿಯ ಸೇನಾಧಿಪತಿ ಇದ್ದಂತೆ. ಸೇನಾಧಿಪತಿ ಧೈರ್ಯದಿಂದ ಮುನ್ನುಗ್ಗಿದ್ದರೆ ಹಿಂದೆ ಇರುವವರು ಧೈರ್ಯದಿಂದ ಮುನ್ನುಗುತ್ತಾರೆ. ನಾನೂ ಈ ಚುನಾವಣೆಯ ಕ್ಯಾಪ್ಟನ್. ನನಗೆ ಯಾವುದೇ ಟೆನ್ಷನ್, ಆತಂಕ ಇಲ್ಲ. ಗೆಲ್ಲುವ ಕಾನ್ಫಿಡೆನ್ಸ್ ನನಗಿದೆ. ಕ್ಯಾಪ್ಟನ್ ನರ್ವಸ್ ಆದ್ರೆ, ನನ್ನ ಸೈನಿಕರು ಕೂಡ ನರ್ವಸ್ ಆಗ್ತಾರೆ. ನಾವೂ ಗೆದ್ದೆ ಗೆಲ್ಲುತ್ತೇವೆ. ಮತ್ತೇ ನಾನೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಭವಿಷ್ಯ ನುಡಿದರು.












Click it and Unblock the Notifications