'ಚಡ್ಡಿ' ಅಸ್ತ್ರದಿಂದಲೇ ಕಾಂಗ್ರೆಸ್ ಮಣಿಸಲು ಹವಣಿಸುತ್ತಿದೆ ಬಿಜೆಪಿ!
ಮೈಸೂರು, ಏಪ್ರಿಲ್ 28: ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಒಂದು ಕಡೆ ಮತದಾರರ ಮನಸೆಳೆಯಲು ಭರವಸೆಯ ಮಹಾಪೂರ ಹರಿದು ಬರುತ್ತಿದ್ದರೆ, ಇನ್ನೊಂದೆಡೆ ನಾಯಕರ ನಡುವೆ ವಾಕ್ಸಮರವೂ ಸಮಾರೋಪಾದಿಯಲ್ಲಿ ಸಾಗಿದೆ.
ಈ ನಡುವೆ ಮಾತಿನ ಭರದಲ್ಲಿ ಬಳಸುವ ಪದಗಳು ರಾಜಕೀಯ ನಾಯಕರಿಗೆ ಮುಳುವಾಗಿ ಪರಿಣಮಿಸುತ್ತಿರುವುದು ಕಂಡು ಬರುತ್ತಿದೆ. ನೆರೆದ ಜನರ ಮುಂದೆ ತೀರಾ ವೈಯಕ್ತಿಕ, ಅಸಹ್ಯಕರ, ಬೇಜವಬ್ದಾರಿಯುತ ಮಾತುಗಳನ್ನಾಡಿ ಬಳಿಕ ಕ್ಷಮೆ ಕೇಳುವುದು ಇತ್ತೀಚೆಗೆ ಮಾಮೂಲಿಯಾಗಿದೆ.
ದೇಶವನ್ನಾಳುವ ನಾಯಕರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳದೆ ಹೋದರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ರಾಜಕೀಯ ನಾಯಕರು ಸ್ವತಃ ಅನುಭವಿಸಿದ್ದಾರೆ.
ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ನರೇಂದ್ರಮೋದಿ ಬಗ್ಗೆ ಬಳಸಿದ ಚಹಾವಾಲ ಪದ ಮೋದಿಗೆ ಪಾಲಿಗೆ ಒಳಿತಾಗಿ, ಕಾಂಗ್ರೆಸ್ ನಾಯಕರಿಗೆ ಕಂಟಕವಾಗಿತ್ತು.

ಚಡ್ಡಿ ಸರ್ಕಾರ ಬೇಕೆ?!
'ಚಡ್ಡಿ ಸರ್ಕಾರ ಬೇಕೇ?' ಎಂಬ ಕಾಂಗ್ರೆಸ್ ನಾಯಕರ ಮಾತುಗಳು ಮತ್ತೊಂದು ತಿರುವುಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ಬಿಜೆಪಿ ನಾಯಕರು ಚಡ್ಡಿಯನ್ನು ಹಿಡಿದುಕೊಂಡೇ ಜನರ ಮುಂದೆ ಹೋಗುತ್ತಿದ್ದಾರೆ. ಆ ಮೂಲಕ ಚಡ್ಡಿ ಅಂದರೇನು? ಅದರ ಮಹತ್ವವೇನು? ಹೀಗಿರುವಾಗ ಚಡ್ಡಿ ಬಗ್ಗೆ ಮಾತನಾಡಿ ಕಾಂಗ್ರೆಸ್ಸಿಗರು ಅವಮಾನ ಮಾಡುತ್ತಿದ್ದಾರೆ ಎಂಬ ಅರ್ಥ ಬರುವ ಮಾತುಗಳನ್ನಾಡುತ್ತಾ ಕಾಂಗ್ರೆಸ್ ಗೆಗೆ ತಿರುಗುಬಾಣ ಹೊಡೆಯುತ್ತಿದ್ದಾರೆ.

ಚಡ್ಡಿ ಅಂದ್ರೇನು?!
ಕಾಂಗ್ರೆಸ್ ಪಕ್ಷದವರು ಚಡ್ಡಿ ಸರ್ಕಾರ ಬೇಕೆ ಎಂಬ ಪ್ರಶ್ನೆ ಮಾಡುವ ಮೂಲಕ ರೈತ ಸಮುದಾಯವನ್ನು ಅಪಮಾನಿಸಿದ್ದಾರೆ ಎನ್ನುವುದು ಬಿಜೆಪಿ ಅವರ ಆರೋಪವಾಗಿದ್ದು ಈ ಚಡ್ಡಿಯ ಮಹತ್ವವನ್ನು ಹೇಳುತ್ತಾ ಮಾಜಿ ಸಂಸದೆ ತೇಜಸ್ವಿನಿಗೌಡ ಅವರು ಇದೀಗ ಕಾಂಗ್ರೆಸ್ ನವರ ಬೆವರಿಳಿಸುತ್ತಿದ್ದಾರೆ. ಅವರ ಪ್ರಕಾರ ಚಡ್ಡಿ ಅಂದರೇನು ಎಂಬುದನ್ನು ನೀವೇ ನೋಡಿ.

ರೈತರು ಉಳುಮೆ ಮಾಡುವಾಗಲೂ ಚಡ್ಡಿ ಬೇಡವೇ?
ಪ್ರತಿಯೊಬ್ಬ ರೈತರು ಕೂಡ ಜಮೀನಿನಲ್ಲಿ ಉಳುಮೆ ಸೇರಿದಂತೆ ಕೃಷಿ ಚಟುವಟಿಕೆ ಮಾಡುವಾಗ ಚಡ್ಡಿ ಹಾಕಿಕೊಂಡೇ ಕೆಲಸ ಮಾಡುತ್ತಾರೆ. ಇಂಥ ರೈತರ ಶ್ರಮದ ದುಡಿಮೆಯನ್ನು ಕಾಂಗ್ರೆಸ್ ಚಡ್ಡಿ ಎಂದು ಜರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಭಕ್ತರಾಗಿ, ಕರಸೇವಕರಾಗಿ ಖಾಕಿ ಚಡ್ಡಿ ಧರಿಸಿ, ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಗುಜರಾತ್ನಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು. ಈಗ ದೇಶದ ಪ್ರಧಾನಿಯಾಗಿದ್ದಾರೆ. ಇಂಥ ಚಡ್ಡಿ ಧರಿಸಿದ ವ್ಯಕ್ತಿಯ ಆಡಳಿತವನ್ನು 23 ರಾಜ್ಯಗಳು ಒಪ್ಪಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ.

ಕ್ರೀಡಾಪಟುಗಳಿಗೆ ಬೇಡವೇ?
ನಮ್ಮ ಹೆಮ್ಮೆಯ ಕ್ರೀಡಾಪಟುಗಳು ಪದಕವನ್ನು ತಂದುಕೊಡಲು ಚಡ್ಡಿಯನ್ನು ಧರಿಸಿ, ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿ ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಸಾರಿದ್ದಾರೆ. ತೇಜಸ್ವಿನಿಗೌಡ ಅವರ ಹೇಳಿದ ಮಾತನ್ನು ಕೇಳಿದ ಬಳಿಕ ಎಲ್ಲರಿಗೂ ಚಡ್ಡಿಯ ಮಹತ್ವ ಅರಿವಾಗಿರಬಹುದು. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಚುನಾವಣಾ ರಣರಂಗದಲ್ಲಿ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿಯೂ ಪ್ರಯೋಗವಾಗುವುದಂತು ಸತ್ಯ. ಟೀ ಮಾರಾಟ ಮಾಡಿ ಪ್ರಚಾರ ಮಾಡಿದಂತೆ. ಈ ಬಾರಿ ಚಡ್ಡಿ ಹಾಕಿಕೊಂಡು ಪ್ರಚಾರ ಮಾಡುವುದರೊಂದಿಗೆ ಕಾರ್ಯಕರ್ತರು ಕಾಂಗ್ರೆಸ್ ಗೆ ಸೆಡ್ಡು ಹೊಡೆದರೂ ಅಚ್ಚರಿಪಡಬೇಕಾಗಿಲ್ಲ.

ಚಡ್ಡಿಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?
ಕೆಲವೊಮ್ಮೆ ಆಕ್ರೋಶದಲ್ಲೋ, ಉದ್ವೇಗದಲ್ಲೋ ಆಡಿದ ಮಾತುಗಳು ಎದುರಾಳಿಗಳಿಗೆ ಅಸ್ತ್ರವಾಗಿ ಅದಕ್ಕೆ ಕೊರಳೊಡ್ಡಬೇಕಾದ ಅನಿವಾರ್ಯತೆಗಳು ಎದುರಾಗಿ ಬಿಡುತ್ತದೆ. ಚಡ್ಡಿ ವಿಚಾರ ಯಾವ್ಯಾವ ರೂಪ ಪಡೆಯುತ್ತದೆ. ಅದರಿಂದ ಯಾರಿಗೆ ಲಾಭ ಯಾರಿಗೆ ನಷ್ಟ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ!












Click it and Unblock the Notifications