Karnataka elections 2023: ಒಕ್ಕಲಿಗರ ಭದ್ರಕೋಟೆ ಚಾಮರಾಜದಲ್ಲಿ ಕಾಂಗ್ರೆಸ್ ಮಣಿಸಲು ಬಿಜೆಪಿ ರಣನೀತಿ, ಮಾಹಿತಿ ಇಲ್ಲಿದೆ
ಮೈಸೂರು, ಏಪ್ರಿಲ್, 16: ಒಕ್ಕಲಿಗರ ಭದ್ರಕೋಟೆ ಚಾಮರಾಜ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮೂಲ ಮತ್ತು ವಲಸಿಗರ ನಡುವೆ ಶೀತಲ ಸಮರ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರ ಲಾಭವನ್ನು ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ಪಡೆದುಕೊಳ್ಳುತ್ತಾರಾ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ.
ಮಾಜಿ ಶಾಸಕ ವಾಸು ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ ವಾಸು ಮತ್ತು ಹರೀಶ್ ಗೌಡರ ನಡುವೆ ಟಿಕೆಟ್ಗೆ ತೀವ್ರ ಪೈಪೋಟಿ ಎದುರಾಗಿತ್ತು. ವಾಸು ಅವರ ಬೆನ್ನಿಗೆ ಕಾಂಗ್ರೆಸ್ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿಂತಿದ್ದರೆ, ಹರೀಶ್ ಗೌಡ ಪರ ಸಿದ್ದರಾಮಯ್ಯ ನಿಂತಿದ್ದರು.

ಬಿಜೆಪಿ ಕಡೆಗೆ ಮುಖ ಮಾಡಿದ ಪುತ್ರರು
ಕೊನೆಗೂ ಅಳೆದು ತೂಗಿ ಹರೀಶ್ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿರುವುದು ವಾಸು ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಕೂಗು ಕೇಳಿಬರುತ್ತಿದೆ. ಇಷ್ಟಕ್ಕೂ ಈಗಾಗಲೇ ವಾಸು ಅವರ ಪುತ್ರರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಪುತ್ರ ಕವೀಶ್ ಗೌಡ ಅವರಿಗೆ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅಲ್ಲಿ ಜಿ.ಟಿ.ದೇವೇಗೌಡರ ಎದುರು ಸ್ಪರ್ಧೆಗಿಳಿದಿದ್ದಾರೆ.
ಹೀಗಿರುವಾಗ ತಂದೆ ವಾಸು ಅವರಿಗೆ ಚಾಮರಾಜ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರು ಟಿಕೆಟ್ ನೀಡಲು ಹೇಗೆ ಸಾಧ್ಯ? ಆದರೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಾಸು ಅವರಿಗೆ ನಿರಾಸೆ ಆಗಿರುವುದಂತು ನಿಜ. ಇದರ ಪರಿಣಾಮಗಳು ಕ್ಷೇತ್ರದ ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತಾ? ಎಂಬುದೇ ಪ್ರಶ್ನೆಯಾಗಿದೆ.
ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕರು
ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಒಕ್ಕಲಿಗರು ನಿರ್ಣಾಯಕರಾಗಿದ್ದು, ಈಗ ಮೂರು ಪಕ್ಷದಿಂದ ಮೂವರು ಒಕ್ಕಲಿಗ ನಾಯಕರು ಕಣಕ್ಕಿಳಿದಿದ್ದಾರೆ. ಮತದಾರರು ಯಾರ ಮೇಲೆ ಒಲವು ತೋರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹರೀಶ್ ಗೌಡ ಅವರು, ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ನಾಯಕ ಬಹುಶಃ ಕಳೆದ ಬಾರಿ ಜೆಡಿಎಸ್ನಿಂದ ಟಿಕೆಟ್ ನೀಡಿದ್ದರೆ ಅವರು ಗೆದ್ದು ಶಾಸಕರಾಗಿ ಬಿಡುತ್ತಿದ್ದರು. ಮೈಸೂರು ವಿಶ್ವ ವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಅವರಿಗೆ ಟಿಕೆಟ್ ನೀಡಿತ್ತು.

ಅಲ್ಲಿ ತನಕ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಕಟ್ಟಿ ಬೆಳೆಸಿದ್ದ ಹರೀಶ್ ಗೌಡರಿಗೆ ಇದರಿಂದ ಭಾರಿ ನೋವಾಗಿತ್ತು. ಹೀಗಾಗಿ ಬಂಡಾಯವೆದ್ದ ಅವರು ಪಕ್ಷೇತರರಾಗಿ ಸ್ಪರ್ಧಿಸಿದರು. ಕ್ಷೇತ್ರದಲ್ಲಿ ಒಂದಷ್ಟು ಮತವನ್ನು ಪಡೆಯುವುದರ ಮೂಲಕ ಜೆಡಿಎಸ್ಗೆ ಸೆಡ್ಡು ಹೊಡೆದರು. ಪರಿಣಾಮ ಆಗ ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೂ ಕಾರಣರಾದರು. ಪರಿಣಾಮ ಬಿಜೆಪಿಯ ಎಲ್.ನಾಗೇಂದ್ರ ಗೆಲುವು ಸಾಧಿಸಿದ್ದರು.
ಕಳೆದ ಚುನಾವಣೆ ಬಳಿಕ ಕಾಂಗ್ರೆಸ್ ಸೇರಿದ ಹರೀಶ್ ಗೌಡ ಅವರು, ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ. ಇದೀಗ ಮತ್ತೆ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಇದರ ಪರಿಣಾಮ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ವಾಸು ಅವರಿಗೆ ನಿರಾಸೆಯಾಗಿದೆ. ಮುಂದೆ ಟಿಕೆಟ್ ವಂಚಿತ ವಾಸು ಮತ್ತು ಬೆಂಬಲಿಗರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಗೌಡ ಪರ ಕೆಲಸ ಮಾಡುತ್ತಾರಾ? ಅಥವಾ ಮೌನಕ್ಕೆ ಶರಣಾಗುತ್ತಾರಾ? ಎಂಬ ಪ್ರಶ್ನೆಗಳು ಎದ್ದಿವೆ.
ಒಂದು ವೇಳೆ ಹೊಸಬರಿಗೆ ಪಕ್ಷದಲ್ಲಿ ಮಣೆಹಾಕಲಾಗಿದೆ ಎಂಬ ವಿಚಾರ ಮೂಲ ಮತ್ತು ವಲಸಿಗರ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗುತ್ತಾ? ಎಂಬುದು ಮುಂದೆ ಗೊತ್ತಾಗಲಿದೆ. ಇದುವರೆಗೆ ನಡೆದಿರುವ ಹನ್ನೊಂದು ಚುನಾವಣೆಗಳಲ್ಲಿ ಐದು ಬಾರಿ ಬಿಜೆಪಿ, ಮೂರು ಬಾರಿ ಜನತಾ ಪಕ್ಷ, ಎರಡು ಬಾರಿ ಕಾಂಗ್ರೆಸ್ ಹಾಗೂ ಒಮ್ಮೆ ಎಸ್ಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಒಕ್ಕಲಿಗ ನಾಯಕರೇ ಆಗಿದ್ದಾರೆ. ಜಿದ್ದಾಜಿದ್ದಿ ಕೂಡ ಒಕ್ಕಲಿಗರ ನಡುವೆಯೇ ನಡೆಯುತ್ತಿದೆ.
ಹರೀಶ್ ಗೌಡರನ್ನು ಬೆಂಬಲಿಸುತ್ತಾರಾ?
ಇದೆಲ್ಲದರ ನಡುವೆ ಪರೋಕ್ಷವಾಗಿ ಒಕ್ಕಲಿಗರ ಪಕ್ಷವೆಂದೇ ಕರೆಯಲಾಗುತ್ತಿರುವ ಜೆಡಿಎಸ್ ಕ್ಷೇತ್ರದಲ್ಲಿ ಇನ್ನೂ ಕೂಡ ಖಾತೆ ತೆರೆದಿಲ್ಲ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಹರೀಶ್ ಗೌಡರಿಗೆ ಟಿಕೆಟ್ ನೀಡಿದ್ದರೆ ಜೆಡಿಎಸ್ ಗೆಲ್ಲುವ ಸಾಧ್ಯತೆಯಿತ್ತು. ಈ ಬಾರಿ ಜೆಡಿಎಸ್ನಲ್ಲಿದ್ದ ಹರೀಶ್ ಗೌಡ ಕಾಂಗ್ರೆಸ್ಗೆ ಬಂದಿದ್ದಾರೆ.
ಟಿಕೆಟ್ಗೆ ಜಿದ್ದಾಜಿದ್ದಿ ಇದ್ದ ಕಾರಣ ಮೂರನೇ ಪಟ್ಟಿಯಲ್ಲಿ ಅವರ ಹೆಸರು ಘೋಷಣೆ ಮಾಡಲಾಗಿದೆ. ಆದರೆ ಹರೀಶ್ ಗೌಡರು ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಜೆಡಿಎಸ್ ಅನ್ನು ಎದುರಿಸುವ ಮುನ್ನ ತಮ್ಮದೇ ಪಕ್ಷದ ನಾಯಕರ ಬೆಂಬಲ ಪಡೆಯುವುದೇ ಪ್ರಮುಖ ಸವಾಲಾಗಿದೆ.












Click it and Unblock the Notifications