ವರುಣಾದಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ವಿಜಯೇಂದ್ರ ಕಣಕ್ಕೆ: ಕೇಸರಿ ಪಕ್ಷದಲ್ಲಿ ನಡೆಯುತ್ತಿದೆಯಂತೆ ಹೈವೊಲ್ಟೇಜ್ ಚರ್ಚೆ
ವರುಣಾ, ಮಾರ್ಚ್ 30: ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಮಾತುಕತೆ ನಡೆಯುತ್ತಿದೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಟಿಕೆಟ್ ಘೋಷಣೆಗೂ ಮುಂಚೆಯೇ ಕೋಲಾರದಿಂದ ಸ್ಪರ್ಧೆಗೆ ಇಳಿಯುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಕೊನೆಗೆ ತಮ್ಮ ತವರು ಕ್ಷೇತ್ರ ವರುಣಾದಿಂದಲೇ ಕಣಕ್ಕೆ ಇಳಿಯುತ್ತಿದ್ದಾರೆ. ಈಗ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದ್ದು, ಸಿದ್ದರಾಮಯ್ಯ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟಿದೆ. ಅದಕ್ಕಾಗಿ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ಮುಂದಾಗಿದೆ.

ಇದರ ಭಾಗವಾಗಿಯೇ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಮಾತುಕತೆಗಳು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಳೆದ 2018ರ ಚುನಾವಣೆಯಲ್ಲೇ ಸಿದ್ದರಾಮಯ್ಯ ಮಗ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಬೇಕಾಗಿತ್ತು. ಆದರೆ ಚುನಾವಣಾ ಸಮೀಕ್ಷೆಗಳು ವಿಜಯೇಂದ್ರ ಸೋಲುತ್ತಾರೆ ಎಂದು ಅಂದಾಜಿಸಿದ ಬೆನ್ನಲ್ಲೆ ವಿಜಯೇಂದ್ರ ಕಣದಿಂದ ಹಿಂದಕ್ಕೆ ಸರಿದಿದ್ದರು.
ಈಗ ಸಿದ್ದರಾಮಯ್ಯ ಅವರು ಕೋಲಾರದಿಂದಲೂ ನಿಲ್ಲುತ್ತೇನೆ ಎಂದು ಹೇಳುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಕಳೆದ ಬಾರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಹಾಗೂ ಬಾದಾಮಿ ಎರಡು ಕಡೆ ನಿಂತಂತೆ ಈ ಬಾರಿಯೂ ವರುಣಾ ಹಾಗೂ ಕೋಲಾರದಲ್ಲಿ ನಿಲ್ಲುವ ಸಾಧ್ಯತೆ ಇದೆ. ಸಿದ್ದರಾಮಯ್ಯ ವರುಣದಲ್ಲೇ ನಿಂತರೇ ವಿಜಯೇಂದ್ರ ನಿಂತರೆ ವರುಣಾ ಕರ್ನಾಟಕ ವಿಧಾನಸಭಾ ಚುನಾವಣೆಯ ಹಾಟ್ಸ್ಪಾಟ್ ಆಗಲಿದೆ.
ಬಿಜೆಪಿ ಹಳೆ ಮೈಸೂರು ಭಾಗಕ್ಕೆ ಒತ್ತು ನೀಡುತ್ತಿದ್ದು, 150 ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರವನ್ನ ರೂಪಿಸುತ್ತಿದೆ ಎಂದು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ ಅವರು ಫೆಬ್ರವರಿಯಲ್ಲಿ ತಿಳಿಸಿದ್ದರು. ಒಂದು ವೇಳೆ ಅಂತಿಮವಾಗಿ ವಿಜಯೇಂದ್ರ ಅವರು ವರುಣಾದಿಂದಲೇ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಕಟ್ಟಿ ಹಾಕಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಈಗಾಗಲೇ ಶಿಕಾರಿಪುರದಿಂದ ಸ್ಪರ್ಧೆ ಮಾಡುವುದಾಗಿ ವಿಜಯೇಂದ್ರ ಘೋಷಣೆ ಮಾಡಿದ್ದಾರೆ. ಆದರೆ ವರುಣಾದಿಂದ ವಿಜಯೇಂದ್ರ ಅವರನ್ನ ಕಣಕ್ಕಿಳಿಸಪಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅಧಿಕವಾಗಿದ್ದು, ನಿರ್ಣಾಯಕರು ಆಗಿದ್ದಾರೆ. ಒಂದು ವೇಳೆ ವಿಜಯೇಂದ್ರ ಇಲ್ಲಿ ನಿಂತರೆ ಲಿಂಗಾಯತ ಮತದಾರರು ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ. ಆದರೂ ವಿಜಯೇಂದ್ರ ವರುಣಾದಲ್ಲಿ ಗೆಲ್ಲುವುದು ಅಷ್ಟು ಸುಲಭ ಇಲ್ಲ. ಕಾರಣ ಸಿದ್ದರಾಮಯ್ಯ ಪ್ರಭಾವ ಇಲ್ಲಿ ಹೆಚ್ಚಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ತವರು ಕ್ಷೇತ್ರ ಶಿಕಾರಿಪುರವನ್ನು ವಿಜಯೇಂದ್ರ ಸ್ಪರ್ಧೆಗೆ ಘೋಷಿಸಿದ್ದರು. ಅದರಂತೆ ವಿಜಯೇಂದ್ರ ಶಿಕಾರಿಪುರದಲ್ಲಿ ಕಣಕ್ಕಿಳಿಯಲು ಬೇಕಾದ ಸಿದ್ದತೆಯನ್ನು ನಡೆಸಿದ್ದಾರೆ. ಕ್ಷೇತ್ರದಲ್ಲಿ ಎರಡು ಬಾರಿ ಪ್ರವಾಸವನ್ನು ಸಹ ನಡೆಸಿದ್ದಾರೆ. ಒಂದು ವೇಳೆ ಸಂರಕ್ಷಣಾ ಆಟದಂತೆ ಶಿಕಾರಿಪುರದಲ್ಲೂ ವಿಜಯೇಂದ್ರ ವರುಣಾದಲ್ಲೂ ಕಣಕ್ಕೆ ಇಳಿಯಬಹುದು.
ರಾಜ್ಯದಲ್ಲಿ ಹೈಕಮಾಂಡ್ ವರಿಷ್ಠರ ಲೆಕ್ಕಾಚಾರವೇ ಬೇರೆ ಇರಬಹುದು. ಶಿಕಾರಿಪುರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸುವುದು ಸುಲಭ. ಅಂತೆಯೇ ವಿಜಯೇಂದ್ರ ಅವರಿಗಿರುವ ವರ್ಚಸ್ಸು ಪ್ರಭಾವವನ್ನು ಬಳಸಿಕೊಂಡು ವರುಣಾದಿಂದ ಕಣಕ್ಕಿಳಿಸಿ ಸಿದ್ದರಾಮಯ್ಯ ಅವರನ್ನು ಸೋಲಿಸಬಹುದು. ಕೇವಲ ವರುಣಾ ಕ್ಷೇತ್ರ ಮಾತ್ರವಲ್ಲದೆ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಿಂಗಾಯತ ಮತಗಳನ್ನು ಸೆಳೆಯುವುದು ಹಾಗೂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ತವರು ಜಿಲ್ಲೆಯಲ್ಲಿ ಸೋಲಿನ ರುಚಿ ತೋರಿಸಬೇಕೆಂದು ಬಿಜೆಪಿ ಯೋಜನೆ ಹಾಕಿಕೊಂಡಿದೆ.












Click it and Unblock the Notifications