ಮೈಸೂರು ದಸರಾದಲ್ಲಿ ಶಿವಣ್ಣ, ದರ್ಶನ್: ರಂಗೇರಲಿದೆ ನಾಡಹಬ್ಬ
ಮೈಸೂರು, ಸೆಪ್ಟೆಂಬರ್ 12: ನಾಡಹಬ್ಬ ದಸರಾ ಪ್ರಯುಕ್ತ ಸೆ.21ರಿಂದ ಸಾಂಸ್ಕೃತಿಕ ವೈಭವ, ಸೆ.22ರಿಂದ ಯುವ ದಸರಾ, ಮಕ್ಕಳ ದಸರಾ, ಮಹಿಳಾ ದಸರಾಗೆ ಚಾಲನೆ ದೊರೆಯಲಿದೆ.
ಅಂಬಾ ವಿಲಾಸದಲ್ಲಿ ಸಾಂಸ್ಕೃತಿಕ ವೈಭವ
ಸಂವಿಧಾನ- ಪ್ರಜಾಸತ್ತೆ- ಸಮಾನತೆ ಕುರಿತಂತೆ ಸಾಂಸ್ಕೃತಿಕ ಉಪ ಸಮಿತಿಯು ಸೆ.21ರಿಂದ 29ರವರೆಗೆ ಜಗನ್ಮೋಹನ ಅರಮನೆ, ಕಲಾಮಂದಿರ, ಚಿಕ್ಕ ಗಡಿಯಾರ ಬಳಿ, ಸಿ.ರಂಗಾಚಾರ್ಲು ಪುರಭವನ, ವೀಣೆ ಶೇಷಣ್ಣ ಭವನ, ಅಂಬಾ ವಿಲಾಸ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕಮಗಳನ್ನು ಹಮ್ಮಿಕೊಂಡಿದೆ.
ಅಂಬಾ ವಿಲಾಸ ಅರಮನೆ ಮುಂಭಾಗ ಪ್ರತಿದಿನ ಸಂಜೆ 6 ರಿಂದ 10 ಗಂಟೆವರೆಗೂ ಕರ್ನಾಟಿಕ್, ಹಿಂದೂಸ್ಥಾನಿ, ಫ್ಯೂಜನ್, ಸೂಫಿ ಸಂಗೀತ, ಗಜಲ್, ಭರತನಾಟ್ಯ, ಕಥಕ್, ಕೂಚುಪುಡಿ, ಮೋಹಿನಿಯಾಟ್ಟಂ, ಓಡಿಸ್ಸಿ ನೃತ್ಯ ಪ್ರಕಾರಗಳು ಪ್ರದರ್ಶನವಾಗಲಿವೆ. ಪಂಡಿತ್ ರಾಜೀವ್ ತಾರಾನಾಥ್, ವಿದ್ವಾನ್ ಟಿ.ಎಂ.ಕೃಷ್ಣ, ಪದ್ಮಶ್ರೀ ಪುರಸ್ಕೃತ ನಟಿ ಶೋಭನಾ, ನಟಿ ಸುಧಾಚಂದನ್, ಉಸ್ತಾದ್ ತಲತ್ ಅಜೀಜ್, ಉಸ್ತಾದ್ ಲಕ್ವಿಂದರ್ ವಡಾಲಿ, ವಿದುಷಿ ಶುಭಾ ಮುದ್ಗಲ್, ಡಾ.ವಸುಂಧರಾ ದೊರೆಸ್ವಾಮಿ ಸೇರಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸಲಿದ್ದಾರೆ.

ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಮಕ್ಕಳ ರಂಗು
ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಜಗನ್ಮೋಹನ ಅರಮನೆಯಲ್ಲಿ ಸೆ.22 ಮತ್ತು 23ರಂದು ಮಕ್ಕಳ ದಸರಾ ನಡೆಯಲಿದ್ದು, ಡ್ರಾಮಾ ಜ್ಯೂನಿಯರ್ಸ್, ಸರಿಗಮಪ ಜ್ಯೂನಿಯರ್ಸ್ ಖ್ಯಾತಿಯ ಮಕ್ಕಳು ತಾರಾ ರಂಗು ತುಂಬಲಿದ್ದಾರೆ. ಮಕ್ಕಳಿಗಾಗಿ ವೇಷಭೂಷಣ, ಚಿತ್ರಕಲೆ, ನೃತ್ಯ, ಏಕಪಾತ್ರಾಭಿನಯ, ಭರತನಾಟ್ಯ, ನಾಟಕ ಸ್ಪರ್ಧೆಗಳು ಆಯೋಜನೆಗೊಂಡಿವೆ. ವಿಜೇತ ಮಕ್ಕಳಿಗೆ ಬಹುಮಾನ.

ಯುವ ದಸರಾಕ್ಕೆ ತಾರಾ ಮೆರಗು
ಇನ್ನು ಸೆ.22ರಿಂದ ಯುವ ದಸರಾ ಆರಂಭವಾಗಲಿದ್ದು, ಅಂದು 'ದಿಲ್ ಸೆ ದಿಲ್ ತಕ್' ಖ್ಯಾತಿಯ ಫಲಾಕ್ ಮುಚ್ಚಲ್ ಗಾಯನ, ಸೆ.23- ಬಾಲಿವುಡ್ ಗಾಯಕ ಕನ್ನಡದ ನಕಾಶ್ ಅಜೀಜ್ ಗಾಯನ, ಸೆ.24- ಕೋಕ್ ಸ್ಟುಡಿಯೋ ಕಾರ್ಯಕ್ರಮ , ಸೆ.25- ಅರ್ಜುನ್ ಜನ್ಯ ಸಂಗೀತ, ನಟಿ ಮಯೂರಿ ನೃತ್ಯ, ಸೆ.26- ಬಾಲಿವುಡ್ ಹಿನ್ನೆಲೆ ಗಾಯಕಿ ನೀತಿ ಮೋಹನ್ ಗಾಯನ, ಸೆ.27- ರೆಡ್ಬುಲ್ ಟೂರ್ ಬಸ್ ಸಂಗೀತ ಕಾರ್ಯಕ್ರಮ, ಸೆ.28- ಸ್ಯಾಂಡಲ್ ವುಡ್ ನೈಟ್ನಲ್ಲಿ ನಟ ಶಿವರಾಜ್ ಕುಮಾರ್ ಮತ್ತಿತರ ಕಲಾವಿದರಿಂದ ಕಾರ್ಯಕ್ರಮ. ಸೆ.29 ಗಂಧದಗುಡಿ ಸ್ಟಾರ್ ನೈಟ್ಸ್ ನಲ್ಲಿ ನಟ ದರ್ಶನ್ ಮತ್ತಿತರ ಕಲಾವಿದರಿಂದ ಕಾರ್ಯಕ್ರಮ ಮಹಾರಾಜ ಕಾಲೇಜು ಮೈದಾನದಲ್ಲಿ ಮೇಳೈಸಲಿದೆ.

ಮಹಿಳಾ ಮತ್ತು ಮಕ್ಕಳ ದಸರಾದಲ್ಲಿಯೂ ಹೊಸ ರಂಗು
ಇತ್ತ ಜೀವರಾಯನ ಕಟ್ಟೆ ಮೈದಾನದಲ್ಲಿ ಸೆ.21ರಿಂದ 28ರವರೆಗೂ ಮಹಿಳಾ ಮತ್ತು ಮಕ್ಕಳ ದಸರಾ ಏರ್ಪಡಿಸಲಾಗಿದೆ. ಸೆ.21ರಂದು ಬೆಳಿಗ್ಗೆ 7.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ರಂಗೋಲಿ ಸ್ಪರ್ಧೆಗೆ ಸಚಿವೆ ಉಮಾಶ್ರೀ ಚಾಲನೆ ನೀಡಿ ನಂತರ, 11.30ಕ್ಕೆ ಜೀವರಾಯನ ಕಟ್ಟೆ ಮೈದಾನದಲ್ಲಿ ಮಹಿಳಾ ದಸರಾ ಉದ್ಘಾಟಿಸಲಿದ್ದಾರೆ.

ವಿಶೇಷ ಕಾರ್ಯಕ್ರಮ
ಸೆ.22ರಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವಾ ಚಿಣ್ಣರ ದಸರಾಗೆ ಚಾಲನೆ ನೀಡಲಿದ್ದಾರೆ. ಪ್ರತಿದಿನವೂ ಬೆಳಿಗ್ಗೆ 10.30ರಿಂದ ಸಂಜೆವರೆಗೂ ಮಹಿಳೆಯರು, ಚಿಣ್ಣರು, ವಿಶೇಷ ಚೇತನ ಮಕ್ಕಳು, ಹಿರಿಯ ನಾಗರಿಕರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.












Click it and Unblock the Notifications