ದುಬಾರಿ ದಂಡ ವಿರೋಧಿಸಲು ಟ್ರಾಫಿಕ್ ಪೊಲೀಸ್ ಆದ ವಾಟಾಳ್ ನಾಗರಾಜ್!
Recommended Video
ಮೈಸೂರು, ಸೆಪ್ಟೆಂಬರ್ 9: ರೈಲ್ವೆ ನಿಲ್ದಾಣದ ಮುಂದೆ ಸಾಗುವ ವಾಹನ ಸವಾರರಿಗೆ ಇಂದು ಅಚ್ಚರಿಯೊಂದು ಕಾದಿತ್ತು. ಕಾರಣ, ಅಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಟ್ರಾಫಿಕ್ ಪೊಲೀಸ್ ಆಗಿ ದಂಡ ವಸೂಲಿ ಮಾಡುತ್ತಿದ್ದರು.
ಅರೆ, ವಾಟಾಳ್ ನಾಗರಾಜ್ ಯಾವಾಗ ಪೊಲೀಸ್ ಆದರು ಎಂದು ಗಾಬರಿಯಾಗಬೇಡಿ. ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರಿಗೆ ಹೆಚ್ಚಿನ ದಂಡ ವಿಧಿಸುವ ಆದೇಶದ ವಿರುದ್ಧ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರಿಂದ ಈ ರೀತಿ ವಿನೂತನ ಪ್ರತಿಭಟನೆ ನಡೆದಿದೆ.
ಟ್ರಾಫಿಕ್ ಪೊಲೀಸ್ ಸಮವಸ್ತ್ರ ಧರಿಸಿ ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಬಳಿ ವಾಹನ ಸವಾರರನ್ನು ತಪಾಸಣೆ ನಡೆಸುವ ಮೂಲಕ ವಾಟಾಳ್ ನಾಗರಾಜ್ ದಂಡ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದರು. ಸಾರ್ವಜನಿಕರೂ ಪ್ರತಿಭಟನೆಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಮೋಟಾರು ಕಾಯ್ದೆ ಯಮಪಾಶವಾಗಿದೆ. ಕೂಡಲೇ ಇದನ್ನು ರದ್ದುಪಡಿಸಬೇಕು. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ನಮ್ಮ ರಾಜ್ಯ ಸರ್ಕಾರವೂ ಇದನ್ನು ಜಾರಿಗೊಳಿಸಬಾರದಿತ್ತು. ಇದರಿಂದ ಜನರು ಭಯ ಪಟ್ಟು ವಾಹನ ಚಾಲನೆ ಮಾಡುವಂತಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವುದು ಬಡ ವರ್ಗದ ಮತ್ತು ಮಧ್ಯಮ ವರ್ಗದ ವಾಹನ ಸವಾರರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅರಿಯದೆ ಮಾಡಿದ ತಪ್ಪಿಗೂ ದುಬಾರಿ ದಂಡ ತೆರುವಂತಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ರಾತ್ರಿ ವೇಳೆ ವಾಹನ ಸಂಚಾರ ಆರಂಭವಾಗಬಾರದು" ಎಂದು ಆಗ್ರಹಿಸಿದರು.












Click it and Unblock the Notifications