'ಬಿಜೆಪಿ ಜತೆ ಸರಕಾರ ಮಾಡಿದ್ದ ಜೆಡಿಎಸ್ ಈಗ ಜಾತ್ಯತೀತವಾಗಿ ಉಳಿದಿಲ್ಲ'
ಮೈಸೂರು, ಮಾರ್ಚ್ 26: ಜೆಡಿಎಸ್ ಪಕ್ಷವು ಜಾತ್ಯತೀತವಾಗಿ ಉಳಿದಿಲ್ಲ. ಈ ಹಿಂದೆಯೇ ಬಿಜೆಪಿ ಜತೆ ಕೈ ಜೋಡಿಸಿ ಸರಕಾರ ನಡೆಸಿದ್ದಾರೆ. ಈ ಸಲವೂ ಬಿಜೆಪಿ ಜತೆಗೆ ಕೈ ಜೋಡಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ರಾಮಕೃಷ್ಣನಗರದ ಮನೆಯಲ್ಲಿ ಸೋಮವಾರ ಹೇಳಿದರು.
ಜೆಡಿಎಸ್ ಅಂದರೆ ಬಿಜೆಪಿಯ ಬಿ ಟೀಮ್ ಎಂದು ರಾಹುಲ್ ಗಾಂಧಿ ಟೀಕಿಸಿದ್ದನ್ನು ಸಮರ್ಥನೆ ಮಾಡಿಕೊಂಡ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ, ಜೆಡಿಎಸ್ ಅವಕಾಶವಾದಿ ಹಾಗೂ ಬಿಜೆಪಿಯು ಕೋಮುವಾದಿ ಎಂದು ಟೀಕಿಸಿದರು.
ಪಟ್ಟು ಹಾಕಿ ತೋರಿಸ್ತೀನಿ ಬನ್ನಿ ಎಂದು ಸಿಟ್ಟಿನಲ್ಲಿ ಸಿದ್ದುಗೆ ಗೌಡರ ಸವಾಲು
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಮೊದಲ ಹಂತದ ಅಭ್ಯರ್ಥಿಗಳ ಶಿಫಾರಸು ಸಭೆ ನಡೆಯಲಿದ್ದು, ಅಂತಿಮವಾಗಿ ಹೈ ಕಮಾಂಡ್ ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಜನಾಶೀರ್ವಾದ ಯಾತ್ರೆಗೆ ಆಗಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಎಂದು ಹೇಳಿದ ಸಿದ್ದರಾಮಯ್ಯ, ಮಲೆನಾಡು ಭಾಗದಲ್ಲಿ ಏಪ್ರಿಲ್ ಮೊದಲನೇ ವಾರ ರಾಹುಲ್ ಗಾಂಧಿ ಮೂರನೇ ಹಂತದ ಜನಾಶೀರ್ವಾದ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್ 6ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.