ಡಿಕೆಶಿ ಐಟಿ ದಾಳಿ: ಮೈಸೂರಿನಲ್ಲಿ ಇನ್ನೂ ಮುಗಿದಿಲ್ಲ ಪರಿಶೀಲನೆ!
ಮೈಸೂರು, ಆಗಸ್ಟ್ 3 : ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಐಟಿ ಅಧಿಕಾರಿಗಳು ಕಳೆದ 24ಗಂಟೆಗಳಿಂದಲೂ ನಡೆಸುತ್ತಿರುವ ದಾಳಿ ಇಂದೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಐಟಿ ಅಧಿಕಾರಿಗಳಿಗೆ ನಿನ್ನೆ ದಾಖಲೆಗಳನ್ನು ಪರಿಶೀಲಿಸಲು ಸಮಯ ಸಾಕಾಗದೆ ರಾತ್ರಿ ದಾಳಿ ಮಾಡಿದ್ದ ಮನೆಯಲ್ಲೇ ಉಳಿದು ಬೆಳಿಗಿನ ಜಾವದಿಂದ ಮತ್ತೆ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಮೈಸೂರು ಐಟಿ ದಾಳಿ: ಸದ್ಯದ ಅಪ್ಡೇಟ್ಸ್ ಇಲ್ಲಿದೆ
*ಅಧಿಕಾರಿಗಳು ಡಿಕೆಶಿ ಮಾವ ತಿಮ್ಮಯ್ಯ ನಿವಾಸದಲ್ಲಿ ಪರಿಶೀಲನೆ ಮುಂದುವರೆಸಿದ್ದು, ಐಟಿ ಸಹಾಯ ಕೋರಿ ಸ್ಥಳೀಯ ಪೊಲೀಸರನ್ನು ಕರೆಸಿಕೊಂಡಿದ್ದಾರೆ.
* ಐಟಿ ಅಧಿಕಾರಿಗಳ ಕರೆಯ ಮೇರೆಗೆ ಇಟ್ಟಿಗೆಗೂಡಿನಲ್ಲಿರುವ ತಿಮ್ಮಯ್ಯ ನಿವಾಸಕ್ಕೆ ನಜರ್ ಬಾದ್ ಪೊಲೀಸರು ಭೇಟಿ ನೀಡಿದ್ದು, ಐಟಿ ಅಧಿಕಾರಿಗಳ ಪರಿಶೀಲನೆಗೆ ಸಹಾಯ ಮಾಡುತ್ತಿದ್ದಾರೆ.
*ಇನ್ನೂ ತಿಮ್ಮಯ್ಯ ಅವರ ಆಪ್ತ ವಿಚಾರಣೆಗಾಗಿ ಎಡ್ವಿನ್ ಈಗ ಪೊಲೀಸರ ವಶದಲ್ಲಿದ್ದಾನೆ.
*ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಕರೆದೊಯ್ದಿದ್ದ ಡಿಕೆಶಿ ಬಾಮೈದ ಸತ್ಯನಾರಾಯಣ ಹಾಗೂ ಆತನ ಪತ್ನಿಯನ್ನು ಮನೆಗೆ ವಾಪಸ್ಸು ಕರೆತಂದಿದ್ದಾರೆ. ನಿನ್ನೆಯಿಂದಲೂ ಐಟಿ ಅಧಿಕಾರಿಗಳು ನಗರದ ವಿವಿಧ ಸ್ಥಳಗಳಿಗೆ ಕುಟುಂಬ ಸದಸ್ಯರನ್ನು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
* ವಿದ್ಯುತ್ ಸಂಪರ್ಕ ಇಲ್ಲವೆಂದು ತಿಮ್ಮಯ್ಯ ಅವರ ಕುಟುಂಬ ಸದಸ್ಯರಿಂದ ಕರೆ ಬಂದಿದ್ದ ಹಿನ್ನೆಲೆಯಲ್ಲಿ ಚೆಸ್ಕಾಂ ಸಿಬ್ಬಂದಿಗಳು ತಿಮ್ಮಯ್ಯ ಮನೆ ಬಳಿ ಬಂದು ಸರಿಪಡಿಸಿ ಐಟಿ ಅಧಿಕಾರಿಗಳ ಜತೆ ಮಾತನಾಡಿ ಸ್ಥಳದಿಂದ ತೆರಳಿದ್ದಾರೆ.
ಮೈಸೂರಿನ ಮಾವನ ಮನೆ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ನಿನ್ನೆ ತಡರಾತ್ರಿ 12 ಗಂಟೆಯವರೆಗೆ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳದ ಕಾರಣ ದಾಳಿ ಮಾಡಿದ ಮನೆಯಲ್ಲೇ ಅಧಿಕಾರಿಗಳು ನಿದ್ರೆಗೆ ಜಾರಿದ್ದರು.

ದೆಹಲಿಯಿಂದ ಆಗಮಿಸಿದ್ದ ಮುಖ್ಯ ಅಧಿಕಾರಿ ಮಾತ್ರ ರಾತ್ರಿ ಮನೆಯಿಂದ ನಿರ್ಗಮಿಸಿದ್ದರೆ ಉಳಿದ ಎಲ್ಲ ಐಟಿ ಅಧಿಕಾರಿಗಳು ರಾತ್ರಿ ಡಿಕೆಶಿ ಮಾವನ ಮನೆಯಲ್ಲಿ ಉಳಿದಿದ್ದರು. ಡಿಕೆಶಿ ಮಾವನ ಮನೆಯಲ್ಲಿರುವ ವ್ಯಕ್ತಿಗಳಿಗೆ ದಿಗ್ಬಂಧನ ಹಾಕಿರುವ ಅಧಿಕಾರಿಗಳು ತಿಮ್ಮಯ್ಯ ಮನೆಯಲ್ಲಿದ್ದ ಮಕ್ಕಳಿಗೆ ಮಾತ್ರ ನಿನ್ನೆ ಹಾಗೂ ಇಂದು ಶಾಲೆಗೆ ಹೋಗಲು ವಿನಾಯಿತಿ ನೀಡಿದ್ದಾರೆ.

ತಿಮ್ಮಯ್ಯನವರ ಮಗ ಸೊಸೆ ಮನೆಯಲ್ಲೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಯಾರನ್ನೂ ಮನೆ ಒಳಗೆ ಬಿಡದೆ, ಒಳಗಿರುವವರನ್ನ ಹೊರಗು ಕಳುಹಿಸದೆ ಪರಿಶೀಲನೆ ಮುಂದುವರಿಸಿದ್ದಾರೆ. ಮನೆಯಲ್ಲಿ ಮಹಿಳೆಯರು ಇದ್ದ ಕಾರಣ ಮಹಿಳಾ ಪೊಲೀಸ್ ಮನೆಯಲ್ಲೆ ವಾಸ್ತವ್ಯ ಹೂಡಿದ್ದರು. ಅಧಿಕಾರಿಗಳ ಜೊತೆ ಮಹಿಳಾ ಪೊಲೀಸ್, ಪುರುಷ ಪೊಲೀಸ್ ಅಧಿಕಾರಿ ಸಹ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು.

ಇಂದು ಮನೆಯಲ್ಲಿ ರೆಡ್ ಗಾಗಿ ಬಂದಿರುವ ದೆಹಲಿ ಐಟಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಸಿಕ್ಕಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸಿಎಂ ತವರು ಜಿಲ್ಲೆಯಲ್ಲಿ ಡಿಕೆಶಿಗೆ ಬೆನಾಮಿ ಆಸ್ತಿ ಇದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ತಿಮ್ಮಯ್ಯ ನಿವಾಸದಲ್ಲಿರುವ ದಾಖಲೆಗಳನ್ನು ಲಿಸ್ಟ್ ಮಾಡಿಕೊಂಡು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನನಗೆ ಯಾರೂ ತೊಂದರೆ ಕೊಟ್ಟಿಲ್ಲ:
ಐಟಿ ದಾಳಿಗೆ ಸಂಬಂಧಿಸಿದಂತೆ ಮಾತನಾಡಿದ ತಿಮ್ಮಯ್ಯ ಅವರು, ನಿನ್ನೆ ಬೆಳಿಗ್ಗೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಮಗೆ ಯಾವುದೇ ತೊಂದರೆ ನೀಡದೆ ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರಿಗೆ ಸಹಕಾರ ನೀಡಿದ್ದೇನೆ. ಸೀಗೆ ಪುಡಿ ಕಾರ್ಖಾನೆಯ ಬಗ್ಗೆ ಮಾಹಿತಿ ಕೇಳಿದ್ದರು. ಅದನ್ನು ವಿವರಿಸಿದ್ದೇನೆ ಎಂದರು.












Click it and Unblock the Notifications